ಕನ್ನಡಪ್ರಭ ವಾರ್ತೆ ಪಾವಗಡ
ತಾಲೂಕಿನ ಕೋಡಿಗೆಹಳ್ಳಿ ಗ್ರಾಮ ಹೊರವಲಯದ ಬಿಸಿಎಂ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶಾಸಕ ಹಾಗೂ ತುಮುಲ್ ಅಧ್ಯಕ್ಷರಾದ ಎಚ್.ವಿ.ವೆಂಕಟೇಶ್ ಭೇಟಿ ನೀಡಿ ಸೌಲಭ್ಯ ಹಾಗೂ ಸಮಸ್ಯೆ ಕುರಿತು ವಿದ್ಯಾರ್ಥಿಗಳ ಜತೆ ಚರ್ಚಿಸಿದರು.ವಿಷಯವಾರು ಶಿಕ್ಷಕರ ಸಂಖ್ಯೆ, ವಿದ್ಯಾರ್ಥಿಗಳ ಸಂಖ್ಯೆ ಹಾಜರಾತಿ ಪರಿಶೀಲನೆ ನಡೆಸಿದ ಬಳಿಕ ಕಳೆದ ಮೂರು ವರ್ಷದ ಎಸ್ ಎಸ್ ಎಲ್ಸಿ ಪರೀಕ್ಷಾ ಫಲಿತಾಂಶ, ಈ ಭಾರಿಯ ಪರೀಕ್ಷಾ ಸಿದ್ದತೆ, ವಿದ್ಯಾರ್ಥಿಗಳಿಗೆ ಭೋದಿಸುವ ಪಾಠಪ್ರವಚನ ಕುರಿತು ಪ್ರಾಂಶುಪಾಲ ಹಾಗೂ ಶಿಕ್ಷಕರಿಂದ ಮಾಹಿತಿ ಸಂಗ್ರಹಿಸಿದರು.ಬಳಿಕ ಮಾತನಾಡಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ,ಸರ್ಕಾರದ ಸೌಲಭ್ಯ ಸರಿಯಾದ ರೀತಿಯಲ್ಲಿ ತಲುಪಬೇಕು. ಶಿಸ್ತು ಸಂಸ್ಕಾರದ ಜತೆಗೆ ವಿದ್ಯಾರ್ಥಿಗಳಿಗೆ ಉತ್ತಮ ಭೋದನೆಯ ಮೂಲಕ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಹೆಚ್ಚಿಗೆ ಬರಬೇಕು. ಶಿಕ್ಷಣ, ಸೌಲಭ್ಯ ಕುರಿತು ವಿದ್ಯಾರ್ಥಿಗಳಿಗೆ ವಂಚನೆಯಾದರೆ, ಉಸ್ತುವಾರಿದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶಿಸುವುದಾಗಿ ಎಚ್ಚರಿಸಿದರು. ಇಲ್ಲಿನ ಸಮಸ್ಯೆ ಕುರಿತು ಅಲಿಸಿದ ನಂತರ ಶೀಘ್ರದಲ್ಲಿಯೇ ವಸತಿ ಶಾಲೆಗೆ ಬೇಕಾದ ಹೈಮಾಸ್ಟ್ ಲೈಟ್, ಸಭಾಂಗಣ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವ ಭರವಸೆ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಹಾಗೂ ಧೈರ್ಯ ತುಂಬಿದರು.ಇದೇ ವೇಳೆ ಸ್ಥಳೀಯ ಮುಖಂಡರಾದ ಕರಿಯಣ್ಣ, ಜಿನೇಶ್ ಬಾಬು,ಮಲ್ಲಣ್ಣ, ಶ್ರೀನಿವಾಸ್, ಆನಂದಗೌಡ, ಎಸ್.ಐ.ಗೋವಿಂದಪ್ಪ, ಕೃಷ್ಣಪ್ಪ ಶಾಲೆಯ ಶಿಕ್ಷಕರಾದ ನರಸಿಂಹ ಮೂರ್ತಿ, ಸುಬ್ರಮಣಿ ನಾಯ್ಕ್, ನಾಗೇಂದ್ರಯ್ಯ, ಮಂಜುನಾಥ್, ವಿ.ಎಚ್.ಪಾಳ್ಯ ಪಾಪಣ್ಣ,ಅನಂತ ಇತರರಿದ್ದರು.