ಸಾರಾಂಶ
ಹೊನ್ನಳಿ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಓಬವ್ವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಗೌರವ ಸಮರ್ಪಿಸಿದರು.
ತಾಲೂಕು ಕಚೇರಿಯಲ್ಲಿ ನಡೆದ ಒಬವ್ವ ಜಯಂತಿ ಆಚರಣೆಕನ್ನಡಪ್ರಭ ವಾರ್ತೆ ಹೊನ್ನಾಳಿ
ನಾಡಿನ ಇತಿಹಾಸದಲ್ಲಿ ಬರುವ ವೀರವನಿತೆ ಒನಕೆ ಓಬವ್ವ ಅವರು ಧೈರ್ಯ ಜೊತೆಗೆ ಪತಿ ಧರ್ಮ ಪರಿಪಾಲನೆ ಮಾಡುವ ಮೂಲಕ ಇಡೀ ಸ್ತ್ರಿ ಕುಲಕ್ಕೆ ಮಾದರಿಯಾಗಿದ್ದಾರೆ ಎಂದು ತಹಸೀಲ್ದಾರ್ ಪಟ್ಟರಾಜ ಗೌಡ ಅವರು ಹೇಳಿದರು.ತಾಲೂಕು ಅಡಳಿತ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಗೌರವ ಸಮರ್ಪಿಸಿ ಮಾತನಾಡಿದರು.
ಚಿತ್ರದುರ್ಗದ ಖ್ಯಾತ ಸಾಹಿತಿ ತ.ರಾ.ಸು.ಅವರ ಕಾದಂಬರಿ ಹಾಗೂ ಈ ಕಾದಂಬರಿ ಆಧರಿಸಿ ಪುಟ್ಟಣ ಕಣಗಾಲ್ ಹೊರತಂದ ನಾಗರಹಾವು ಚಿತ್ರದಿಂದಾಗಿ ಒನಕೆ ಓಬವ್ವ ಎಲ್ಲರಿಗೂ ಚಿರಪರಿಚಿತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದರು.ಚಿತ್ರದುರ್ಗದ ಮದಕರಿ ನಾಯಕರ ಕೋಟೆಯನ್ನು ಹೈದರಾಲಿ ಸೈನ್ಯ ಕೊಟೆಯೊಳಗೆ ನುಸುಳುತ್ತಿರುವಾಗ ನೀರು ತರಲು ಅಲ್ಲಿಗೆ ಬಂದ ಓಬವ್ವ ಮನೆಯಲ್ಲಿ ಊಟ ಮಾಡುತ್ತಿದ್ದ ತನ್ನ ಪತಿಗೆ ತೊಂದರೆ ಕೊಡದೇ ಮನೆಯಲ್ಲಿದ್ದ ಒನಕೆಯನ್ನು ತಂದು ವೈರಿ ಪಡೆ ಸೈನಿಕರ ರುಂಡ ಚಂಡಾಡುವ ಮೂಲಕ ಓಬವ್ವ ತಾನೋಬ್ಬ ಸ್ವಾಮಿ ನಿಷ್ಠೆ, ದೇಶ ಭಕ್ತೆ, ವೀರನಾರಿ ಜೊತೆಗೆ ಸತಿ ಧರ್ಮದ ಆರ್ಥವನ್ನು ಕೂಡ ತಿಳಿಸಿಕೊಡುವ ಮೂಲಕ ಮಹಿಳೆಯರಿಗೆ ಆದರ್ಶ ನಾರಿಯಾಗಿದ್ದಾರೆ ಎಂದು ಹೇಳಿದರು.
ನಾಗರಹಾವು ಚಿತ್ರದಲ್ಲಿ ಒಬವ್ವನ ಪಾತ್ರ ಮಾಡಿದ ನಟಿ ಜಯಂತಿ ಕೂಡ ಅತ್ಯಂತ ಮನೋಜ್ಞಾವಾಗಿ ನಟಿಸುವ ಮೂಲಕ ಒನಕೆ ಓಬವ್ವ ಎಂದರೆ ಹೀಗೇ ಇದ್ದಿರಬಹುವುದು ಎನ್ನುವಷ್ಟರ ಮಟ್ಟಿಗೆ ಅವರು ಅಭಿನಯ ಮಾಡಿದ್ದಾರೆ. ಓಬವ್ವ, ಕಿತ್ತೂರರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕದೇವಿ, ಧಾರ್ಮಿಕವಾಗಿ ಅಕ್ಕಮಹಾದೇವಿಯವರಂತಹ ಮಹಿಳೆಯರನ್ನು ಪಡೆದ ನಮ್ಮ ನಾಡು ಅತ್ಯಂತ ಪುಣ್ಯದ ನಾಡಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಛಲವಾದಿ ಮಹಾ ಸಭಾದ ನ್ಯಾಮತಿ ತಾಲೂಕು ಅಧ್ಯಕ್ಷ ಕುರುವ ಮಂಜುನಾಥ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ತಿಪ್ಪೇಶಪ್ಪ ಅವರು ಓಬವ್ವ ಅವರ ಕುರಿತು ಮಾತನಾಡಿದರು.
ಛಲವಾದಿ ಮಹಾ ಸಭಾದ ಹೊನ್ನಾಳಿ ತಾಲೂಕು ಅಧ್ಯಕ್ಷ ನವೀನ್ ಕುಮಾರ್, ಉಪತಹಸೀಲ್ದಾರ್ ಸುರೇಶ್, ಸಮಾಜದ ಮುಖಂಡರಾದ ಮಾಸಡಿ ನಾಗರಾಜ್, ಮಹೇಶ್ವರಪ್ಪ, ಹಾಲಪ್ಪಕುಂಬಳೂರು, ಚಂದ್ರಶೇಖರ, ಗ್ರಾಮ ಲ್ಕೆಕ್ಕಾಧಿಕಾರಿ ಅಶೋಕ್ ನಾಯ್ಕ, ಸಮಾಜ ಕಲ್ಯಾಣಾಧಿಕಾರಿ ಉಮಾ, ಹಿಂದುಳಿದ ವರ್ಗಗಳ ಅಧಿಕಾರಿ ಮೃತ್ಯುಂಜಯ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.