ಗುಣಮಟ್ಟವಿಲ್ಲದ ಕಾಮಗಾರಿ ಸ್ಥಗಿತಕ್ಕೆ ಸೂಚಿಸಿದ ಶಾಸಕ ಸುರೇಶ್‌

| Published : Jan 08 2025, 12:15 AM IST

ಗುಣಮಟ್ಟವಿಲ್ಲದ ಕಾಮಗಾರಿ ಸ್ಥಗಿತಕ್ಕೆ ಸೂಚಿಸಿದ ಶಾಸಕ ಸುರೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಆರೋಗ್ಯ ಇಲಾಖೆಯಿಂದ ನಿರ್ಮಿಸುತ್ತಿರುವ ಸೆಂಟ್ರಲ್ ಲ್ಯಾಬ್ ಕಟ್ಟಡ ಹಾಗೂ ವೈದ್ಯರ ೪ ವಸತಿಗೃಹಗಳ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಆರೋಪಿಸಿ ಕಾಮಗಾರಿ ಸ್ಥಗಿತಗೊಳಿಸುವಂತೆ ಶಾಸಕ ಎಚ್.ಕೆ.ಸುರೇಶ್ ಸೂಚನೆ ನೀಡಿದರು. ಸ್ಥಳಕ್ಕೆ ತೆರಳಿದಾಗ ಕಾರ್ಮಿಕರಷ್ಟೇ ಕೆಲಸ ಮಾಡುತ್ತಿದ್ದಾರೆಯೇ ಹೊರತು ಉಸ್ತುವಾರಿ ನೋಡಿಕೊಳ್ಳುವ ಯಾರೊಬ್ಬರೂ ಇರಲಿಲ್ಲ. ಹೀಗಾದರೆ ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ಮಾಡುವ ಕೆಲಸ ಗುಣಮಟ್ಟ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಆರೋಗ್ಯ ಇಲಾಖೆಯಿಂದ ನಿರ್ಮಿಸುತ್ತಿರುವ ಸೆಂಟ್ರಲ್ ಲ್ಯಾಬ್ ಕಟ್ಟಡ ಹಾಗೂ ವೈದ್ಯರ ೪ ವಸತಿಗೃಹಗಳ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಆರೋಪಿಸಿ ಕಾಮಗಾರಿ ಸ್ಥಗಿತಗೊಳಿಸುವಂತೆ ಶಾಸಕ ಎಚ್.ಕೆ.ಸುರೇಶ್ ಸೂಚನೆ ನೀಡಿದರು.

ಆಸ್ಪತ್ರೆಗೆ ಭೇಟಿ ನೀಡಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಎರಡೂ ಕಟ್ಟಡಗಳ ಕಾಮಗಾರಿ ಕಳಪೆಯಿಂದ ಕೂಡಿದೆ. ಆರೋಗ್ಯ ಇಲಾಖೆಯ ಈ ಕಾಮಗಾರಿ ನಿರ್ವಹಣೆಯನ್ನು ಕೆಎಚ್‌ಆರ್‌ಡಿಪಿ ಸಂಸ್ಥೆಗೆ ನೀಡಲಾಗಿದೆ. ಆದರೆ ಆ ಸಂಸ್ಥೆಯ ಎಂಜಿನಿಯರ್‌ಗಳು ಸ್ಥಳದಲ್ಲಿ ಇರದೆ, ಕಾಮಗಾರಿ ಗುಣಮಟ್ಟ ಪರಿಶೀಲಿಸದೆ ಕಳಪೆಗೆ ಕಾರಣರಾಗಿದ್ದಾರೆ. ಸ್ಥಳಕ್ಕೆ ತೆರಳಿದಾಗ ಕಾರ್ಮಿಕರಷ್ಟೇ ಕೆಲಸ ಮಾಡುತ್ತಿದ್ದಾರೆಯೇ ಹೊರತು ಉಸ್ತುವಾರಿ ನೋಡಿಕೊಳ್ಳುವ ಯಾರೊಬ್ಬರೂ ಇರಲಿಲ್ಲ. ಹೀಗಾದರೆ ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ಮಾಡುವ ಕೆಲಸ ಗುಣಮಟ್ಟ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.ಕಟ್ಟಡ ನಿರ್ಮಾಣದ ಸ್ಥಳಕ್ಕೆ ತೆರಳಿ ಲ್ಯಾಬ್ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕರಿಗೆ ಕೆಲಸ ಮಾಡದಂತೆ ಸೂಚಿಸಿದ ಶಾಸಕರು, ವೈದ್ಯಾಧಿಕಾರಿಗಳ ವಸತಿಗೃಹಗಳ ಕಾಮಗಾರಿ ಸಮರ್ಪಕವಾಗಿರದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ತರಾಟೆ ತೆಗೆದುಕೊಂಡರು. ಅಧಿಕಾರಿಗಳು ನೀಡುತ್ತಿದ್ದ ಸಮಜಾಯಿಷಿಗೂ ಆಗಿರುವ ಕೆಲಸಕ್ಕೂ ಸಾಮ್ಯತೆ ಇಲ್ಲದಿರುವುದಕ್ಕೆ ಶಾಸಕರು ಆಕ್ಷೇಪಿಸಿದರು. ಈ ಬಗ್ಗೆ ಆರೋಗ್ಯ ಸಚಿವರಿಗೆ, ಮುಖ್ಯಮಂತ್ರಿಗೆ ಪತ್ರ ಬರೆಯುವುದಲ್ಲದೆ, ಸದನದಲ್ಲಿ ಚರ್ಚಿಸುವುದಾಗಿ ತಿಳಿಸಿದರು. ಈ ಸಂದರ್ಭ ಆಸ್ಪತ್ರೆ ವೈದ್ಯಾಧಿಕಾರಿ ಸುಧಾ, ಇತರರು ಇದ್ದರು.