ರೈಲು ನಿಲ್ದಾಣದ ಆಧುನೀಕರಣ ಮುಕ್ತಾಯ ಹಂತಕ್ಕೆ

| Published : Jan 17 2024, 01:46 AM IST

ಸಾರಾಂಶ

ಆಲಮಟ್ಟಿಯ ರೈಲು ನಿಲ್ದಾಣಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಅಮೃತ ರೈಲು ನಿಲ್ದಾಣದ ಕಾಮಗಾರಿ, ದ್ವಿಪಥ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಪರಿಶೀಲಿಸಿಯಲ್ಲಿ ನೈರುತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಸಂಜೀವಕಿಶೋರ ಮಾಹಿತಿ.

ಕನ್ನಡಪ್ರಭ ವಾರ್ತೆ ಆಲಮಟ್ಟಿ

ಬಾದಾಮಿ, ಬಾಗಲಕೋಟೆ, ಆಲಮಟ್ಟಿ, ವಿಜಯಪುರ ನಾಲ್ಕು ರೈಲು ನಿಲ್ದಾಣಗಳನ್ನು ಅಮೃತ ರೈಲು ಯೋಜನೆಯಡಿ ಸೇರಿಸಲಾಗಿದ್ದು, ಈಗಾಗಲೇ ಕಾಮಗಾರಿ ಆರಂಭಗೊಂಡಿವೆ. ವಿಜಯಪುರ-ಬಾಗಲಕೋಟೆ ರೈಲು ನಿಲ್ದಾಣದ ಆಧುನೀಕರಣ ಮುಕ್ತಾಯ ಹಂತಕ್ಕೆ ಬಂದಿವೆ ಎಂದು ನೈರುತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಸಂಜೀವಕಿಶೋರ ಹೇಳಿದರು.

ಆಲಮಟ್ಟಿಯ ರೈಲು ನಿಲ್ದಾಣಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಅಮೃತ ರೈಲು ನಿಲ್ದಾಣದ ಕಾಮಗಾರಿ, ದ್ವಿಪಥ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಗದಗ-ಹೊಟಗಿ ಮಾರ್ಗದ ರೈಲ್ವೆ ಡಬಲಿಂಗ್ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಬಾಗಲಕೋಟೆ-ವಂದಾಲ ಮಧ್ಯೆ ಮಾತ್ರ ಬಾಕಿಯಿದೆ. ಆಲಮಟ್ಟಿ-ಬಾಗಲಕೋಟೆ ಮಧ್ಯೆ ಮೇ-2024ಕ್ಕೆ ಪೂರ್ಣಗೊಳ್ಳಲಿದೆ. ಆಲಮಟ್ಟಿ-ವಂದಾಲ ಮಧ್ಯೆ ಬರುವ ಕೃಷ್ಣಾ ನದಿಯ ಸೇತುವೆ ಕಾಮಗಾರಿ ನಡೆದಿದೆ. ಅದು ಬಹುತೇಕ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಆಲಮಟ್ಟಿ-ಗದಗ ಮಧ್ಯೆ ಎಲೆಕ್ಟ್ರಿಫಿಕೇಶನ್ ಕಾಮಗಾರಿಯೂ ಜೂನ್-2024ಕ್ಕೆ ಪೂರ್ಣಗೊಳ್ಳಲಿದೆ ಎಂದರು.

ಆಲಮಟ್ಟಿಯಲ್ಲಿ ಮೂರು ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ರೈಲು ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿಂದ ಅನುಮತಿ ಬಂದ ನಂತರ ರೈಲು ನಿಲುಗಡೆಗೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ವಿಜಯಪುರ ರೈಲು ನಿಲ್ದಾಣದಲ್ಲಿ ಫಿಟ್‌ಲೈನ್ ನಿರ್ಮಿಸಿ, ಅಲ್ಲಿ ಈ ಭಾಗದಲ್ಲಿ ಸಂಚರಿಸುವ ರೈಲುಗಳ ದುರಸ್ತಿ ಹಾಗೂ ನಿರ್ವಹಣೆ ಮತ್ತು ಹೊಸ ರೈಲುಗಳ ನಿರ್ವಹಣೆಯ ಕಾರ್ಯ ನಡೆಯಲಿದೆ. ಈ ಫಿಟ್‌ಲೈನ್ ನಿರ್ಮಾಣದ ನಂತರ ಈ ಭಾಗದಲ್ಲಿ ರೈಲುಗಳ ಸಂಚಾರ ಹೆಚ್ಚಲಿದೆ ಎಂದರು.

ಆಲಮಟ್ಟಿ-ಯಾದಗಿರಿ ಹಾಗೂ ಆಲಮಟ್ಟಿ-ಚಿತ್ರದುರ್ಗ ನೂತನ ರೈಲು ಮಾರ್ಗ ನಿರ್ಮಾಣದ ಸಮೀಕ್ಷೆ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಸಮೀಕ್ಷೆ ಪೂರ್ಣಗೊಂಡ ನಂತರ ರೈಲು ಮಂಡಳಿಗೆ ಕಳುಹಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹುಬ್ಬಳ್ಳಿ ರೈಲ್ವೆ ಡಿವಿಷನಲ್ ಮ್ಯಾನೇಜರ್ ಹರ್ಷ ಖರೆ, ಪ್ರಿನ್ಸಿಪಲ್ ಚೀಪ್ ಕಮರ್ಷಿಯಲ್‌ ಮ್ಯಾನೇಜರ್ ಎಸ್.ಪಿ.ಶಾಸ್ತ್ರಿ, ಮುಖ್ಯ ಆಡಳಿತಾಧಿಕಾರಿ ರಾಮಗೋಪಾಲ, ಬ್ರಹ್ಮಾನಂದಮ್, ವಿನಯಕುಮಾರ ಅಗರವಾಲ, ಸಂತೋಷ ಹೆಗಡೆ ಮತ್ತಿರರು ಇದ್ದರು.

ಅಂಡರ್ ಪಾಸ್, ರೈಲು ನಿಲ್ಲಿಸಲು ಆಗ್ರಹಿಸಿ ಮನವಿ:

ಆಲಮಟ್ಟಿ ಸಂತೆ ಮಾರುಕಟ್ಟೆ ಕಡೆಯಿಂದ ಆಲಮಟ್ಟಿ ರೈಲು ನಿಲ್ದಾಣದ ಹೊರಬಾಜು ಬರಲು ಅಂಡರ್ ಪಾಸ್ ನಿರ್ಮಿಸಿಬೇಕು. ಆಲಮಟ್ಟಿಯಲ್ಲಿ ಎಲ್ಲ ರೈಲುಗಳನ್ನು ನಿಲ್ಲಿಸಬೇಕು ಎಂದು ಆಲಮಟ್ಟಿ ಗ್ರಾಮಸ್ಥರು ರೈಲ್ವೆ ಜನರಲ್ ಮ್ಯಾನೇಜರ್ ಸಂಜೀವಕಿಶೋರ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮಸ್ಥರಾದ ರಮೇಶ ಆಲಮಟ್ಟಿ, ಶಂಕರ ಜಲ್ಲಿ, ಮಂಜುನಾಥ ಹಿರೇಮಠ, ಧೀರಜ್ ರಾಠಿ, ಕೃಷ್ಣಮೂರ್ತಿ ಕೋಳಿ, ಶಿವಾನಂದ ಕೋಳಿ, ಮಹಾಂತೇಶ ಹಿರೇಮಠ, ಭೀಮಣ್ಣ ಪತ್ತಾರ ಮತ್ತಿತರರು ಇದ್ದರು.