ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಕೃಷಿ ಮತ್ತು ರೈತರ ಕಲ್ಯಾಣ ಸೇರಿದಂತೆ ಅವರ ಆರ್ಥಿಕ ಸಬಲತೆಗಾಗಿ ಹತ್ತು ಹಲವಾರು ರೈತಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರಾದ ವಿ.ಸೋಮಣ್ಣ ತಿಳಿಸಿದರು.ನಗರದ ಗುರುಕುಲಾನಂದಾಶ್ರಮ ಕಲ್ಯಾಣ ಮಂಟದಲ್ಲಿ ಕೃಷಿ ಮತ್ತು ರೈತರ ಕೇಂದ್ರ ಕಲ್ಯಾಣ ಸಚಿವಾಲಯ, ಕೃಷಿ ವಿಶ್ವವಿದ್ಯಾನಿಲಯ ಹಾಗೂ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ೧೯ನೇ ಕಂತಿನ ಹಣವನ್ನು ನೇರ ರೈತರ ಖಾತೆಗೆ ವರ್ಗಾಹಿಸುವ ನೇರ ವೀಕ್ಷಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಿಸಾನ್ ಸಮ್ಮಾನ್ ಯೋಜನೆ ಪ್ರಧಾನ ಮಂತ್ರಿಗಳ ಮಹತ್ವಕಾಂಕ್ಷಿ ಯೋಜನೆಯಾಗಿದೆ. ರೈತರ ಏಳಿಗೆಗಾಗಿ ಯಾವ ಸರ್ಕಾರವೂ ಮಾಡದಂತಹ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ರೈತರನ್ನು ಉತ್ತೇಜಿಸುತ್ತಿದೆ. ಇಡೀ ದೇಶದ ಎಲ್ಲಾ ರಾಜ್ಯಗಳಲ್ಲಿ ಏಕಕಾಲದಲ್ಲಿ ರೈತರ ಖಾತೆಗೆ ಹಣ ವರ್ಗಾವಣೆ ಮಾಡುವ ರಾಷ್ಟ್ರ ಮಟ್ಟದ ಕಿಸಾನ್ ಸಮ್ಮಾನ್ ಕಾರ್ಯಕ್ರಮ ಅವಿಸ್ಮರಣೀಯವಾಗಿದೆ. ದೇಶದ ೯ಕೋಟಿ ೭೦ಲಕ್ಷ ಕುಟುಂಬಗಳಿಗೆ ೨೨ಸಾವಿರ ಕೋಟಿರುಗಳನ್ನು ರೈತರ ಖಾತೆಗೆ ವರ್ಗಾಯಿಸುವ ಕಿಸಾನ್ ಸಮ್ಮಾನ್ ಯೋಜನೆ ರೈತರ ಆರ್ಥಿಕ ಕೃಷಿಗೆ ಸಹಕಾರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ತುಮಕೂರು ಶಾಸಕ ಜ್ಯೋತಿ ಗಣೇಶ್, ಗ್ರಾಮಾಂತರ ಶಾಸಕ ಸುರೇಶ್ಗೌಡ, ಭಾರತೀಯ ಕೃಷಿ ಪ್ರಧಾನ ವಿಜ್ಞಾನಿ ಎಂ.ಜೆ. ಚಂದ್ರಶೇಖರ್, ಕೆವಿಕೆ ವಿಸ್ತರಣಾಧಿಕಾರಿ ಸುರೇಶ್, ಕೆವಿಕೆ ಮುಖ್ಯಸ್ಥ ಡಾ. ವಿ. ಗೋವಿಂದೇಗೌಡ, ತಹಸೀಲ್ದಾರ್ ಪವನ್ಕುಮಾರ್, ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ, ಪಶು ಸಂಗೋಪನೆ ಇಲಾಖೆ ಡಾ. ನಂದೀಶ್, ಕೃಷಿ ಇಲಾಖೆ ಪವನ್, ತೋಟಗಾರಿಕೆ ಇಲಾಖೆ ಚಂದ್ರಶೇಖರ್ ಸೇರಿದಂತೆ ಕಿಸಾನ್ ಸಮ್ಮಾನ್ ಫಲಾನುಭವಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಕೆವಿಕೆ, ಕೃಷಿ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.