ಶಾಸಕ ಜ್ಞಾನೇಂದ್ರರಿಗೆ ಹಣ ಬಲ ಅಹಂಕಾರ: ಕಿಮ್ಮನೆ ಟೀಕೆ
KannadaprabhaNewsNetwork | Published : Oct 21 2023, 12:30 AM IST
ಶಾಸಕ ಜ್ಞಾನೇಂದ್ರರಿಗೆ ಹಣ ಬಲ ಅಹಂಕಾರ: ಕಿಮ್ಮನೆ ಟೀಕೆ
ಸಾರಾಂಶ
₹5 ಸಾವಿರ ಕೋಟಿ ಇದ್ದ ಬಿಜೆಪಿ ಪಕ್ಷದ ಪಾರ್ಟಿ ಫಂಡ್ ಕೇವಲ ಐದು ವರ್ಷದಲ್ಲಿ ₹10 ಸಾವಿರ ಕೋಟಿ ಹೇಗಾಯ್ತು
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ಕಳೆದ ಚುನಾವಣೆಯಲ್ಲಿ ಹಣದ ಬಲದಿಂದಲೇ ಗೆದ್ದಿರುವ ಶಾಸಕ ಆರಗ ಜ್ಞಾನೇಂದ್ರ ತೀರ್ಥಹಳ್ಳಿಯಲ್ಲಿ ದ್ವೇಷದ ರಾಜಕಾರಣಕ್ಕೆ ನಾಂದಿ ಹಾಡಿದ್ದಾರೆ. ನಾನು ಏನೂ ಮಾಡಿದರೂ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂಬ ಅಹಂಕಾರದಲ್ಲಿದ್ದಾರೆ ಎಂದು ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಆರೋಪಿಸಿದರು. ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಚುನಾವಣೆ ಗೆಲುವಿನಲ್ಲಿ ಹಲವು ವಿಚಾರಗಳು ನಿರ್ಣಾಯಕವಾಗಿರುತ್ತವೆ. ಹಾಗಂತ ಸೋತವರು ಕೆಟ್ಟವರು ಎಂಬ ಅರ್ಥವಲ್ಲ. ಕಾಂಗ್ರೆಸ್ನವರು ಭ್ರಷ್ಟಾಚಾರಿಗರು ಎಂದು ಗುಲ್ಲೆಬ್ಬಿಸುವ ಜ್ಞಾನೇಂದ್ರ ಅವರು, ವ್ಯಾಪಾರ ಮಾಡಿದ ಹಣದಲ್ಲಿ 10 ಚುನಾವಣೆ ಮಾಡಿದ್ದಾರೆಯೇ? ಕಳೆದ ಚುನಾವಣೆಯಲ್ಲಿ ಒಬ್ಬ ಗ್ರಾಮ ಪಂಚಾಯಿತಿ ಸದಸ್ಯರಿಗೆ ₹2 ಲಕ್ಷ ಆಮಿಷ ಒಡ್ಡಿದ್ದರು. ಮುಖ್ಯವಾಗಿ ₹5 ಸಾವಿರ ಕೋಟಿ ಇದ್ದ ಬಿಜೆಪಿ ಪಕ್ಷದ ಪಾರ್ಟಿ ಫಂಡ್ ಕೇವಲ ಐದು ವರ್ಷದಲ್ಲಿ ₹10 ಸಾವಿರ ಕೋಟಿ ಹೇಗಾಯ್ತು ಎಂಬುದನ್ನೂ ಅರಿಯಬೇಕಿದೆ ಎಂದರು. ಬಿ.ಎಸ್. ವಿಶ್ವನಾಥನ್ ಸಂತಾಪ ಸೂಚಕ ಸಭೆಯಲ್ಲೂ ಶಾಸಕರು ದ್ವೇಷವನ್ನು ಬಿಡದೇ ಆರ್.ಎಂ. ಮಂಜುನಾಥಗೌಡ ಮತ್ತು ಎಚ್.ಎನ್. ವಿಜಯದೇವ್ ಅವರನ್ನು ಟೀಕೆ ಮಾಡಿದ್ದರು. ಗೃಹ ಸಚಿವರಾಗಿ ಎಲೆಚುಕ್ಕಿ ರೋಗದ ಪರಿಹಾರದ ಸಲುವಾಗಿ ಘೋಷಣೆ ಮಾಡಿದ್ದ ₹10 ಕೋಟಿಗಳಲ್ಲಿ ಒಂದು ರು. ಕೂಡ ಬಂದಿಲ್ಲ. ಸಾಗರ ಶಾಸಕರು ಮತ್ತು ನಮ್ಮ ಪ್ರಯತ್ನದಿಂದ ₹19 ಲಕ್ಷ ಪರಿಹಾರದ ಹಣ ಬಂದಿದೆ ಎಂದು ಹೇಳಿದರು. ಹೆದ್ದೂರಿನ ಕಾಂತರಾಜ್ ಎಂಬವರು ತಮ್ಮ ತಾಯಿ ಸವಿತಮ್ಮ ಅವರ ಹೃದಯ ಚಿಕಿತ್ಸೆಗೆ ಸಂಬಂಧಿಸಿ ₹6 ಲಕ್ಷ ವೆಚ್ಚದ ಬಗ್ಗೆ ಸಿಎಂ ಪರಿಹಾರ ಕೊಡಿಸುವಂತೆ ಕಳೆದ ವರ್ಷ ಜುಲೈ ತಿಂಗಳಲ್ಲಿ ನೀಡಿದ ₹4.61 ಸಾವಿರದ ಬಿಲ್ ಮತ್ತು ಅರ್ಜಿಯನ್ನು ತಮ್ಮ ಪಕ್ಷದವರು ಅಲ್ಲ ಎಂಬ ಕಾರಣಕ್ಕೆ ಸಿಎಂ ಕಚೇರಿಗೂ ಕಳಿಸದೇ ಪರಿಹಾರ ಸಿಗುವುದನ್ನು ತಪ್ಪಿಸಿದ್ದಾರೆ. ಇದು ಜ್ಞಾನೇಂದ್ರ ಅವರ ದ್ವೇಷದ ರಾಜಕಾರಣಕ್ಕೆ ಮಾದರಿ. ಇನ್ನಾದರೂ ದ್ವೇಷದ ರಾಜಕಾರಣವನ್ನು ಬಿಡಬೇಕು ಎಂದು ಸಲಹೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಕೆಸ್ತೂರು ಮಂಜುನಾಥ್, ಪಪಂ ಅಧ್ಯಕ್ಷೆ ಗೀತಾ ರಮೇಶ್, ಉಪಾಧ್ಯಕ್ಷ ರಹಮತ್ ಉಲ್ಲಾ ಅಸಾದಿ. ಡಿ.ಎಸ್. ವಿಶ್ವನಾಥ ಶೆಟ್ಟಿ, ಅಮರನಾಥ ಶೆಟ್ಟಿ, ವಿಲಿಯಂ ಮಾರ್ಟಿಸ್, ಪಡುವಳ್ಳಿ ಹಷೇಂದ್ರ ಇದ್ದರು. - - - -19ಟಿಟಿಎಚ್01: ತೀರ್ಥಹಳ್ಳಿ ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ಮಾಕರ್ ಮಾತನಾಡಿದರು.