ಸಾರಾಂಶ
ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ
ತಾಲೂಕಿನ ಆವಲಗುರ್ಕಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾರ್ವತ್ರಿಕ ಚುನಾವಣೆ ಮಾದರಿಯಂತೆ ಶಾಲಾ ಸಂಸತ್ ಚುನಾವಣಾ ಪ್ರಕ್ರಿಯೆ ನಡೆಯಿತು.ಶಾಲಾ ಮೈದಾನದಲ್ಲಿ ವಿದ್ಯಾರ್ಥಿಗಳು ಪ್ರಚಾರ ನಡೆಸಿ, ತಮಗೇ ಮತ ಹಾಕುವಂತೆ ಮತದಾರರ ಮನವೊಲಿಸುತ್ತಿರುವ ದೃಶ್ಯಗಳು ಗಮನ ಸೆಳೆದವು. ಸಾರ್ವತ್ರಿಕ ಚುನಾವಣೆ ಮಾದರಿಯಂತೆ ಶಾಲಾ ಸಂಸತ್ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ, ನಾಮಪತ್ರ ವಾಪಸ್ ಪಡೆಯುವುದು, ನಾಮಪತ್ರ ಪರಿಶೀಲನೆ ನಡೆಯಲಾಯಿತು.
ವಿದ್ಯಾರ್ಥಿಗಳಿಂದ ಮತದಾನಅಂತಿಮವಾಗಿ ಚುನಾವಣೆ ಕಣದಲ್ಲಿ ಉಳಿದ ಅಭ್ಯರ್ಥಿಗಳ ಘೋಷಣೆ, ಚುನಾವಣೆ ಪ್ರಚಾರ, ಚುನಾವಣೆ ದಿನಾಂಕ ಪ್ರಕಟಣೆ ಈ ಎಲ್ಲ ಪ್ರಕ್ರಿಯೆಗಳು ವ್ಯವಸ್ಥಿತವಾಗಿ ನಡೆದವು. ಈ ಮೂಲಕ ವಿದ್ಯಾರ್ಥಿಗಳಿಗೆ ಚುನಾವಣೆಯ ಅರಿವು ಮೂಡಿಸಲಾಯಿತು. ಚುನಾವಣೆಯಲ್ಲಿ ಮತದಾನಕ್ಕೆ ಇವಿಎಂ ಬಳಸುವ ರೀತಿಯಲ್ಲಿ ಮೊಬೈಲ್ ಓಟಿಂಗ್ ಆ್ಯಪ್ ಮೂಲಕ ವಿದ್ಯಾರ್ಥಿಗಳು ಮತದಾನ ಮಾಡಿದರು.
ಪ್ರಮಾಣವಚನ ಬೋಧನೆಸಂಸತ್ ಗೆ ಆಯ್ಕೆಯಾದ 21 ಸದಸ್ಯರಿಗೆ ಮುಖ್ಯ ಚುನಾವಣಾಧಿಕಾರಿಯಾಗಿ ಕೆಲಸ ನಿರ್ವಹಿಸಿದ ಮುಖ್ಯ ಶಿಕ್ಷಕ ಜೆ.ಆರ್. ನಾಗರಾಜ್ ಪ್ರಮಾಣ ವಚನ ಬೋಧಿಸಿದರು. ಮತಗಟ್ಟೆ ಅಧಿಕಾರಿಗಳಾಗಿ ಶಿಕ್ಷಕರಾದ ಬಿ.ಆರ್. ವಸಂತ ಕುಮಾರಿ, ಜೆ. ತಿರುನಾವುಕ್ಕರಸು, ಬಿ.ಎಸ್. ರಮಾಮಣಿ, ಎಂ.ವಿ.ಅನುಪಮಾ, ಎಂ.ಚಂದ್ರಕಲಾ, ಎಂ. ಮುನಿಕೃಷ್ಣಪ್ಪ ಕೆಲಸ ನಿರ್ವಹಿಸಿದರು. ಉಸ್ತುವಾರಿ ಜವಾಬ್ದಾರಿಯನ್ನು ಸಿ.ಆರ್.ಪ್ರಶಾಂತ್ ಕುಮಾರ್, ಸಿ.ಎಂ ಮಂಜೇಶ್ ವಹಿಸಿದ್ದರು.
ಈ ವೇಳೆ ಮುಖ್ಯ ಶಿಕ್ಷಕ ಜೆ.ಆರ್. ನಾಗರಾಜ್ ಮಾತನಾಡಿ, ಮಕ್ಕಳಿಗೆ ದೇಶದ ರಾಜಕೀಯ ವ್ಯವಸ್ಥೆಯನ್ನು ತಿಳಿಯುವಲ್ಲಿ ಸಹಕಾರಿಯಾಗಿದೆ. ಶಾಲಾ ಸಂಸತ್ ಚುನಾವಣೆಯನ್ನು ಚುನಾವಣಾ ಆಯೋಗ ನಡೆಸುವ ನೈಜ ಚುನಾವಣೆ ಮಾದರಿಯಲ್ಲೇ ನಡೆಸಿದ್ದೇವೆ ಎಂದರು.ಈ ಸಂದರ್ಭದಲ್ಲಿ ಪೋಷಕ ಕೆ.ಮುನಿಯಪ್ಪ, ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥ್, ನಿವೃತ್ತ ಶಿಕ್ಷಕ ಕೆ.ಎಂ.ರೆಡ್ಡಪ್ಪ ಇದ್ದರು.
-