ಹಜರತ್ ದರ್ಗಾದ ಹುಂಡಿ ಹಣ ಕಳವು: ದರ್ಗಾದ ಇಸ್ಮಾಯಿಲ್ ಸಾಬ್‌

| Published : May 19 2025, 12:13 AM IST

ಹಜರತ್ ದರ್ಗಾದ ಹುಂಡಿ ಹಣ ಕಳವು: ದರ್ಗಾದ ಇಸ್ಮಾಯಿಲ್ ಸಾಬ್‌
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಹಜರತ್ ನಾಡಬಂದ್ ಷಾವಲಿ ದರ್ಗಾದ ಹುಂಡಿಯ ಹಣ ಕಳವು ವಿಚಾರದ ಬಗ್ಗೆ ಈವರೆಗೆ ವಕ್ಫ್ ಮಂಡಳಿ ಅಧಿಕಾರಿಗಳಾಗಲಿ ದರ್ಗಾದ ಆಡಳಿತ ಮಂಡಳಿಯವರಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದರ್ಗಾದ ಅರ್ಚಕ ಇಸ್ಮಾಯಿಲ್ ಸಾಬ್ ಮುಜಾವರ್ ಆರೋಪಿಸಿದರು.

ಯಾವುದೇ ಕ್ರಮ ಕೈಗೊಳ್ಳದ ವಕ್ಫ್ ಮಂಡಳಿ

ಕನ್ನಡಪ್ರಭ ವಾರ್ತೆ ಹರಿಹರ

ನಗರದ ಹಜರತ್ ನಾಡಬಂದ್ ಷಾವಲಿ ದರ್ಗಾದ ಹುಂಡಿಯ ಹಣ ಕಳವು ವಿಚಾರದ ಬಗ್ಗೆ ಈವರೆಗೆ ವಕ್ಫ್ ಮಂಡಳಿ ಅಧಿಕಾರಿಗಳಾಗಲಿ ದರ್ಗಾದ ಆಡಳಿತ ಮಂಡಳಿಯವರಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದರ್ಗಾದ ಅರ್ಚಕ ಇಸ್ಮಾಯಿಲ್ ಸಾಬ್ ಮುಜಾವರ್ ಆರೋಪಿಸಿದರು.

ನಗರದ ಪತ್ರಿಕಾಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ತಿಂಗಳ ಏ.18ರ ಬೆಳಗಿನ ಜಾವ ವಿಷಯ ಗೊತ್ತಾಗಿದೆ. ಏ.17ರಂದು ಹುಂಡಿಯಲ್ಲಿ ಹಣ ಸಂಪೂರ್ಣ ತುಂಬಿತ್ತು. ಏ.18ರಂದು ನೋಡಿದಾಗ ಖಾಲಿಯಾಗಿತ್ತು. ಆವರಣದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಬೇರೆಡೆ ತಿರುಗಿಸಿ ಮಧ್ಯರಾತ್ರಿ ವ್ಯವಸ್ಥಿತವಾಗಿ ಹುಂಡಿಯ ಹಣ ಕಳ್ಳತನ ಮಾಡಲಾಗಿದೆ ಎಂದರು.

ನಗರದ ತುಂಗಭದ್ರ ನದಿಯ ಬಳಿ ಈ ದರ್ಗಾ ಇದೆ. ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ಈ ದರ್ಗಾ ಒಂದು ಸೌಹಾರ್ದದ ಕೇಂದ್ರವಾಗಿದೆ. ಮಧ್ಯ ಕರ್ನಾಟಕದಲ್ಲಿ ಅನೇಕ ಭಕ್ತಾದಿಗಳು ಇದ್ದಾರೆ. ಖ್ಯಾತ ಸೂಫಿ ಸಂತರ ಸ್ಮರಣೆಯಲ್ಲಿರುವ ಈ ದರ್ಗಾ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಡಿಯಲ್ಲಿ ಬರುತ್ತದೆ ಎಂದರು.

ಹುಂಡಿಯ ಹಣ ಕಳ್ಳತನವಾಗಿರುವುದನ್ನು ಗಮನಿಸಿದ ದರ್ಗಾದ ಭಕ್ತರು ನಮಗೆ ವಿಷಯ ತಿಳಿಸಿದರು. ನಾವು ಚರ್ಚೆ ಮಾಡಿ ಏ.19ರಂದು ನಗರದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದೆವು. ಆದರೆ ಪೊಲೀಸರು ವಕ್ಫ್ ಅಧಿಕಾರಿಗಳ ಮೂಲಕ ದೂರು ಬರಲಿ ಎಂದರು.

ದಾವಣಗೆರೆಯಲ್ಲಿರುವ ವಕ್ಫ್ ಮಂಡಳಿ ಅಧಿಕಾರಿಗಳನ್ನು ಭೇಟಿ ಮಾಡಿ ದೂರು ನೀಡಿದರೂ ಅವರು ಹಾರಿಕೆ ಉತ್ತರಗಳನ್ನು ನೀಡಿ, ಪರಿಶೀಲನೆ ಮಾಡೋಣ ಎಂದರು. ದರ್ಗಾದ ಆವರಣದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ಫುಟ್‍ಯೇಜ್ ಸಂರಕ್ಷಿಸಿ, ಅದರ ಒಂದು ಕಾಪಿಯನ್ನು ನಮಗೆ ನೀಡಿರಿ ಎಂದು ಆರ್‌ಟಿಐ ಅಡಿ ಅರ್ಜಿ ನೀಡಿದರೂ ವಕ್ಫ್ ಅಧಿಕಾರಿಗಳು ಹಾರಿಕೆ ಉತ್ತರ ನೀಡಿದ್ದಾರೆ ಎಂದು ವಿವರಿಸಿದರು.

ಪ್ರಕರಣ ನಡೆದು ಒಂದು ತಿಂಗಳಾದರೂ ವಕ್ಫ್ ಮಂಡಳಿ ಅಧಿಕಾರಿಗಳಾಗಲಿ, ಪೊಲೀಸರಾಗಲಿ, ದರ್ಗಾದ ಆಡಳಿತ ಮಂಡಳಿಯವರಾಗಲಿ ಹುಂಡಿ ಹಣ ಕಳ್ಳತನ ಮಾಡಿದವರ ವಿರುದ್ಧ ಕ್ರಮ ಕೈಗೊಂಡಿಲ್ಲ, ದೂರು ದಾಖಲಿಸಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯತನದಿಂದ ದರ್ಗಾದ ಸಹಸ್ರಾರು ಭಕ್ತಾದಿಗಳಿಗೆ ನೋವುಂಟಾಗಿದೆ ಎಂದರು.

ಮಕಾನ್ ಪ್ರದೇಶದ ನಿವಾಸಿ ಇರ್ಫಾನ್ ಮಾತನಾಡಿ, ಸಂಬಂಧಿತ ಅಧಿಕಾರಿಗಳ ಈ ನಿರ್ಲಕ್ಷ್ಯತನದ ವಿರುದ್ಧ ವಕ್ಫ್ ಮಂಡಳಿ ಮುಖ್ಯಸ್ಥರಿಗೆ, ಇಲಾಖೆಯ ಸಚಿವರಿಗೆ ದೂರು ನೀಡುತ್ತೇವೆ. ಸಾರ್ವಜನಿಕರ ಹಣ ರಕ್ಷಿಸಲು ಹೋರಾಟ ಮಾಡುತ್ತೇವೆ ಎಂದರು.

ಷಹಬಾಜ್‍ ಉಲ್ಲಾ ದರವೇಶ್, ಶಾಹರುಖ್ ದರವೇಶ್, ಕಲೀಮ್‍ ಉಲ್ಲಾ ದರವೇಶ್, ನಯಾಜ್ ಮುಜಾವರ್, ಬಾಷಾ, ರೋಷನ್, ಇತರರು ಇದ್ದರು.