ಸಾರಾಂಶ
ಎಸ್.ಎಂ. ಸೈಯದ್ಗಜೇಂದ್ರಗಡ: ಬ್ಯಾಂಕ್ ಖಾತೆ ಓಟಿಪಿ ಹಾಗೂ ಇತರ ಮಾಹಿತಿಯನ್ನು ಹಂಚಿಕೊಳ್ಳದಂತೆ ಜಾಗೃತಿ ಕರೆಗಳು ಬಳಿಕವೂ ಸಹ ಸೈಬರ್ ವಂಚಕರ ದಾಳಕ್ಕೆ ಅನೇಕ ಗ್ರಾಹಕರು ಮೋಸ ಹೋದ ವರದಿಗಳು ಸಾಮಾನ್ಯ. ಆದರೆ ಇಲ್ಲಿ ಗ್ರಾಹಕರಿಗೆ ತಿಳಿಯದಂತೆ ಖಾತೆಯಿಂದ ಹಣ ಲಪಾಟಿಸಿಯಿಸಿರುವ ಘಟನೆ ನಡೆದಿದ್ದು, ಸಾರ್ವಜನಿರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್ನ ಗ್ರಾಹಕಿಯಾದ ಬಸವ್ವ ಲಕ್ಕಲಕಟ್ಟಿ ಅವರ ಉಳಿತಾಯ "೮೯೦೨೧೦೦೭೫೩೫ " ಖಾತೆಯಿಂದ ಸೆ.೯ರಂದು ಮಧ್ಯಾಹ್ನ ೩ ಗಂಟೆ ೪೯.೨೮ ನಿಮಿಷಕ್ಕೆ ₹ ೬೦೦೦ ಡ್ರಾ ಮಾಡಲಾದ ಬಗ್ಗೆ ಬ್ಯಾಂಕ್ ಖಾತೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆಗೆ ಬಂದ ಎಸ್ಎಂಎಸ್ ನೋಡಿ ಗ್ರಾಹಕರು ಒಂದು ಕ್ಷಣ ಶಾಕ್ ಆಗಿದ್ದಾರೆ. ಸೆ.೧೦ರಂದು ಬ್ಯಾಂಕ್ಗೆ ಹೋಗಿ ವಿಚಾರಿಸಿದಾಗ ಖಾತೆಯಿಂದ ₹ ೬೦೦೦ ಕಡಿತವಾಗಿದ್ದು ಖಚಿತವಾಗಿದೆ. ನಾವು ಬ್ಯಾಂಕಿಗೆ ಬಂದು ಹಣ ಪಡೆದಿಲ್ಲ, ಅಥವಾ ಯಾವುದೇ ಸೇವಾ ಕೇಂದ್ರದಿಂದಲೂ ಹಣ ಪಡೆದಿಲ್ಲ, ಯಾರಿಗೂ ಓಟಿಪಿ ಹೇಳಿಯೂ ಇಲ್ಲ ಆದರೂ ಹಣ ಕಡಿತವಾದ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರ ಬಳಿ ದೂರಿದ್ದಲ್ಲದೇ, ಬ್ಯಾಂಕಿಂಗ್ ವ್ಯವಸ್ಥೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.ಬಳಿಕ ಇಂದು ಹಣ ಕಳೆದುಕೊಂಡ ಗ್ರಾಹಕರು ಕರ್ನಾಟಕ ಗ್ರಾಮೀಣ ಬ್ಯಾಂಕ್ ಖಾತೆಯಿಂದ ತಮಗೆ ಗೊತ್ತಿಲ್ಲದೆ ಕಳ್ಳತನವಾದ ಘಟನೆಯನ್ನು ಪರಿಶೀಲಿಸಿ ಮರಳಿ ಖಾತೆಗೆ ಹಣವನ್ನು ಜಮೆ ಮಾಡಿಸುವುದರ ಜತೆಗೆ ತಪ್ಪಿತಸ್ಥರಿಗೆ ಶಿಕ್ಷೆಗೆ ಗುರಿ ಮಾಡಬೇಕು ಎಂದು ಶಾಖೆಯ ವ್ಯವಸ್ಥಾಪಕರಿಗೆ ಅರ್ಜಿ ಜತೆಗೆ ಆನ್ಲೈನ್ಲ್ಲಿ ಸೈಬರ್ ಕ್ರೈಂ ಗೆ ದೂರನ್ನು ನೀಡಿದ್ದಾರೆ.
"ರಾಜ್ಯ ಸೇರಿ ದೇಶದಲ್ಲಿ ಜನರಿಗೆ ವಿವಿಧ ಆಮಿಷಗಳನ್ನು ತಂದೊಡ್ಡಿ ಓಟಿಪಿ ಹಾಗೂ ಎಟಿಎಂ ಸಂಖ್ಯೆಗಳನ್ನು ಹೇಳಿದ ಗ್ರಾಹಕರ ಖಾತೆಯಿಂದ ಹಣ ಕಳ್ಳತನವಾದ ಬಗ್ಗೆ ಸಾಕಷ್ಟು ವರದಿಗಳಾಗುತ್ತಿವೆ. ಆದರೆ ಪಟ್ಟಣದಲ್ಲಿ ಗ್ರಾಹಕರ ಎಟಿಎಂ ಅಥವಾ ಒಟಿಪಿ ಹಾಗೂ ಸಹಿ, ಹೆಬ್ಬೆಟ್ಟು ಹಾಗೂ ಆಧಾರ್ ಬಳಸದೆ ಖಾತೆಯಿಂದ ₹ ೬೦೦೦ ಕಳ್ಳತನವಾಗಿರುವುದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಸೈಬರ್ ವಂಚಕರಿಂದ ಗ್ರಾಹಕರನ್ನು ರಕ್ಷಿಸಲು ಮತ್ತಷ್ಟು ಬಲಿಷ್ಠವಾದ ನಿಯಮಗಳನ್ನು ಜಾರಿಗೆ ತರಬೇಕಿದೆ ಎಂಬ ಆಗ್ರಹವು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.ಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್ನ ಗ್ರಾಹಕ ಖಾತೆಯಿಂದ ₹ ೬೦೦೦ ಫ್ರಾಡ್ ಆದ ಬಗ್ಗೆ ಗ್ರಾಹಕರು ಶಾಖೆಗೆ ಹಾಗೂ ಆನ್ಲೈನ್ನಲ್ಲಿ ಸೈಬರ್ ಕ್ರೈಂಗೆ ಸೆ.೧೧ರಂದು ದೂರನ್ನು ನೀಡಿದ್ದಾರೆ. ಘಟನೆ ಕುರಿತು ಬ್ಯಾಂಕ್ನ ಪ್ರಧಾನ ಕಚೇರಿಗೆ ಮಾಹಿತಿ ರವಾನಿಸಲಾಗಿದೆ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖಾ ವ್ಯವಸ್ಥಾಪಕ ನರಸಿಂಹ ಹೇಳಿದರು.
"ಹಣ ಸುರಕ್ಷಿತವಾಗಿರಲಿ ಎಂದು ಬ್ಯಾಂಕ್ನಲ್ಲಿ ಇಟ್ಟಿರುತ್ತೇವೆ. ಆದರೆ ಎಟಿಎಂ, ಓಟಿಪಿ ಹಾಗೂ ನನ್ನ ಸಹಿ ಇಲ್ಲದೆ ಖಾತೆಯಿಂದ ₹ ೬೦೦೦ ಕಳ್ಳತನಾವಾಗಿದ್ದು ಆಘಾತ ತಂದಿದೆ. ದೊಡ್ಡ ಹಣ ಕಳ್ಳತನವಾಗಿದ್ದರೆ ನಮ್ಮ ಪರಿಸ್ಥಿತಿ ಏನಾಗುತ್ತಿತ್ತು. ಗ್ರಾಹಕರಿಗೆ ಇಂತಹ ವಂಚನೆಗಳಿಂದ ರಕ್ಷಿಸಲು ಮುಂದಾಗಬೇಕು ಎಂದು ಬ್ಯಾಂಕ್ ಖಾತೆಯಿಂದ ಹಣ ಕಳೆದುಕೊಂಡ ಬಸವ್ವ ಲಕ್ಕಲಕಟ್ಟಿ ಹೇಳಿದರು.