ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ದೇಶದ ಎಲ್ಲಾ ವರ್ಗದ ಜನರು ಸ್ವಾಭಿಮಾನದಿಂದ ಸ್ವಾವಲಂಬಿಯಾಗಲು ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದಿರುವ 150 ಕ್ಕೂ ಹೆಚ್ಚು ಕಾರ್ಯಕ್ರಮಗಳು ಸಹಕಾರಿಯಾಗಿವೆ. ಈ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಿ ಎಲ್ಲರೂ ಅವುಗಳ ಪ್ರಯೋಜನ ಪಡೆಯಬೇಕು. ಮೋದಿಯವರು ಕೊಟ್ಟಿರುವ ಯೋಜನೆಗಳೇ ಮಾತನಾಡಿ ದೇಶದ ಪ್ರಗತಿಯನ್ನು ಸಾರಿಹೇಳುತ್ತವೆ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.
ಶನಿವಾರ ನಗರಪಾಲಿಕೆ ಆವರಣದಲ್ಲಿ ಲೀಡ್ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ಸಹಯೋಗದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದರು, ದೇಶದ ಜನರ ಸರ್ವತೋಮುಖ ಬೆಳವಣಿಗೆಗೆ ಪ್ರಧಾನಿ ಮೋದಿಯವರ ಯೋಜನೆಗಳು ಸಹಕಾರಿಯಾಗಿವೆ.
ಜನಸಾಮಾನ್ಯರಿಗೆ ಉತ್ತಮ ಬದುಕು, ಶಿಕ್ಷಣ, ಆರೋಗ್ಯ, ಸುರಕ್ಷತೆ ಹೀಗೆ ಎಲ್ಲ ರೀತಿಯಲ್ಲೂ ಯೋಜನೆಗಳು ಅನುಕೂಲವಾಗಿವೆ. ಪ್ರಧಾನಿ ಮೋದಿಯವರ ಕಾರ್ಯಕ್ರಮಗಳು ದೇಶದ 140 ಕೋಟಿ ಜನರಿಗೂ ತಲುಪಿ ಅವರು ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.
ಮಹಿಳೆಯರಿಗೆ ರಾಜಕೀಯ ಸ್ಥಾನಮಾನ ನೀಡಬೇಕು ಎಂದು ಮೋದಿ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಅದರಂತೆ ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಶೇಕಡ 33ರಷ್ಟು ಮಹಿಳೆಯರಿಗೆ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ರಾಜಕೀಯ ಮೀಸಲಾತಿ ದೊರೆಯುತ್ತದೆ.
ಹೆಣ್ಣುಮಕ್ಕಳ ಶಿಕ್ಷಣ, ಸುರಕ್ಷಿತ, ಸುಭದ್ರ ಬದುಕಿಗೆ ಮೋದಿಯವರು ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ.ಮಧ್ಯವರ್ತಿಗಳ ಹಾವಳಿ, ಲಂಚ ತಪ್ಪಿಸಲು ಡಿಜಿಟಲ್ ಪೇಮೆಂಟ್ ವ್ಯವಸ್ಥೆಗೆ ಆದ್ಯತೆ ನೀಡಿ, ಸರ್ಕಾರದ ಸವಲತ್ತುಗಳು ನೇರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ತಲುಪುವಂತೆ ಮಾಡಿದ್ದಾರೆ ಎಂದರು.
೧೯೮೪ ರಿಂದ ನಾನು ಹಲವು ಬಾರಿ ಲೋಕಸಭಾ ಸದಸ್ಯನಾಗಿದ್ದು, ಆಗ ಕೇಂದ್ರ ಸರ್ಕಾರದಲ್ಲಿ ಭ್ರಷ್ಟಾಚಾರ, ಸ್ಕಾಂಡಲ್ ಸುದ್ದಿಗಳೇ ಹೆಚ್ಚು ಪ್ರಚಲಿತವಾಗಿದ್ದವು. ಮೋದಿಯವರು 2014 ರಿಂದ ಪ್ರಧಾನಿಯಾದ ಮೇಲೆ ಭ್ರಷ್ಟಾಚಾರಕ್ಕೆ ಅವಕಾಶವಾಗಿಲ್ಲ, ದೇಶದ ಅಭಿವೃದ್ಧಿಯೇ ಮೋದಿಯವರ ಮಂತ್ರವಾಗಿದೆ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.
ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮಾತನಾಡಿ, ದೇಶದ ಜನ, ಕುಟುಂಬ ಸ್ವಾಭಿಮಾನಿಯಾಗಿ ಸಮಾಜದಲ್ಲಿ ತಲೆಯೆತ್ತಿ ಬಾಳಲು ಬೇಕಾದ ಆಹಾರ, ಅರೋಗ್ಯ, ವಿದ್ಯೆ, ಸಾಮಾಜಿಕ ಭದ್ರತೆ, ರೈತರು, ಕಾರ್ಮಿಕರ ಸುರಕ್ಷೆಗೆ ಪೂರಕವಾದ 150 ಕ್ಕೂ ಹೆಚ್ಚು ಮಹತ್ತರ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದಿದ್ದಾರೆ.
ಜಾತಿಭೇದವಿಲ್ಲದೆ ಎಲ್ಲ ವರ್ಗದವರಿಗೂ ಅನುಕೂಲವಾಗುವ ಈ ಯೋಜನೆಗಳೇ ನರೇಂದ್ರ ಮೋದಿಯವರ ಗ್ಯಾರಂಟಿ. ಎಲ್ಲರೂ ಈ ಯೋಜನೆಗಳ ಪ್ರಯೋಜನ ಪಡೆದು ಪ್ರಗತಿಯಾದರೆ ಭಾರತ ವಿಕಸಿತವಾಗುತ್ತದೆ ಎಂದು ಹೇಳಿದರು.
ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ದೇಶದ ಪ್ರಗತಿ ಕಾಣದಿದ್ದ ಸಮಯದಲ್ಲಿ 2014ರಲ್ಲಿ ಮೋದಿಯವರು ಪ್ರಧಾನ ಮಂತ್ರಿಯಾಗಿ ದೇಶದ ಅಭಿವೃದ್ಧಿಪಥವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುತ್ತಿದ್ದಾರೆ.
ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿ ಉತ್ತಮಗೊಂಡು ಅವರು ಸ್ವಾಭಿಮಾನದಿಂದ ಬಾಳಲು ಮೋದಿಯವರ ಯೋಜನೆಗಳು ಸಹಕಾರಿಯಾಗಿವೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಯೋಜನೆಗಳ ಪ್ರಯೋಜನ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಲು ನೆರವಾಗಿವೆ ಎಂದು ತಿಳಿಸಿದರು.
ಸಾಮಾನ್ಯ ಜನರಿಗೆ ಬ್ಯಾಂಕಿಂಗ್ ಸೌಲಭ್ಯ, ಡಿಜಿಟಲ್ ಪೇಮೆಂಟ್ ವ್ಯವಸ್ಥೆ, ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ, ವಿವಿಧ ವಿಮಾ ಯೋಜನೆ, ರೈತರಿಗೆ ಕಿಸಾನ್ ಸಮ್ಮಾನ್, ಕಾರ್ಮಿಕರಿಗೆ ಇ ಶ್ರಮ್ ಕಾರ್ಡ್, ಪಾರಂಪರಿಕ ಕುಲಕಸುಬುದಾರರಿಗೆ ಆರ್ಥಿಕ ನೆರವಿನ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಸೇರಿದಂತೆ 150 ಕ್ಕೂ ಹೆಚ್ಚು ಸಾರ್ಥಕ ಯೋಜನೆಗಳನ್ನು ನೀಡಿರುವ ಮೋದಿಯವರು ದಿನದಲ್ಲಿ 18 ರಿಂದ 20 ಗಂಟೆ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುವ ಪ್ರಧಾನಮಂತ್ರಿಯಾಗಿದ್ದಾರೆ.
ಇವರ ಯೋಜನೆಗಳು ದೇಶದ ಪ್ರತಿಯೊಬ್ಬರಿಗೂ ತಲುಪಿ ಅವರೂ ಪ್ರಯೋಜನ ಪಡೆಯುವಂತಾದರೆ ಮೋದಿಯವರ ಶ್ರಮ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಕಾಶ್ ಮಾತನಾಡಿ, ವಿಕಸಿತ ಭಾರತ ಸಂಕಲ್ಪ ಯಾತ್ರೆ ಮೂಲಕ ದೇಶದ ಎಲ್ಲಾ ಜನರಿಗೆ ಪ್ರಧಾನಮಂತ್ರಿಯವರ ಯೋಜನೆಗಳನ್ನು ಪರಿಚಯಿಸಿ, ಅವರನ್ನು ಯೋಜನೆ ವ್ಯಾಪ್ತಿಗೆ ತರುವ ಪ್ರಯತ್ನ ನಡೆಯುತ್ತಿದೆ. ಜಿಲ್ಲೆಯ ಎಲ್ಲಾ ಗ್ರಾಪಂ, ಸ್ಥಳೀಯ ಸಂಸ್ಥೆಗಳ ಎಲ್ಲಾ ವಾರ್ಡ್ಗಳಲ್ಲೂ ಈ ಯಾತ್ರೆ ಸಂಚರಿಸಿ ಜನರಿಗೆ ಯೋಜನೆಗಳನ್ನು ತಲುಪಿಸಲಾಗುತ್ತದೆ ಎಂದರು.
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ರಾಜ್ಯದಲ್ಲಿಯೇ ಅತಿ ಹೆಚ್ಚು ಎನ್ನುವಂತೆ ನಮ್ಮ ಜಿಲ್ಲೆಯಲ್ಲಿ ೧.೭ ಲಕ್ಷ ಜನ ಅರ್ಜಿ ಸಲ್ಲಿಸಿದ್ದಾರೆ. ದೇಶದಲ್ಲಿಯೇ ಕರ್ನಾಟಕದಲ್ಲಿ ಹೆಚ್ಚು ಜನ ಈ ಯೋಜನೆಯ ಫಲ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ ಎಂದರು
ನಗರ ಪಾಲಿಕೆ ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಸದಸ್ಯರಾದ ಮಂಜುನಾಥ್, ದೀಪಶ್ರೀ, ಮಹೇಶ್ಬಾಬು, ಮಂಜುಳ ಆದರ್ಶ್, ನವೀನಾ ಅರುಣ, ಕೆನರಾ ಬ್ಯಾಂಕಿನ ಸಹಾಯಕ ಮಹಾಪ್ರಬಂಧಕ ರವೀಶ್, ಲೀಡ್ ಬ್ಯಾಂಕ್ನ ವ್ಯವಸ್ಥಾಪಕ ಪ್ರಕಾಶ್, ಮೊದಲಾದವರು ಭಾಗವಹಿಸಿದ್ದರು. ಈ ವೇಳೆ ತೆರೆದಿದ್ದ ವಿವಿಧ ಯೋಜನೆಗಳ ಕೌಂಟರ್ಗಳಲ್ಲಿ ನೂರಾರು ಜನ ಯೋಜನೆಗಳ ಪ್ರಯೋಜನ ಪಡೆಯಲು ನೋಂದಣಿ ಮಾಡಿಕೊಂಡರು.
ನಗರಪಾಲಿಕೆ ಆವರಣದಲ್ಲಿ ಲೀಡ್ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ಸಹಯೋಗದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಜಿ.ಎಸ್.ಬಸವರಾಜು. ಶಾಸಕ ಜ್ಯೋತಿಗಣೇಶ್ ಸೇರಿದಂತೆ ಇತರರಿದ್ದರು.