ಕಂದಾಯ ಸೇವೆಗಳ ವಿಶೇಷ ಆಂದೋಲನಕ್ಕೆ ಮಹಮದ್ ಹ್ಯಾರಿಸ್ ಸುಮೇರ್ ಚಾಲನೆ

| Published : May 14 2024, 01:08 AM IST

ಕಂದಾಯ ಸೇವೆಗಳ ವಿಶೇಷ ಆಂದೋಲನಕ್ಕೆ ಮಹಮದ್ ಹ್ಯಾರಿಸ್ ಸುಮೇರ್ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಂದಾಯ ಇಲಾಖೆ ರೈತರ ಮತ್ತು ಸರ್ಕಾರದ ನಡುವಿನ ಸಂಬಂಧಗಳನ್ನು ಬೆಸೆಯುವ ಸೇತುವೆಯಂತೆ ಕಾರ್ಯನಿರ್ವಹಿಸುವ ಇಲಾಖೆಯಾಗಿದೆ. ಕಂದಾಯ ಇಲಾಖೆಯ ವಿವಿಧ ಸೇವೆಗಳು ರೈತರನ್ನು ತ್ವರಿತವಾಗಿ ತಲುಪಬೇಕೆನ್ನುವ ಉದ್ದೇಶದಿಂದ ಆಂದೋಲನದ ರೀತಿಯಲ್ಲಿ ಮುಂದಿನ 15 ದಿನಗಳಲ್ಲಿ ಈಗಾಗಲೇ ಹೋಬಳಿವಾರು ಮತ್ತು ಕಂದಾಯ ವೃತ್ತವಾರು ಬಾಕಿಯಿರುವ ಅರ್ಜಿಗಳ ಮಾಹಿತಿಯನ್ನು ಪಡೆದು ಅವುಗಳ ವಿಲೇವಾರಿಗೆ ಹೆಚ್ಚಿನ ಗಮನ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಹುಣಸೂರು

ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ಕಂದಾಯ ಸೇವೆಗಳ ವಿಶೇಷ ಆಂದೋಲನ ಕಾರ್ಯಕ್ರಮಕ್ಕೆ ಉಪ ವಿಭಾಗಾಧಿಕಾರಿ ಮಹಮದ್ ಹ್ಯಾರಿಸ್ ಸುಮೇರ್ ಚಾಲನೆ ನೀಡಿದರು.

ಸೋಮವಾರ ಗ್ರಾಮದ ಗ್ರಾಪಂ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಂದಾಯ ಇಲಾಖೆ ರೈತರ ಮತ್ತು ಸರ್ಕಾರದ ನಡುವಿನ ಸಂಬಂಧಗಳನ್ನು ಬೆಸೆಯುವ ಸೇತುವೆಯಂತೆ ಕಾರ್ಯನಿರ್ವಹಿಸುವ ಇಲಾಖೆಯಾಗಿದೆ. ಕಂದಾಯ ಇಲಾಖೆಯ ವಿವಿಧ ಸೇವೆಗಳು ರೈತರನ್ನು ತ್ವರಿತವಾಗಿ ತಲುಪಬೇಕೆನ್ನುವ ಉದ್ದೇಶದಿಂದ ಆಂದೋಲನದ ರೀತಿಯಲ್ಲಿ ಮುಂದಿನ 15 ದಿನಗಳಲ್ಲಿ ಈಗಾಗಲೇ ಹೋಬಳಿವಾರು ಮತ್ತು ಕಂದಾಯ ವೃತ್ತವಾರು ಬಾಕಿಯಿರುವ ಅರ್ಜಿಗಳ ಮಾಹಿತಿಯನ್ನು ಪಡೆದು ಅವುಗಳ ವಿಲೇವಾರಿಗೆ ಹೆಚ್ಚಿನ ಗಮನ ನೀಡಲಾಗುವುದು ಎಂದರು.

ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ವರೆಗೆ ಆಯಾ ಕಂದಾಯ ವೃತ್ತವಾರು ನಿಯೋಜನೆಗೊಂಡಿರುವ ಉಪ ತಹಸೀಲ್ದಾರ್ ಮತ್ತು ರಾಜಸ್ವ ನಿರೀಕ್ಷಕರು ತಮ್ಮ ಕರ್ತವ್ಯ ನಿರ್ವಹಿಸಬೇಕು.

ಮಧ್ಯಾಹ್ನ 2 ಗಂಟೆಯ ನಂತರ ಕಚೇರಿಗೆ ತೆರಳಿ, ಬರಪರಿಹಾರ ವಿತರಣೆ, ಮಳೆಹಾನಿ, ಲ್ಯಾಂಡ್ ಮ್ಯಾಪಿಂಗ್, ಬಗರ್ ಹುಕುಂ, ಕಂದಾಯ ಗ್ರಾಮ ರಚನೆ ಮುಂತಾದ ಕಾರ್ಯಗಳನ್ನು ನಿರ್ವಹಿಸಬೇಕು. ಸರ್ಕಾರ ಆದೇಶದಂತೆ ಆಂದೋಲನ ಕಾರ್ಯಕ್ರಮದಲ್ಲಿ ಆಧಾರ್ ಸೀಡಿಂಗ್, ಫ್ರೂಟ್ ಅಪ್ಲಿಕೇಶನ್, ಪೌತಿ ಖಾತೆಯಂತಹ ಸೇವೆಗಳನ್ನು ನೀಡುವ ಕಾರ್ಯ ನಡೆಸಬೇಕು. ದಿನನಿತ್ಯ ಆಂದೋಲನದ ಮೂಲಕ ಆಗಿರುವ ಬೆಳವಣಿಗೆಗಳ ಕುರಿತು ತಮಗೆ ಮಾಹಿತಿ ಒದಗಿಸಬೇಕು ಎಂದು ಅವರು ಸೂಚಿಸಿದರು.

ತಹಸೀಲ್ದಾರ್ ಎಂ. ನಯನಾ ಮಾತನಾಡಿ, ತಾಲೂಕಿನಾದ್ಯಂತ ಇಂದಿನಿಂದ ವಿವಿಧೆಡೆ ಆಂದೋಲನಕ್ಕೆ ಚಾಲನೆ ನೀಲಾಗಿದೆ. ಮನೆಬಾಗಿಲಿಗೆ ಸೇವೆ ಲಭ್ಯವಾಗುತ್ತಿದ್ದು, ಸಾರ್ವಜನಿಕರು ಮತ್ತು ರೈತರು ಕಾರ್ಯಕ್ರಮದ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು ಎಂದು ಅವರು ಕೋರಿದರು.

ಉಪ ತಹಸೀಲ್ದಾರ್ ಅರುಣ್ ಕುಮಾರ್, ರಾಜಸ್ವ ನಿರೀಕ್ಷಕ ಹೇಮಂತ್ ಕುಮಾರ್, ಗ್ರಾಮ ಲೆಕ್ಕಿಗ ಶ್ರೀವತ್ಸ ಸೇರಿದಂತೆ ಪಂಚಾಯಿತಿ ಸಿಬ್ಬಂದಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.