ಅಧಿವೇಶದಲ್ಲಿ ಜಿಲ್ಲೆಯ ಶಾಸಕರು ಧ್ವನಿ ಎತ್ತಿ: ರೈತ ಸಂಘದ ಎ.ಗೋವಿಂದರಾಜು

| Published : Dec 08 2024, 01:20 AM IST

ಅಧಿವೇಶದಲ್ಲಿ ಜಿಲ್ಲೆಯ ಶಾಸಕರು ಧ್ವನಿ ಎತ್ತಿ: ರೈತ ಸಂಘದ ಎ.ಗೋವಿಂದರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಶಾಸಕರು ಪಕ್ಷಭೇಧ ಮರೆತು ಚಳಿಗಾಲದ ಅಧಿವೇಶನದಲ್ಲಿ ಇದರ ವಿರುದ್ದ ಧ್ವನಿ ಎತ್ತಬೇಕೆಂದು ಆಗ್ರಹಿಸಿ ಶನಿವಾರ ಸಂಯುಕ್ತ ಹೋರಾಟ-ಕರ್ನಾಟಕ ತುಮಕೂರು ಜಿಲ್ಲಾ ಘಟಕದ ವತಿಯಿಂದ ಕಪ್ಪುಪಟ್ಟಿ ಧರಿಸಿ ಧರಣಿ ನಡೆಸಲಾಯಿತು. ರೈತ ಮುಖಡರ ನೇತೃತ್ವದಲ್ಲಿ ತುಮಕೂರಿನ ಸ್ವಾತಂತ್ರ್ಯ ಚೌಕದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ತೋಳಿಗೆ ಕಪ್ಪುಪಟ್ಟಿ ಧರಿಸಿ, ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳ ಕಚೇರಿ ಬಳಿ ಧರಣಿ ಸತ್ಯಾಗ್ರಹ ನಡೆಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಜಿಲ್ಲೆಗೆ ಮರಣ ಶಾಸನವಾಗಿರುವ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಯನ್ನು ಸರಕಾರ ಕೂಡಲೇ ನಿಲ್ಲಿಸಬೇಕು. ಜಿಲ್ಲೆಯ ಶಾಸಕರು ಪಕ್ಷಭೇಧ ಮರೆತು ಚಳಿಗಾಲದ ಅಧಿವೇಶನದಲ್ಲಿ ಇದರ ವಿರುದ್ದ ಧ್ವನಿ ಎತ್ತಬೇಕೆಂದು ಆಗ್ರಹಿಸಿ ಶನಿವಾರ ಸಂಯುಕ್ತ ಹೋರಾಟ-ಕರ್ನಾಟಕ ತುಮಕೂರು ಜಿಲ್ಲಾ ಘಟಕದ ವತಿಯಿಂದ ಕಪ್ಪುಪಟ್ಟಿ ಧರಿಸಿ ಧರಣಿ ನಡೆಸಲಾಯಿತು.

ಸಂಯುಕ್ತ ಹೋರಾಟ-ಕರ್ನಾಟಕದ ಸಂಚಾಲಕ ಸಿ.ಯತಿರಾಜು, ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಪ್ರಾಂತ ರೈತ ಸಂಘದ ಬಿ.ಉಮೇಶ್, ಎಐಕೆಎಸ್‌ನ ಗಿರೀಶ್, ಎಐಕೆಕೆಎಸ್‌ನ ಎಸ್.ಎನ್.ಸ್ವಾಮಿ ಹಾಗೂ ಇತರೆ ರೈತ ಮುಖಡರ ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಚೌಕದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ತೋಳಿಗೆ ಕಪ್ಪುಪಟ್ಟಿ ಧರಿಸಿ,ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳ ಕಚೇರಿ ಬಳಿ ಧರಣಿ ಸತ್ಯಾಗ್ರಹ ನಡೆಸಿದರು.

ಈ ವೇಳೆ ಮಾತನಾಡಿದ ರೈತ ಸಂಘದ ಎ.ಗೋವಿಂದರಾಜು, ಜಿಲ್ಲೆಯ ಹಲವಾರು ಹಿರಿಯರ ಹೋರಾಟದ ಫಲವಾಗಿ ಹೇಮಾವತಿ ನೀರು ತುಮಕೂರು ಜಿಲ್ಲೆಗೆ ಹರಿದಿದೆ. ಆದರೆ ಕುಣಿಗಲ್ ತಾಲೂಕು ತೋರಿಸಿ, ನಮ್ಮ ಜಿಲ್ಲೆಯ ನೀರನ್ನು ಕದಿಯುವ ಪ್ರಯತ್ನವನ್ನು ಸರಕಾರ ಮಾಡುತ್ತಿದೆ. ಆರಂಭದಲ್ಲಿ ಇದನ್ನು ವಿರೋಧಿಸಿ, ಜಿ.ಪಂ. ಕೆಡಿಪಿ ಸಭೆಯಲ್ಲಿ ನಿರ್ಣಯ ಮಂಡಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ಈಗ ಸರಕಾರದ ನಿರ್ಧಾರಕ್ಕೆ ಬದ್ದ ಎಂದು ಹೇಳುವ ಮೂಲಕ ಇಡೀ ಜಿಲ್ಲೆಯ ರೈತರು ಮತ್ತು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ ಎಂದರು

ಸರಕಾರ ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ಯೋಜನೆಯಿಂದ ಹಿಂದೆ ಸರಿಯದಿದ್ದರೆ, ಮುಂಬರುವ ಜಿ.ಪಂ., ತಾ.ಪಂ. ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆ ಗಳಲ್ಲಿ ರೈತರು ಸರಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ಕಳೆದ ಎಂಟು ತಿಂಗಳಿನಿಂದ ವಿವಿಧ ಹಂತದ ಹೋರಾಟಗಳು ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ನಡೆಯುತ್ತಿವೆ. ಅಂದಿನಿಂದಲೂ ಜಿಲ್ಲಾಡಳಿತ ರೈತರು, ಸಾರ್ವಜನಿಕರೊಂದಿಗೆ ಮಾತುಕತೆ ನಡೆಸುವಂತೆ ಒತ್ತಾಯ ಮಾಡುತ್ತಲೇ ಬಂದಿದ್ದರೂ ಕಣ್ಣು, ಕಿವಿ ಇಲ್ಲದಂತೆ ವರ್ತಿಸುತ್ತಿದೆ ಎಂದರು.

ಸರಕಾರ ಕೂಡಲೇ ಯೋಜನೆಯನ್ನು ಕೈಬಿಡಬೇಕು. ಹಾಗೆಯೇ ಜಿಲ್ಲೆಯ ಎಲ್ಲಾ ಶಾಸಕರು, ಸಚಿವರು ಪಕ್ಷ ಬೇಧ ಮರೆತು ಚಳಿಗಾಲದ ಅಧಿವೇಶನದಲ್ಲಿ ಧ್ವನಿಎತ್ತಿ ಜಿಲ್ಲೆಯ ಹಿತ ಕಾಯಬೇಕೆಂದು ಎ.ಗೋವಿಂದರಾಜು ಆಗ್ರಹಿಸಿದರು.

ಸಂಯುಕ್ತ ಹೋರಾಟದ ಸಂಚಾಲಕ ಸಿ.ಯತಿರಾಜು ಮಾತನಾಡಿ, ಜನರಿಗೆ ನೀರು ಪ್ರಾಥಮಿಕ ಆದ್ಯತೆ. ಕುಡಿಯಲು ಮತ್ತು ಕೃಷಿಗೆ ನೀರು ಅತಿ ಅವಶ್ಯ. ಆದರೆ ಆಳುವ ಸರಕಾರಗಳ ಇಚ್ಛಾಶಕ್ತಿಯ ಕೊರತೆಯಿಂದ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಸರಕಾರ ಇದನ್ನು ಖಾತ್ರಿ ಪಡಿಸಿಲ್ಲ. ಚುನಾವಣಾ ಗಿಮಿಕ್‌ಗಳಾಗಿ ನೀರಾವರಿ ಯೋಜನೆಗಳು ಬಳಕೆಯಾಗುತ್ತಿವೆ. ಇದರಿಂದ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲೆ, ಜಿಲ್ಲೆಗಳ ನಡುವೆ ಜಗಳಕ್ಕೆ ಕಾರಣವಾಗಿದೆ. ಹೇಮಾವತಿ ನಾಲೆಯಿಂದ ಜಿಲ್ಲೆಗೆ ನಿಗದಿಪಡಿಸಿರುವ ಪ್ರಮಾಣದ ಸಂಪೂರ್ಣ ನೀರು, ಯೋಜನೆ ಪ್ರಾರಂಭವಾಗಿ 40 ವರ್ಷ ಕಳೆದರೂ ಒಮ್ಮೆಯೂ ಹರಿದಿಲ್ಲ. ಹೀಗಿರುವಾಗ, ಮೂಲನಾಲೆಯ ಅರ್ಧ ಭಾಗದಿಂದ ನೀರು ತೆಗೆದುಕೊಂಡು ಹೋಗುವ ಮೂಲಕ ಇಡೀ ಜಿಲ್ಲೆಗೆ ಅನ್ಯಾಯ ಎಸಗಲಾಗುತ್ತಿದೆ. ಇದರ ವಿರುದ್ಧ ರೈತರು, ಸಾರ್ವಜನಿಕರು ಧ್ವನಿ ಎತ್ತಬೇಕಾಗಿದೆ ಎಂದರು.

ಪ್ರಾಂತ ರೈತ ಸಂಘದ ಬಿ.ಉಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ,ತುಮಕೂರು ಜಿಲ್ಲೆಗೆ ಹೇಮಾವತಿ ಹರಿಯುವಲ್ಲಿ ಕೆಲವರ ಶ್ರಮವಿದೆ. ಆದರೆ ಕೆಲ ಶಾಸಕರು ಸ್ವಯಂ ಘೋಷಿತ ಭಗೀರಥರಾಗಿದ್ದಾರೆ. ಎಕ್ಸ್‌ ಪ್ರೆಸ್‌ ಕೆನಾಲ್ ಸಾಧಕ, ಬಾಧಕಗಳ ಕುರಿತು ತಾಂತ್ರಿಕ ವರದಿಯನ್ನು ಜನಸಾಮಾನ್ಯರಿಂದ ಮುಚ್ಚಿಟ್ಟು ಕಾಮಗಾರಿ ಮಾಡಲು ಹೊರಟಿರುವುದು ಸರಿಯಲ್ಲ. ಎಕ್ಸ್‌ ಪ್ರೆಸ್‌ ಕೆನಾಲ್ ಆರಂಭಗೊಂಡರೇ, ಮೊದಲ ಬಲಿಪಶು ತುಮಕೂರು ನಗರ. ಹಾಗಾಗಿ ಜನರು ಹೆಚ್ಚಿನ ರೀತಿಯಲ್ಲಿ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು. ಮುಷ್ಕರದಲ್ಲಿ ರೈತ ಮುಖಂಡರಾದ ಎಸ್.ಎನ್.ಸ್ವಾಮಿ, ಜಿ.ಶಂಕರಪ್ಪ,ಗಿರೀಶ್, ಕಂಬೇಗೌಡ, ಸೈಯದ್ ಮುಜೀಬ್ ಸೇರಿದಂತೆ ಹಲವು ನಾಯಕರು ಮಾತನಾಡಿದರು. ರೈತ ಸಂಘದ ಚಿಕ್ಕಬೋರೇಗೌಡ, ಗುಬ್ಬಿಯ ಲೋಕೇಶ್, ಕೊರಟಗೆರೆಯ ಶಬ್ಬೀರ್, ಮಹಿಳಾ ಘಟಕದ ನಾಗರತ್ನಮ್ಮ, ಭಾಗ್ಯಮ್ಮ, ಅಜ್ಜಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.