28ರಂದು ದಾವಣಗೆರೆ, ಹಾವೇರಿ ಸಮಾವೇಶಕ್ಕೆ ಮೋದಿ

| Published : Apr 25 2024, 01:06 AM IST / Updated: Apr 25 2024, 01:07 AM IST

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಹಾವೇರಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಸಮಾವೇಶದಲ್ಲಿ ಏ.28ರಂದು ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ನಗರದ ಹೈಸ್ಕೂಲ್ ಮೈದಾನದಲ್ಲಿ ಹಂದರ ಕಂಬದ ಪೂಜೆ ನಡೆಯಿತು.

- ಹೈಸ್ಕೂಲ್ ಮೈದಾನದಲ್ಲಿ ಹಂದರಗಂಬಕ್ಕೆ ಪೂಜೆ ಸಲ್ಲಿಸಿ ಸಂಸದ ಸಿದ್ದೇಶ್ವರ ಹೇಳಿಕೆ । ಜಗತ್ತು ಮೆಚ್ಚಿದ ನಾಯಕ ಮೋದಿ ಎಂದು ಬಣ್ಣನೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಹಾವೇರಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಸಮಾವೇಶದಲ್ಲಿ ಏ.28ರಂದು ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ನಗರದ ಹೈಸ್ಕೂಲ್ ಮೈದಾನದಲ್ಲಿ ಹಂದರ ಕಂಬದ ಪೂಜೆ ನಡೆಯಿತು.

ಸಂಸದ ಜಿ.ಎಂ.ಸಿದ್ದೇಶ್ವರ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಹಿರಿಯ ಮುಖಂಡರಾದ ಯಶವಂತ ರಾವ್ ಜಾಧವ್‌, ಶಿವನಹಳ್ಳಿ ರಮೇಶ, ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಇತರರು ಹೈಸ್ಕೂಲ್ ಮೈದಾನದಲ್ಲಿ ಹಾಲು ತುಪ್ಪ ಹಾಕುವ ಮೂಲಕ ಶಾಸ್ತ್ರೋಕ್ತವಾಗಿ ಹಂದರಗಂಬಕ್ಕೆ ಪೂಜೆ ನೆರವೇರಿಸಿದರು.

ದಾವಣಗೆರೆ ಬಳಿಕ ಕಾರವಾರ:

ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಏ.28ರಂದು ದಾವಣಗೆರೆ, ಹಾವೇರಿ ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ನಗರಕ್ಕೆ ಆಗಮಿಸಲಿದ್ದಾರೆ. ಇದಕ್ಕಾಗಿ ಹೈಸ್ಕೂಲ್ ಮೈದಾನದಲ್ಲಿ ಸಿದ್ಥತೆ ಕೈಗೊಂಡಿದ್ದೇವೆ. ಮಧ್ಯಾಹ್ನ 12 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. 1 ಗಂಟೆಗೆ ಪ್ರಧಾನಿ ಮೋದಿ ನಗರಕ್ಕೆ ಆಗಮಿಸಿ, ಮಾತನಾಡಲಿದ್ದಾರೆ. ದಾವಣಗೆರೆ ಸಮಾವೇಶದ ನಂತರ ನರೇಂದ್ರ ಮೋದಿ ಅವರು ಕಾರವಾರಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದರು.

ಲಕ್ಷಾಂತರ ಜನರ ನಿರೀಕ್ಷೆ:

ದಾವಣಗೆರೆಗೆ ಐದನೇ ಬಾರಿಗೆ ನರೇಂದ್ರ ಮೋದಿ ಆಗಮಿಸುತ್ತಿರುವುದು ಜನರ ಪುಣ್ಯ. ಈ ಚುನಾವಣೆಯಲ್ಲಿ ಗಾಯತ್ರಿ ಸಿದ್ದೇಶ್ವರ ಅವರನ್ನು ದಾಖಲೆಯ ಮತಗಳ ಅಂತರದಲ್ಲಿ ಮತದಾರರು ಗೆಲ್ಲಿಸಿ, ಲೋಕಸಭೆಗೆ ಕಳಿಸಲಿದ್ದಾರೆ. ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ದಾವಣಗೆರೆ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಹಾವೇರಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ನಾಯಕರು ಭಾಗವಹಿಸುವರು. ಲಕ್ಷಾಂತರ ಸಂಖ್ಯೆಯ ಜನ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಬಂದ ಮೇಲೆ‌ ದೀಪಾವಳಿ ಹಬ್ಬವನ್ನು‌ ಸೈನಿಕರೊಂದಿಗೆ ಆಚರಿಸಿದ ಮೊದಲ ಪ್ರಧಾನಿ ನರೇಂದ್ರ ಮೋದಿ. ಭಾರತೀಯ ಸೈನ್ಯವನ್ನು ಬಲಪಡಿಸುವುದರ ಜೊತೆಗೆ‌ 2047ಕ್ಕೆ ಭಾರತವನ್ನು ವಿಶ್ವದ ನಂಬರ್-1 ದೇಶ ಮಾಡುವುದು ಮೋದಿ ಮತ್ತು ಬಿಜೆಪಿ ಕನಸು ಹಾಗೂ ಗುರಿಯಾಗಿದೆ. ಇಡೀ ವಿಶ್ವವೇ ಇಂದು ನರೇಂದ್ರ ಮೋದಿ ಅತ್ಯುತ್ತಮ ಜಾಗತಿಕ ನಾಯಕ ಎಂದು ಬಣ್ಣಿಸುತ್ತಿದೆ. ಪ್ರತಿ ಕ್ಷೇತ್ರದಲ್ಲೂ ಭಾರತವು ಸಾಧನೆ ಮಾಡುವಲ್ಲಿ ನರೇಂದ್ರ ಮೋದಿ ಕೊಡುಗೆ ಇದೆ. ಆದರೆ, ವಿಪಕ್ಷಗಳಿಗೆ ಮೋದಿ ಸಾಧನೆ, ಬದ್ಧತೆ, ಇಚ್ಛಾಶಕ್ತಿ, ಕಾಳಜಿ ಅದ್ಯಾವುದೂ ಕಾಣುತ್ತಿಲ್ಲ ಎಂದು ಕಿಡಿಕಾರಿದರು.

ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್‌. ಶಿವಯೋಗಿಸ್ವಾಮಿ, ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್, ಹಿರಿಯ ಮುಖಂಡರಾದ ಶಿವನಹಳ್ಳಿ ರಮೇಶ, ಎಂ.ಪಿ. ಕೃಷ್ಣಮೂರ್ತಿ ಪವಾರ್‌, ವೈ.ಮಲ್ಲೇಶ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ಜಿ.ಎಸ್.ಶ್ಯಾಮ ಮಾಯಕೊಂಡ, ಪಿ.ಸಿ.ಶ್ರೀನಿವಾಸ ಭಟ್‌, ಮಾಜಿ ಮೇಯರ್ ಎಸ್.ಟಿ. ವೀರೇಶ, ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ಜೊಳ್ಳಿ ಗುರು, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ಎಲ್.ಶಿವಪ್ರಕಾಶ, ಶಾಮನೂರು ಪ್ರವೀಣ, ಟಿಂಕರ್ ಮಂಜಣ್ಣ, ನವೀನ, ಶಿವನಗೌಡ ಪಾಟೀಲ, ಸುರೇಶ ಗಂಡಗಾಳೆ, ತರಕಾರಿ ಶಿವು, ಕೆ.ಸಿ.ಗುರು , ಕಿಶೋರಕುಮಾರ ಇತರರು ಇದ್ದರು.

- - - ಕೋಟ್‌ ದಾವಣಗೆರೆ ನಗರಕ್ಕೆ ಸ್ಮಾರ್ಟ್ ಸಿಟಿ ಯೋಜನೆ, ಪಾಸ್ ಪೋರ್ಟ್‌ ಕಚೇರಿ, ಇಎಸ್‌ಐ ಆಸ್ಪತ್ರೆಗೆ ₹25 ಕೋಟಿ ಮಂಜೂರು ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಸಂಸದರು ಅಭಿವೃದ್ಧಿ ಮಾಡಿಲ್ಲವೆಂದು, ಖಾಲಿ ಚೊಂಬು ಕೊಟ್ಟಿದ್ದಾರೆಂದು ಕಾಂಗ್ರೆಸ್ಸಿನವರು ಟೀಕಿಸುತ್ತಾರೆ. ನಾನೇನು ಸಾಧನೆ ಮಾಡಿದ್ದೇನೆಂಬುದು ನನ್ನ ಲೋಕಸಭಾ ಕ್ಷೇತ್ರ, ದಾವಣಗೆರೆ ಜಿಲ್ಲೆಯ ಜನರಿಗೆ ತಿಳಿದಿದೆ

- ಜಿ.ಎಂ. ಸಿದ್ದೇಶ್ವರ, ಸಂಸದ

- - - ದಾವಣಗೆರೆಯಲ್ಲಿ ಏ.28ರಂದು ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿರುವ ಬಿಜೆಪಿ ಪ್ರಚಾರ ಸಮಾವೇಶದಲ್ಲಿ 2 ಲಕ್ಷಕ್ಕೂಅಧಿಕ ಜನರು ಸೇರುವ ನಿರೀಕ್ಷೆ ಇದೆ. ಮಹಿಳೆಯರು, ವಕೀಲರು, ವೈದ್ಯರು ವಿಶೇಷವಾಗಿ ಭಾಗವಹಿಸಲಿದ್ದಾರೆ. ಅತ್ಯಂತ ಯಶಸ್ವಿ ಕಾರ್ಯಕ್ರಮ ದಾವಣಗೆರೆ ಪ್ರಚಾರ ಸಮಾವೇಶ ಆಗಲಿದೆ

- ಎನ್.ರಾಜಶೇಖರ ನಾಗಪ್ಪ, ಜಿಲ್ಲಾಧ್ಯಕ್ಷ, ಬಿಜೆಪಿ

- - - -24ಕೆಡಿವಿಜಿ1, 2, 3:

ದಾವಣಗೆರೆಯಲ್ಲಿ ಏ.28ಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಹಿನ್ನೆಲೆಯಲ್ಲಿ ಹೈಸ್ಕೂಲ್ ಮೈದಾನದಲ್ಲಿ ಹಂದರಗಂಬಕ್ಕೆ ಪೂಜೆ ನಡೆಸಲಾಯಿತು. ಸಂಸದ ಜಿ.ಎಂ.ಸಿದ್ದೇಶ್ವರ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಇತರರು ಇದ್ದರು.