ಸಾರಾಂಶ
ಹಾವೇರಿ: ಬಿಹಾರ ಚುನಾವಣೆ ಫಲಿತಾಂಶದಿಂದ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಲೋಕಸಭಾ ಚುನಾವಣೆ ಬಳಿಕವೂ ದೃಢಪಟ್ಟಿದೆ. ಮಹಾರಾಷ್ಟ್ರ, ಹರಿಯಾಣ, ಬಿಹಾರ ಎಲ್ಲಾ ಕಡೆ ಮೋದಿಯವರ ಜನಪ್ರಿಯತೆ ದೃಢಪಟ್ಟಿದೆ. ಅದೇ ರೀತಿ ಕಾಂಗ್ರೆಸ್ಸಿನವರ ಜಾತಿ ಲೆಕ್ಕಾಚಾರ ಸುಳ್ಳಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರದಲ್ಲಿ ಬಹಳ ದೊಡ್ಡ ಜಾತಿ ರಾಜಕಾರಣ, ಸಮೀಕರಣದ ಬಗ್ಗೆ ಚರ್ಚೆ ಆಗುತ್ತಿತ್ತು. ಕಾಂಗ್ರೆಸ್ ನವರು ಎಲ್ಲರೂ ತಮ್ಮ ಜೊತೆ ಇದ್ದಾರೆ ಅಂತ ತಿಳಿದುಕೊಂಡಿದ್ದರು, ಅದು ಸುಳ್ಳಾಗಿದೆ. ಎಸ್ ಸಿ ಎಸ್ ಟಿ ಸಮುದಾಯದ ಶೇ 80ರಷ್ಟು ಜನ ಬಿಜೆಪಿಗೆ ಮತ ಹಾಕಿದ್ದಾರೆ. ಹಿಂದುಳಿದ ವರ್ಗಗಳು, ಎಸ್ ಸಿ ಎಸ್ ಟಿ ಸಮಾಜ ನಮಗೆ ಬೆಂಬಲ ಕೊಟ್ಟಿದೆ. ಕಾಂಗ್ರೆಸ್ ನವರು ಅತಿಹೆಚ್ಚು ತುಷ್ಟೀಕರಣ ಮಾಡಲು ಹೋದ ಪರಿಣಾಮ ಅಲ್ಪ ಸಂಖ್ಯಾತರ ತದ್ವಿರುದ್ಧವಾಗಿ ಮತಗಳು ಒಂದುಗೂಡಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರು ಮುಂಬರುವ ದಿನಗಳಲ್ಲಿ ದೇಶದ ಹಿತದೃಷ್ಟಿಯಿಂದ ಅಭಿವೃದ್ದಿ ದೃಷ್ಟಿಯಿಂದ ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಜನರ ದೊಡ್ಡ ಆಶೀರ್ವಾದ ಆಗಿದೆ ಎಂದು ಹೇಳಿದರು.ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮತಗಳ್ಳತನದ ಕುರಿತು ಮಾಡಿತ್ತಿರುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮತಗಳ್ಳತನ- ಯಾರಿಂದ ಆಗಿದೆ? ಪುರಾವೆ ಏನಿದೆ? ಮತ ಕಳೆದುಕೊಂಡವರಿಂದಲೂ ಆರೋಪ ಇಲ್ಲ. ಕದ್ದವರು ಯಾರು ಅಂತ ಇಲ್ಲ. ರಾಹುಲ್ ಗಾಂಧಿಯವರೇ ದೇಶದ ಎಲ್ಲಾ ರಾಜ್ಯಗಳಲ್ಲಿ ಮತ ಶುದ್ದೀಕರಣ ಆಗಬೇಕು ಅಂತ ಪತ್ರ ಬರೆದಿದ್ದಾರೆ. ಎಸ್ಐಆರ್ ಮಾಡಲು ಹೊರಟರೆ ಅದನ್ನು ಬೇಡ ಎನ್ನುತ್ತಾರೆ. ಕಾಂಗ್ರೆಸ್ ನವರು ಸುಳ್ಳನ್ನು ಪದೇ ಪದೇ ಹೇಳಿ ಸತ್ಯ ಮಾಡಲು ಹೋಗಿದ್ದನ್ನು ಜನ ನೋಡಿದಾರೆ, ಅವರ ಅರಾಜಕತೆ ನೋಡಿದ್ದಾರೆ. ನಾಯಕರಿಗಿಂತ ಜನ ಬುದ್ದಿವಂತರಿದ್ದಾರೆ ಎಂದು ಬಿಹಾರ್ ಜನ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಬಿಜೆಪಿ ಬಹುಮತ:ಬಿಹಾರ ಚುನಾವಣೆ ಫಲಿತಾಂಶ ರಾಜ್ಯ ಬಿಜೆಪಿಗೆ ಯಾವ ರೀತಿಯ ಪಾಠವಾಗುತ್ತದೆ ಎಂದು ಕೇಳಿದ ಪ್ರಶ್ನೆಗೆ ರಾಜ್ಯದ ದುಷ್ಟ ಕೆಟ್ಟ ಕಾಂಗ್ರೆಸ್ ಸರ್ಕಾರದ ವಿರುದ್ದ ನಾವೆಲ್ಲ ಒಗ್ಗಟ್ಟಾಗಿ ಜನಪರವಾದ ಹೋರಾಟಗಳನ್ನು ಮಾಡಿದರೆ ಖಂಡಿತವಾಗಿ ಮುಂದಿನ ಚುನಾವಣೆಯಲ್ಲಿ ಖಂಡಿತ ಬಿಜೆಪಿ ಬಹುಮತ ಬರಲಿದೆ ಎಂದು ಹೇಳಿದರು.ಚುನಾವಣೆ ಸಂದರ್ಭದಲ್ಲಿ ಬಾಂಬ್ ಬ್ಲಾಸ್ಟ್ ಆಗಿರುವ ಬಗ್ಗೆ ಕಾಂಗ್ರೆಸ್ ನಾಯಕರು ಮಾಡಿರುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಾಂಬ್ ಬ್ಲಾಸ್ಟ್ ಗೂ ಚುನಾವಣೆಗೂ ಸಂಬಂಧ ಇಲ್ಲ. ಕಾಂಗ್ರೆಸ್ ನವರು ಎಲ್ಲದರಲ್ಲೂ ರಾಜಕಾರಣ ಮಾಡುತ್ತಾರೆ. ಜನರು ಬುದ್ದಿವಂತರಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರವೇ ಹೊಣೆ: ಕಬ್ಬಿನ ದರ ವಿಚಾರದಲ್ಲಿ ಮುಧೋಳದಲ್ಲಿ ಗಲಾಟೆ ಆಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ಬೆಳಗಾವಿಯಲ್ಲಿ ತೋರಿಸಿದ ಆಸಕ್ತಿ ಮುಧೋಳದಲ್ಲಿ ತೋರಿಸಿಲ್ಲ. ಇದಕ್ಕೆ ಸರ್ಕಾರವೇ ನೇರ ಹೊಣೆಸರಿಯಾದ ಸಮಯದಲ್ಲಿ ನಿಭಾಯಿಸಿದ್ದರೆ ಅವಘಡ ತಪ್ಪಿಸಬಹುದಿತ್ತು. ಈ ಬಗ್ಗೆ ತನಿಖೆ ಆಗಲಿ, ಮುಗ್ದ ರೈತರಿಗೆ ಆದ ಕಬ್ಬಿನ ನಷ್ಟ ಸರ್ಕಾವರೇ ತುಂಬಿಕೊಡಲಿ. ಇದು ಬೇಜವಾಬ್ದಾರಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಸಚಿವ ಈಶ್ವರ್ ಖಂಡ್ರೆ ಘಟನೆಗೆ ಬಿಜೆಪಿ ಕಾರಣ ಎಂದು ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಅವರು ಈಶ್ವರ ಖಂಡ್ರೆಯವರಿಗೆ ಏನು ಗೊತ್ತು? ಇದಕ್ಕೆ ಬಿಜೆಪಿಯವರು ಹೇಗೆ ಕಾರಣ? ಪ್ರತಿಭಟನೆ ಕುಳಿರುವ ರೈತರು ಎಲ್ಲ ಜಿಲ್ಲೆಗಳಲ್ಲಿ ಸರ್ಕಾರದ ವಿರುದ್ದ ತಿರುಗಿಬಿದ್ದಿದ್ದಾರೆ ಅದು ಅವರ ಕಣ್ಣಿಗೆ ಕಾಣದಿದ್ದರೆ ದುರ್ದೈವ ಎಂದು ಹೇಳಿದರು.ವೃಕ್ಷಮಾತೆಗೆ ಸಂತಾಪ:ವೃಕ್ಷಮಾತೆ, ಶತಾಯುಷಿ ಸಾಲು ಮರದ ತಿಮ್ಮಕ್ಕ ಅವರ ನಿಧನದ ಶುದ್ಧಿ ಕೇಳಿ ಅತ್ಯಂತ ಆಘಾತವಾಗಿದೆ. ಸಾವಿರಾರು ಗಿಡಗಳನ್ನು ನೆಟ್ಟು ಮಕ್ಕಳಂತೆ ಸಲುಹಿ ತನ್ನ ಇಡೀ ಜೀವನವನ್ನೇ ಪರಿಸರದ ಉಳುವಿಗಾಗಿ ಮುಡುಪಾಗಿಟ್ಟು ಅವರು ಮಾಡಿರುವ ಪರಿಸರ ಸೇವೆ ಸದಾಕಾಲ ಅವರನ್ನು ಜೀವಂತವಾಗಿಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.
ತಿಮ್ಮಕ್ಕ ಅವರ ಸಾಧನೆಗೆ ಪದ್ಮಶ್ರೀ, ರಾಜ್ಯೋತ್ಸವ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರನ್ನು ಅರಸಿ ಬಂದಿದ್ದವು. ಅವರ ಅಗಲಿಕೆಯಿಂದ ನಾಡು ಹಿರಿಯ ಜೀವವನ್ನು ಕಳೆದುಕೊಂಡು ಬಡವಾದಂತಾಗಿದೆ. ತಿಮ್ಮಕ್ಕ ಅವರ ಕಾರ್ಯ ಸದಾ ಪ್ರೇರಣೆಯಾಗಿದೆ. ದೇವರು ಹಿರಿಯ ಜೀವಕ್ಕೆ ಚಿರ ಶಾಂತಿ ನೀಡಲಿ, ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಎಲ್ಲ ಅವರ ಅಭಿಮಾನಿಗಳಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪದಲ್ಲಿ ತಿಳಿಸಿದ್ದಾರೆ.;Resize=(128,128))
;Resize=(128,128))
;Resize=(128,128))