ಕನ್ನಡಪ್ರಭ ವಾರ್ತೆ ಬೆಂಗಳೂರು
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಗೇಮ್ಸ್ಕ್ರಾಫ್ಟ್ ಕಂಪನಿಯ ನಿರ್ದೇಶಕರಾದ ದೀಪಕ್ ಸಿಂಗ್ ಅಹ್ಲಾವತ್, ಪೃಥ್ವಿರಾಜ್ ಸಿಂಗ್ ಮತ್ತು ವಿಕಾಸ್ ತನೇಜಾ ಅವರು ತಮ್ಮ ಬಂಧನ ಅಕ್ರಮ ಎಂದು ಘೋಷಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಗುರುವಾರಕ್ಕೆ ಮುಂದೂಡಿದೆ.ಈ ಕುರಿತ ಅರ್ಜಿಗಳು ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ದೀಪಕ್ ಸಿಂಗ್ ಪರ ಹಿರಿಯ ವಕೀಲ ಡಾ. ಎಸ್ ಮುರಳೀಧರ್ ವಾದ ಮಂಡಿಸಿ, ಆರೋಪಿಗಳ ವಿರುದ್ಧ ಭಯೋತ್ಪಾದನೆಗೆ ಸಂಬಂಧಿಸಿದ ಆರೋಪಗಳಿಲ್ಲ. ಅವರು ಎಲ್ಲಿಗೂ ಓಡಿಹೋಗುತ್ತಿರಲಿಲ್ಲ. ಇಡಿ ಅಧಿಕಾರಿಗಳು ಗುರಗಾಂವ್ನಿಂದ ಮಂಗಳವಾರ ಬೆಳಿಗ್ಗೆ 4.15ಕ್ಕೆ ಬಂಧಿಸಿ ಕರೆತಂದಿದ್ದಾರೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ. ಬಂಧನಕ್ಕೆ ಪೂರಕವಾದ ನಂಬಲರ್ಹ ಕಾರಣಗಳನ್ನು ನೀಡಲಾಗಿಲ್ಲ ಎಂದು ವಿವರಿಸಿದರು. ಪೃಥ್ವಿರಾಜ್ ಪರವಾಗಿ ಹಿರಿಯ ವಕೀಲ ಸಜನ್ ಪೂವಯ್ಯ ಅವರು, ಅರ್ಜಿದಾರರ ವಿರುದ್ಧ ಆರೋಪಗಳಿಗೆ ಹೈಕೋರ್ಟ್ ಈ ಹಿಂದೆಯೇ ಆದೇಶ ತಡೆ ನೀಡಿದೆ. ಹೀಗಿದ್ದರೂ ನ್ಯಾಯಾಲಯದ ಅನುಮತಿ ಪಡೆಯದೇ ಅರ್ಜಿದಾರರನ್ನು ಬಂಧಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.ಕಾಲಾವಕಾಶದ ಕೊರತೆಯಿಂದ ನ್ಯಾಯ ಪೀಠ ವಿಚಾರಣೆಯನ್ನು ಗುರುವಾರಕ್ಮೆ ಮುಂದೂಡಿತು. ಗೇಮ್ಸ್ಕ್ರಾಫ್ಟ್ನ ಇತರೆ ಸಂಸ್ಥಾಪಕರು ಮತ್ತು ನಿರ್ದೇಶಕರ ಜೊತೆಗೂಡಿ ದೀಪಕ್ ಸಿಂಗ್ ಅವರು ಮಾಜಿ ಪ್ರಧಾನ ವಿತ್ತ ಅಧಿಕಾರಿ ರಮೇಶ್ ಪ್ರಭು ಜೊತೆ ಸೇರಿ 250 ಕೋಟಿ ಹಣವನ್ನು ಫ್ಯೂಚರ್ಸ್ ಮತ್ತು ಆಪ್ಷನ್ಸ್ ಹಾಗೂ ಮುಚುವಲ್ ಫಂಡ್ಸ್ನಲ್ಲಿ ಹೂಡಿಕೆ ಮಾಡುವುದಾಗಿ ಹೇಳಿ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ಇಡಿ ಆರೋಪಿಸಿದೆ.
