ಸಾರಾಂಶ
ಮೋದಿ ಹೊರಡಿಸಿರುವ ಪ್ರಣಾಳಿಕೆಯಲ್ಲಿ ಅಶಕ್ತರ ಸಬಲೀಕರಣ, ಮಹಿಳೆಯರ ಪ್ರಗತಿ ರೈತರ ಸಶಕ್ತೀಕರಣ, ಬಡತನ ನಿರ್ಮೂಲನೆ ಸೇರಿದಂತೆ ಅನೇಕ ವಿಷಯಗಳ ಕುರಿತು ವಿವರಿಸಲಾಗಿದೆ.
ಹುಬ್ಬಳ್ಳಿ:
ಪ್ರಧಾನಿ ನರೇಂದ್ರ ಮೋದಿ ಗ್ಯಾರಂಟಿ ಪ್ರಣಾಳಿಕೆ ಭಾರತವನ್ನು ಜಗತ್ತಿನ ಮೂರನೇ ಅತಿದೊಡ್ಡ ಶಕ್ತಿಯಾಗಿ ಹೊರಹೊಮ್ಮಿಸಲಿದೆ. ಅಲ್ಲದೇ ಇದು ವಿಕಸಿತ ಭಾರತದ ಸಂಕಲ್ಪದ ಮಾರ್ಗದರ್ಶಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಭಾನುವಾರ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ನಗರದ ಡಾ. ಅಂಬೇಡ್ಕರ್ ವೃತ್ತದಲ್ಲಿರುವ ಮೂರ್ತಿಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರು ಭಾನುವಾರ ಹೊರಡಿಸಿರುವ ಪ್ರಣಾಳಿಕೆಯಲ್ಲಿ ಅಶಕ್ತರ ಸಬಲೀಕರಣ, ಮಹಿಳೆಯರ ಪ್ರಗತಿ ರೈತರ ಸಶಕ್ತೀಕರಣ, ಬಡತನ ನಿರ್ಮೂಲನೆ ಸೇರಿದಂತೆ ಅನೇಕ ವಿಷಯಗಳ ಕುರಿತು ವಿವರಿಸಲಾಗಿದೆ. ಸಣ್ಣ ಕೈಗಾರಿಕೆಗೂ ವಿಶೇಷ ಒತ್ತು ನೀಡಲಾಗಿದೆ. ದೇಶದಲ್ಲಿ ಬಡತನ ಇಂದಿಗೂ ತಾಂಡವವಾಡುತ್ತಿದ್ದು, ಅದರ ನಿರ್ಮೂಲನೆಗೂ ಪ್ರಣಾಳಿಕೆಯಲ್ಲಿ ವಿಶೇಷ ಆದ್ಯತೆ ನೀಡಲಾಗಿದೆ. ದೇಶದ ಅರ್ಥ ವ್ಯವಸ್ಥೆ ಹಾಗೂ ಆಡಳಿತದಲ್ಲಿ ಪರಿವರ್ತನೆ ತರುವ ನಿಟ್ಟಿನಲ್ಲಿ ಈ ಪ್ರಣಾಳಿಕೆ ಸಿದ್ಧಪಡಿಸಿರುವುದಾಗಿ ತಿಳಿಸಿದರು.
ಅಂಬೇಡ್ಕರ್ ಅವರು ಶತಮಾನ ಕಂಡ ಮಹಾನ್ ಪುರುಷ. ಸೂರ್ಯ-ಚಂದ್ರ ಇರುವ ವರೆಗೂ ಅವರನ್ನು ದೇಶ ಸ್ಮರಿಸುತ್ತದೆ. ಸಾಕಷ್ಟು ಕರಾಳ ನೋವು ಅನುಭವಿಸಿದ್ದರೂ ಅವರು ಸಂವಿಧಾನ ರಚನೆ ಸಂದರ್ಭ ದ್ವೇಷ ರಹಿತವಾಗಿ ಕೆಲಸ ಮಾಡಿದ್ದಾರೆ. ಎಲ್ಲ ಸಮಾಜದವರಿಗೂ ಸಮಾನತೆಯ ಹಕ್ಕನ್ನು ನೀಡಿದ್ದಾರೆ. ಸಾಮಾಜಿಕ ಸಮಾನತೆ, ಅಸ್ಪೃಶ್ಯತೆ ಭಾವ ಇರದ ಸುಂದರ ಸಮಾಜ ಹಾಗೂ ವಿಕಸಿತ ಭಾರತ ನಿರ್ಮಿಸುವ ಮೂಲಕ ನಾವೆಲ್ಲರೂ ಅವರಿಗೆ ಗೌರವ ಸಲ್ಲಿಸುವ ಕಾರ್ಯವಾಗಬೇಕಿದೆ ಎಂದರು.