ಮೋದಿ ಮತ್ತೊಮ್ಮೆ ಪ್ರಧಾನಿ ಜನರ ಅಭಿಲಾಷೆ

| Published : Apr 05 2024, 01:03 AM IST

ಸಾರಾಂಶ

ರಾಷ್ಟ್ರವನ್ನು ಸದೃಢವಾಗಿಸಲು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವುದೇ ಇಡೀ ದೇಶದ ಜನರ ಅಭಿಲಾಷೆಯಾಗಿದೆ.

ಹುಬ್ಬಳ್ಳಿ:

ರಾಷ್ಟ್ರವನ್ನು ಸದೃಢವಾಗಿಸಲು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವುದೇ ಇಡೀ ದೇಶದ ಜನರ ಅಭಿಲಾಷೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಇಲ್ಲಿನ ಪೂರ್ವ ಕ್ಷೇತ್ರದಲ್ಲಿನ ಗಂಗಾಧರ ನಗರದ ವಾರ್ಡ್‌ ನಂ. 81ರಲ್ಲಿ ಪಕ್ಷದ ಬೂತ್‌ ಅಧ್ಯಕ್ಷ ಶ್ರೀಧರ ಸಿಂಗನಹಳ್ಳಿ ಅವರ ಮನೆಗೆ ಭೇಟಿ ನೀಡಿ ಉಪಾಹಾರ ಸೇವಿಸಿ ಅವರು ಮಾತನಾಡಿದರು.

ಕಳೆದ ಹತ್ತು ವರ್ಷಗಳಿಂದ ದೇಶದ ರಕ್ಷಣೆಗೆ ಒತ್ತು ನೀಡಿದವರು ಮೋದಿ. ಅವರ ನೇತೃತ್ವದಲ್ಲಿ ದೇಶ ಹಾಗೂ ಕ್ಷೇತ್ರದಲ್ಲಿ ಆದ ಅಭಿವೃದ್ಧಿ ಪರ ಕೆಲಸಗಳು ಜನರ ಕಣ್ಣ ಮುಂದೆ ಇವೆ. ನಾನು ಮಾಡಿದ ಕೆಲಸಗಳನ್ನೇ ಮುಂದಿಟ್ಟುಕೊಂಡು ಜನರ ಬಳಿಗೆ ಹೋಗುತ್ತಿದ್ದೇನೆ. ಈ ಸಲವೂ ಜನರ ಆಶೀರ್ವಾದ ಖಂಡಿತ ಸಿಗುತ್ತದೆ ಎಂದರು.

ದೇಶದಲ್ಲಿ ಭ್ರಷ್ಟಾಚಾರಮುಕ್ತ ಆಡಳಿತ ನೀಡಿದ್ದರಿಂದ 10 ವರ್ಷದಲ್ಲಿ ಸಾಕಷ್ಟು ಪರಿವರ್ತನೆಯಾಗಿದೆ. ಕೇಂದ್ರ ಸರ್ಕಾರ ಯಾವುದೇ ಹಂತದಲ್ಲಿ, ರಾಜಕಾರಣದಲ್ಲಿ ಸಹ ಒಂದು ಪೈಸೆ ಭ್ರಷ್ಟಾಚಾರವನ್ನು ಮಾಡಿಲ್ಲ ಎಂದು ಹೇಳಿದರು. ಯಾರಾದರೂ ಮಂತ್ರಿ ಭ್ರಷ್ಟಾಚಾರ ಮಾಡಿದರೆ ಅವತ್ತೇ ಸಂಜೆ ಮನೆಗೆ ಕಳುಹಿಸುವ ಕೆಲಸವನ್ನು ಪ್ರಧಾನಿ ಮೋದಿ ಮಾಡುತ್ತಾರೆ. ಅಷ್ಟರ ಮಟ್ಟಿಗೆ ಸ್ವಚ್ಛ ಆಡಳಿತ ನೀಡಿದ್ದೇವೆ ಎಂದರು.

ಪ್ರಚಾರ ಸಭೆಯಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮಾಜಿ ಶಾಸಕ ಅಶೋಕ ಕಾಟವೆ, ಪೂರ್ವ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಪ್ರಭು ನವಲಗುಂದಮಠ, ಪಕ್ಷದ ಪ್ರಮುಖರಾದ ಡಾ. ಕ್ರಾಂತಿಕಿರಣ್, ಬಸವರಾಜ ಜಾಧವ, ಶ್ರೀಧರ ಸಿಂಗನಹಳ್ಳಿ, ಶಶಿ ಬಿಜುವಾಡ, ಶಿವು ಮೆಣಸಿನಕಾಯಿ, ಚಂದ್ರಶೇಖರ ಗೋಕಾಕ, ಬಸವರಾಜ ಅಮ್ಮಿನಬಾವಿ, ಸಂತೋಷ ಅರಕೇರಿ, ಯಮನೂರ ಜಾಧವ್, ಅನೂಪ್ ಬಿಜವಾಡ ಸೇರಿದಂತೆ ಹಲವರಿದ್ದರು.