ಶಿಕ್ಷಣದಿಂದ ಮಕ್ಕಳು ವಂಚಿತರಾಗದಂತೆ ನೋಡಿಕೊಳ್ಳಿ

| Published : Dec 19 2023, 01:45 AM IST

ಸಾರಾಂಶ

ಶಿಕ್ಷಕರು ಪ್ರಾಮಾಣಿಕವಾಗಿ ಬೋಧನೆಯತ್ತ ತೊಡಗಬೇಕು

ಕನ್ನಡಪ್ರಭ ವಾರ್ತೆ ತೇರದಾಳ (ರ-ಬ)

ಇಂದು ಶಿಕ್ಷಣದ ಗುಣಮಟ್ಟ ಉನ್ನತ ದರ್ಜೆಗೇರಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಗುಣಮಟ್ಟದ, ವಿಶ್ವದರ್ಜೆಯ ಶಿಕ್ಷಣ ನೀಡುತ್ತಿವೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.

ಸೋಮವಾರ ತೇರದಾಳದ ಜಿನಸೇನಾಚಾರ್ಯ ಸಭಾಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಜಮಖಂಡಿ, ಶ್ರೀಜಿನಸೇನಾಚಾರ್ಯ ವಿದ್ಯಾಮಂಡಳ ತೇರದಾಳ ಮತ್ತು ಕನ್ನಡ ಸಾಹಿತ್ಯ ಪರಿಷತ್ ತೇರದಾಳ ಸಂಯುಕ್ತಾಶ್ರಯದಲ್ಲಿ ನಡೆದ ಕನ್ನಡ ಸಾಧಕರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದು ಅರ್ಹತಾ ಪರೀಕ್ಷೆಗಳ ಮೂಲಕ ನೇಮಕವಾಗುವ ಪ್ರತಿಭಾವಂತ ಶಿಕ್ಷಕರಿಂದ ಶಿಕ್ಷಣ ಕ್ಷೇತ್ರದಲ್ಲಿ ದಾಖಲೆಯ ಸಾಧನೆ ಸಾಧ್ಯವಾಗುತ್ತಿದೆ. ಸರ್ವ ಪ್ರಗತಿಗೂ ಶಿಕ್ಷಣವೇ ಮೂಲಾಧಾರ ಎಂದು ಅರಿತಿರುವ ಪಾಲಕರು ಸಹ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಶ್ರಮಿಸುತ್ತಿದ್ದಾರೆ ಎಂದರು.

ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಇಲಾಖೆ, ಶಿಕ್ಷಕರು ನೋಡಿಕೊಳ್ಳಬೇಕು. ಶಿಕ್ಷಕರು ರಾಜಕೀಯ ಮಾಡದೇ ಪ್ರಾಮಾಣಿಕವಾಗಿ ಬೋಧನೆಯತ್ತ ತೊಡಗಬೇಕು. ದೇಶ ಇಂದು ಸಂಪೂರ್ಣ ಸಾಕ್ಷರತೆ ಸಾಧಿಸುವತ್ತ ದಾಪುಗಾಲಿಡುತ್ತಿದೆ. ನಮ್ಮ ಮಕ್ಕಳು ಪ್ರಪಂಚದಾದ್ಯಂತ ಎಲ್ಲೆಡೆ ತಮ್ಮ ಜ್ಞಾನದ ಬಲದಿಂದ ದೇಶದ ಕೀರ್ತಿ ಹೆಚ್ಚಿಸುತ್ತಿದ್ದಾರೆ. ಐಎಎಸ್, ಐಪಿಎಸ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ನಮ್ಮ ಮಕ್ಕಳು ಮುಂದಿದ್ದಾರೆ. ಸರ್ಕಾರದ ಸೌಲಭ್ಯಗಳು ಬಡವರಿಗೆ ದೊರೆತು ಅವರೂ ಮುಖ್ಯ ಪ್ರವಾಹಿನಿಯಲ್ಲಿ ತೊಡಗುವತ್ತ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.

ಪ್ರಾಸ್ತಾವಿಕ ಮಾತುಗಳಾಡಿದ ಶಿಕ್ಷಣ ಸಂಯೋಜಕ ಶ್ರೀಶೈಲ ಬುರ್ಲಿ, ಅವಿಭಜಿತ ಜಮಖಂಡಿ ತಾಲೂಕಲ್ಲಿ ಒಟ್ಟು 229 ಮಕ್ಕಳು ಗರಿಷ್ಠ ಅಂಕಗಳನ್ನು ಪಡೆದಿದ್ದಾರೆ. ರಬಕವಿ-ಬನಹಟ್ಟಿ ಹಾಗೂ ತೇರದಾಳ ತಾಲೂಕಿನ 121 ಮಕ್ಕಳು ಗರಿಷ್ಠ ಸಾಧನೆ ಮೆರೆದಿದ್ದಾರೆ. ಒಟ್ಟು 31 ಶಾಲೆಗಳ 34 ಕನ್ನಡ ವಿಷಯ ಬೋಧಕರಿಗೆ ಗುರುಮಾತೆ ಡಾ.ಶಾರದಾ ಮುಳ್ಳೂರ ತಲಾ ಒಂದು ಸಾವಿರ ನಗದು ಬಹುಮಾನ ನೀಡಿ ಮುಂದಿನ ಬಾರಿ ಇನ್ನಷ್ಟು ಸಾಧನೆ ಮೆರೆಯಲೆಂದು ಪ್ರೊತ್ಸಾಹಿಸಿದ್ದಾರೆ ಎಂದರು.

ಸಾನ್ನಿಧ್ಯ ವಹಿಸಿದ್ದ ರಬಕವಿಯ ಶ್ರೀಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರಶ್ರೀಗಳು ಮಾತಾಡಿ, ದೇಶದೆಲ್ಲೆಡೆ ಶಿಕ್ಷಣಕ್ಕೆ ಪ್ರಾತಿನಿಧ್ಯತೆ ಸಿಗುತ್ತಿದೆ. ವಿಶ್ವಮಟ್ಟದಲ್ಲಿ ಸಾಧನೆ ಮೆರೆಯುವ ಪ್ರತಿಭೆಗಳನ್ನು ಭಾರತ ನಿರಂತರವಾಗಿ ನೀಡುತ್ತಿದೆ. ಜ್ಞಾನದ ಬರ ಈ ದೇಶಕ್ಕೆ ಎಂದಿಗೂ ಬಂದಿಲ್ಲ. ಜ್ಞಾನ - ವಿಜ್ಞಾನಗಳ ಮಿಶ್ರಣವೇ ಭಾರತೀಯರ ಪ್ರಾಚೀನ ಶಿಕ್ಷಣದ ಮೂಲದ್ರವ್ಯವಾಗಿದೆ. ಆಧುನಿಕತೆಯ ಸ್ಪರ್ಶದಲ್ಲಿ ಮತ್ತು ಮೂಲಭೂತ ಸೌಕರ್ಯಗಳ ಹೆಚ್ಚಳದಿಂದ ಇಂದಿನ ಮಕ್ಕಳು ಕಲಿಕೆಯಲ್ಲಿ ಮುಂದಿದ್ದಾರೆ ಎಂದರು.

ಈ ವೇಳೆ ಜೆವಿ ಮಂಡಳದ ಅಧ್ಯಕ್ಷ ಡಿ.ಆರ್‌.ಪಾಟೀಲ, ಡಾ.ಜೆ.ಬಿ.ಆಲಗೂರ, ಬಿಇಒ ಅಶೋಕ ಬಸನ್ನವರ, ರಮೇಶ ಅವಟಿ, ಪ್ರವೀಣ ನಾಡಗೌಡ, ಎಂ.ಪಿ.ಅಸ್ಕಿ, ಪಿ.ಜಿ.ಹಟ್ಟಿ, ಪಿ.ಡಿ. ಬದನಿಕಾಯಿ, ಗಂಗಾಧರ ಮೋಪಗಾರ, ಮ.ಕೃ.ಮೇಗಾಡಿ, ಬಿ.ಎಸ್. ಕಡಕೋಳ, ಬಾಬಾಗೌಡ ಪಾಟೀಲ, ಎಸ್.ಎಂ.ಹರಗೆ, ಡಿ.ಬಿ.ಪಾಟೀಲ ಇದ್ದರು.

ಕಾರ್ಯಕ್ರಮದಲ್ಲಿ ಶಿಕ್ಷಕ-ಸಾಹಿತಿ ಡಾ.ರೇವಣಸಿದ್ದಪ್ಪ ಗೌಡರ ಬರೆದ ಬ್ರಾಂಡೆಡ್ ಆತ್ಮಗಳು, ಲೋಕಲ್ ಆತ್ಮಗಳು ಕೃತಿ ಬಿಡುಗಡೆ ಮಾಡಲಾಯಿತು. ರಬಕವಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರ ಶ್ರೀ ಸಾನ್ನಿಧ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125 ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ, ಕನ್ನಡ ಬೋಧಕರಿಗೆ ಕ್ರಮವಾಗಿ ಕನ್ನಡ ಕಣ್ಮಣಿ, ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್.ಎನ್.ಹೆಬ್ಬಾಳೆ ಸ್ವಾಗತಿಸಿದರು. ಕೆ.ಎ.ಸಾವಂತನವರ ನಿರೂಪಿಸಿದರು. ಎಂ.ಬಿ.ಯಾತಗಿರಿ ವಂದಿಸಿದರು.

-------

ಫೋಟೊ-೧೮ಆರ್‌ಬಿಕೆ೨/