ಕನ್ನಡಪ್ರಭ ವಾರ್ತೆ ಮೈಸೂರುನಗರದ ಎಂಎಂಕೆ ಮತ್ತು ಎಸ್‌.ಡಿ.ಎಂ ಕಾಲೇಜಿನಲ್ಲಿ ಸಾಹಿತ್ಯ, ಭಾಷೆ, ಸಂಸ್ಕೃತಿ ಮತ್ತು ಸಿನಿಮಾದ ಇತ್ತೀಚಿನ ಬೆಳವಣಿಗೆ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿತ್ತು.ಕಾರ್ಯಕ್ರಮ ಉದ್ಘಾಟಿಸಿದ ಗುಜರಾತ್‌ ವಿವಿ ಪ್ರಾಧ್ಯಾಪಕ ಡಾ. ದುಷ್ಯಂತ್‌ ನಿಮಾವತ್‌ ಮಾತನಾಡಿ, ಪರಿಸರ ಸಂಕಟ ಎದುರಿಸುವಲ್ಲಿ ಸಾಹಿತ್ಯ ಮಹತ್ವದ ಪಾತ್ರ ಮತ್ತು ಪರಿಸರ ಜಾಗೃತಿಯ ಅಗತ್ಯವಿದೆ ಎಂದರು.ದಿಕ್ಸೂಚಿ ಭಾಷಣ ಮಾಡಿದ ವಾರಾಣಸಿ ಹಿಂದೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಆರ್ತಿ ನಿರ್ಮಲ್, ಪರಿಸರ ಅಧ್ಯಯನಗಳಲ್ಲಿ ಅಂತರ ಶಾಸ್ತ್ರೀಯ ದೃಷ್ಟಿಕೋನದ ಅಗತ್ಯತೆ ಹಾಗೂ ಗ್ರಹ ಮಟ್ಟದ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಸಾಹಿತ್ಯ, ಸಂಸ್ಕೃತಿ ಮತ್ತು ಮಾಧ್ಯಮ ಅಧ್ಯಯನಗಳ ಸಮನ್ವಯದ ಮಹತ್ವವನ್ನು ತಿಳಿಸಿಕೊಟ್ಟರು.ಕಾಲೇಜಿನ ಪ್ರಾಂಶುಪಾಲೆ ಪ್ರೊ.ಎನ್‌. ಭಾರತಿ ಮಾತನಾಡಿ, ಸಮಕಾಲೀನ ಜಾಗತಿಕ ಸಮಸ್ಯೆ ಪರಿಹರಿಸಲು ಶೈಕ್ಷಣಿಕ ಸಹಕಾರ, ಸಂಶೋಧನಾಮುಖ ಅಧ್ಯಯನ ಮತ್ತು ಸಾಮಾಜಿಕ ಹೊಣೆಗಾರಿಕೆಯ ಅಗತ್ಯತೆ ಪ್ರತಿಪಾದಿಸಿದರು. ಐಕ್ಯೂಎಸಿ ಸಂಯೋಜಕಿ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ ಕೆ.ಎಸ್. ಸುಕೃತಾ ವಂದಿಸಿದರು.ತಾಂತ್ರಿಕ ಅಧಿವೇಶನಗಳಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಗಣ್ಯರು ಉಪನ್ಯಾಸ ನೀಡಿದರು. ಶಿಲ್ಲಾಂಗ್‌ ನ ನಾರ್ತ್- ಈಸ್ಟರ್ನ್ ಹಿಲ್ ಯುನಿವರ್ಸಿಟಿನ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸೆಟೋಲು ಟುನ್ಯಿ ಅವರು ವಾತಾವರಣದಲ್ಲಿನ ಬದಲಾವಣೆ: ದಿ ಮೆಡಿಟೇಷನ್‌ ಆಫ್‌ ಸ್ಟೋರೀಸ್, ಇಮೇಜಸ್‌ ಮತ್ತು ಡಿಸ್ಕೋರ್ಸಸ್‌ಇನ್‌ಶಾಪಿಂಗ್‌ ಪ್ಲಾನೆಟರಿ ಫ್ಯುಚರ್ಸ್‌ ವಿಷಯದ ಕುರಿತು ಉಪನ್ಯಾಸ ನೀಡಿದರು.ಮಹಾರಾಷ್ಟ್ರದ ಓಮರ್ಗಾ ನಗರದ ದರ್ಶ್ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ಡಾ. ಪ್ರಶಾಂತ್ ಸುಭಾಷರಾವ್ ಮೋಥೆ ಅವರು ಉಪನ್ಯಾಸ ನೀಡಿ, ಸಿನಿಮಾ ಪರಿಸರ ಜಾಗೃತಿಯನ್ನು ಹೇಗೆ ಪ್ರತಿಬಿಂಬಿಸುತ್ತದೆ ಮತ್ತು ರೂಪಿಸುತ್ತದೆ ಎಂಬುದನ್ನು ವಿವರಿಸಿದರು.ಮೈಸೂರು ವಿವಿ ಮಹಾರಾಜ ಕಾಲೇಜಿನ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ಡಾ.ಪಿ. ವೆಂಕಟೇಶ್ ಹಾಗೂ ಯುವರಾಜ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ವಿಜಯಕುಮಾರ್ ಎಂ. ಬರಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದಲ್ಲಿ 53 ಸಂಶೋಧನಾ ಪ್ರಬಂಧ ಮಂಡನಾಕಾರರು ಹಾಗೂ 150 ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಪರಿಸರ ಬದಲಾವಣೆ ವೇಳೆ ಸಾಹಿತ್ಯ, ಭಾಷೆ, ಸಂಸ್ಕೃತಿ ಮತ್ತು ಸಿನೆಮಾ ಕುರಿತ ವಿವಿಧ ದೃಷ್ಟಿಕೋನಗಳು ಚರ್ಚಿಸಲ್ಪಟ್ಟವು. ಆಯ್ದ ಸಂಶೋಧನಾ ಪ್ರಬಂಧಗಳು ಅಂತಾರಾಷ್ಟ್ರೀಯ ಸಮೀಕ್ಷಿತ ಜರ್ನಲ್ ಲ್ಯಾಂಗ್‌ಲಿಟ್‌ ನಲ್ಲಿ ಪ್ರಕಟಿಸಲ್ಪಟ್ಟವು ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಕೀರ್ತನಾ ಭರತನಾಟ್ಯ ಪ್ರದರ್ಶನದ ಮೂಲಕ ಎಲ್ಲರನ್ನು ರಂಜಿಸಿದರು.‌ಸಮಾರೋಪ ಸಮಾರಂಭದಲ್ಲಿ ವಿವಿಧ ವಿಶ್ವವಿದ್ಯಾಲಯಗಳಿಂದ ಬಂದ ಮೂವರು ಉತ್ತಮ ಪ್ರಬಂಧ ಮಂಡನಾಕಾರರಿಗೆ ಉತ್ತಮ ಪ್ರಬಂಧ ಮಂಡನಕಾರ ಪ್ರಶಸ್ತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ವಿಚಾರ ಸಂಕಿರಣದ ಸಂಚಾಲಕ ಪ್ರೊ. ಬೃಂದಾ, ಸಹ ಸಂಚಾಲಕಿ ಉಜ್ವಲಾ, ವಾಣಿ ಸಚ್ಚಿನ್ ಇದ್ದರು.