ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ನಗರದ ಜಗತ್ ಸರ್ಕಲ್ನಲ್ಲಿಂದು “ಮೋದಿ ಗೋ ಬ್ಯಾಕ್” ಚಳವಳಿ ನಡೆಸಿದ ಸಿಪಿಐ (ಎಂ) ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ, ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ಭೀಮಶೆಟ್ಟಿ ಯಂಪಳ್ಳಿ, ಸುಧಾಮ ಧನ್ನಿ, ಪಾಂಡುರಂಗ ಮಾವಿನಕರ, ಲವಿತ್ರ ವಸ್ತ್ರದ್, ಪ್ರಕಾಶ ಜಾನೆ, ಸಿದ್ಧರಾಮ ಹರವಾಳ, ಸುಜಾತಾ ಸೇರಿದಂತೆ ಹಲವಾರು ಜನರನ್ನು ಪೊಲೀಸರು ಬಂಧಿಸಿದರು.
ಪ್ರಧಾನಮಂತ್ರಿಗಳು ಮೊದಲು ರೈತರ, ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಿ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರ ಬಾಕಿ ವೇತನ ಬಿಡುಗಡೆ ಮಾಡಬೇಕು, ತೊಗರಿಯ ನಾಡಿನಲ್ಲಿ ತೊಗರಿ ಬೆಳೆಗಾರರಿಗೆ ಎಂಎಸ್ಪಿ ಬೆಂಬಲ ಬೆಲೆ ನಿಗದಿ ಮಾಡಿ ಪ್ರತಿ ಕ್ವಿಂಟಾಲ್ ತೊಗರಿಗೆ ಕನಿಷ್ಟ 12.000 ರೂಪಾಯಿ ಬೆಂಬಲ ಬೆಲೆ ಘೋಷಿಸಬೇಕು, ಬರಗಾಲದ ಬರ ಪರಿಹಾರ ಹಣ ಬಿಡುಗಡೆ ಮಾಡಬೇಕು, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಕೆಲಸ ಮಾಡಿದ ಕಾರ್ಮಿಕರ ಬಾಕಿ ವೇತನ ನೀಡಬೇಕು, ಎನ್ಎಂಎಂಎಸ್ ರದ್ದುಪಡಿಸಬೇಕು, ಕೆವೈಸಿ ಕೈ ಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಮನರೇಗಾ ಕೂಲಿಯನ್ನು ಬಾಕಿ ಉಳಿಸಿಕೊಂಡ, ಬರ ಪರಿಹಾರ ಕೊಡಲಾರದ, ರಾಜ್ಯದ ತೆರಿಗೆ ಹಣ ಕೊಡಲಾರದ, ಬೆಂಬಲ ರೈತರ ಬೆಳೆಗೆ ಎಂಎಸ್ಪಿ ನಿಗದಿ ಕಾಯ್ದೆ ಮಾಡದ, ಸಿಎಎ ಕಾಯ್ದೆ ಜಾರಿ ಮಾಡಿದ, ರೈತರ ಸಾಲ ಮನ್ನಾ ಮಾಡದ ಪ್ರಧಾನ ಮಂತ್ರಿಯವರು ಇಂದು ಕಲಬುರಗಿಗೆ ಆಗಮಿಸಿದ್ದು, ಚುನಾವಣೆಯನ್ನು ಮುಂದಿಟ್ಟುಕೊಂಡು ಸುಳ್ಳುಗಳಿಂದ ಜನರನ್ನು ದಿಕ್ಕುತಪ್ಪಿಸಲು ಪ್ರಧಾನ ಮಂತ್ರಿಯವರು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಚುನಾವಣಾ ನಿಧಿಯ ಹೆಸರಿನಲ್ಲಿ ಜನತೆಯ ಹಣ ವಾಮ ಮಾರ್ಗದಿಂದ ವಶ ಮಾಡಿಕೊಂಡ ಎಲೆಕ್ಟೊರಲ್ ಬಾಂಡ್ಗಾಗಿ ಎಸ್ಬಿಐ ಬ್ಯಾಂಕನ್ನು ಬಳಸಿಕೊಳ್ಳಲಾಗಿದೆ. ದೇಶದಲ್ಲಿ ನಡೆದ ಬಹುದೊಡ್ಡ ಭ್ರಷ್ಟಾಚಾರ ಇದಾಗಿದೆ ಎಂದು ಆರೋಪ ಮಾಡಿದರು.ಹೈದರಾಬಾದ ಕರ್ನಾಟಕದಲ್ಲಿ ಶೇ.64ಕ್ಕೂ ಹೆಚ್ಚು ಕೃಷಿ ಕೂಲಿಕಾರರು, ಕೃಷಿ ಕೂಲಿಜಾರರು, ಬಡರೈತರು ಮಧ್ಯಮ ವರ್ಗದ ರೈತರು, ಯುವಜನತೆ ಮತ್ತು ಸಮಸ್ತ ಮಹಿಳೆಯರು ಉದ್ಯೊಗ ಖಾತ್ರಿಯ ಮೇಲೆ ನಿರ್ಭರರಾಗಿದ್ದಾರೆ. ಆದರೆ ಕೇಂದ್ರ ಸರಕಾರವು ಬಿಡುಗಡೆ ಮಾಡಬೇಕಾದ ರು.1200 ಕೋಟಿಗಿಂತಲೂ ಹೆಚ್ಚು ಕೂಲಿಯನ್ನು ಉಳಿಸಿಕೊಂಡಿದೆ. ಇದು ಬಡ ಜನರಿಗೆ ಮಾಡುವ ಬಹು ದೊಡ್ಡ ದ್ರೋಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.