ಚಂದಗುಳಿಯಲ್ಲಿ ೩ ತಿಂಗಳ ಅನ್ನದಾನ ಸೇವೆಗೆ ಚಾಲನೆ

| Published : Aug 01 2025, 12:30 AM IST

ಚಂದಗುಳಿಯಲ್ಲಿ ೩ ತಿಂಗಳ ಅನ್ನದಾನ ಸೇವೆಗೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಘಂಟೆ ಗಣಪತಿ ಮಂದಿರ ನಾಡಿನಾದ್ಯಂತ ಪ್ರಸಿದ್ಧವಾಗಿದೆ.

ಯಲ್ಲಾಪುರ: ತಾಲೂಕಿನ ಚಂದಗುಳಿ ಘಂಟೆ ಗಣಪತಿ ಮಂದಿರದಲ್ಲಿ ಆಗಸ್ಟ್, ಸಪ್ಟೆಂಬರ್, ಅಕ್ಟೋಬರ್ ಮೂರು ತಿಂಗಳ ಮಧ್ಯಾಹ್ನದ ಅನ್ನಪ್ರಸಾದ ಸೇವೆಗೆ ಉದ್ಯಮಿ ವಿವೇಕ ಹೆಬ್ಬಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಇಲ್ಲಿಯ ಘಂಟೆ ಗಣಪತಿ ಮಂದಿರ ನಾಡಿನಾದ್ಯಂತ ಪ್ರಸಿದ್ಧವಾಗಿದೆ. ಅಷ್ಟು ಪ್ರಭಾವ, ಶಕ್ತಿಯನ್ನು ಈ ಗಣಪತಿ ಹೊಂದಿದ್ದಾನೆ. ಅಂತಹ ಪವಿತ್ರ ಕ್ಷೇತ್ರವಾಗಿದೆ ಎಂದು ಹೇಳಿದರು.

ಸಮಾಜದಲ್ಲಿ ಅನೇಕರ ಬಳಿ ಹಣವಿರುತ್ತದೆ. ಆದರೆ ದಾನ ಮಾಡುವ ಮನಸ್ಸು ಇರುವುದಿಲ್ಲ. ಗಣೇಶನ ಅನುಗ್ರಹದಿಂದ ನಮಗೆ ಸಕಲವೂ ದೊರಕಿದೆ. ಹೀಗಾಗಿ ಅನ್ನಪ್ರಸಾದ ಸೇವೆಗೆ ಸಂಕಲ್ಪ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಬಳಗದಲ್ಲಿರುವ ಅನೇಕ ಉದ್ಯಮಿ ಸ್ನೇಹಿತರಿಗೆ ಹೇಳಿ ಇನ್ನೂ ಹೆಚ್ಚಿನ ಅನ್ನದಾನ ಸೇವೆ ಮಾಡುವುದಕ್ಕೆ ಪ್ರಯತ್ನಿಸುತ್ತೇನೆ. ದೇವಸ್ಥಾನದ ಆಡಳಿತ ಮಂಡಳಿಯವರ ಜತೆಯಲ್ಲಿ ಸದಾ ಇರುತ್ತೇವೆ ಎಂದರು.

ದೇವಸ್ಥಾನದ ಅಧ್ಯಕ್ಷ ವಿ. ಲಕ್ಷ್ಮೀನಾರಾಯಣ ಭಟ್ಟ ಮಾತನಾಡಿ, ದಾನಗಳಲ್ಲಿ ಅನ್ನದಾನವೂ ಮಹಾಶ್ರೇಷ್ಠವಾದುದು. ಅನ್ನಬ್ರಹ್ಮನ ಸೇವೆ ಅತ್ಯಂತ ಪುಣ್ಯತಮವಾದುದು. ಅನೇಕರ ಬಳಿ ಹಣವಿರುತ್ತದೆ. ಸೇವೆ ಮಾಡುವ ಮನಸ್ಸಿರುವುದಿಲ್ಲ. ಆ ದೃಷ್ಟಿಯಿಂದ ಶಿವರಾಮ ಹೆಬ್ಬಾರ, ವಿವೇಕ ಹೆಬ್ಬಾರ ಕುಟುಂಬ ೩ ತಿಂಗಳ ಅನ್ನದಾನ ಸೇವೆ ಮಾಡುತ್ತಿರುವುದು ಸಂತಸ ತಂದಿದೆ ಎಂದರು.

ತುರುವೆಕೆರೆಯ ಪ್ರಣವಾನಂದ ಶ್ರೀಗಳು ಈ ಮಂದಿರದಲ್ಲಿ ೨ ತಿಂಗಳ ಕಾಲ ಚಾತುರ್ಮಾಸ ವ್ರತ ಆಚರಿಸುತ್ತಿದ್ದು, ಶ್ರೀಗಳು ಎಲ್ಲರಿಗೂ ಪ್ರಸಾದ ನೀಡಿ, ಆಶೀರ್ವದಿಸಿದರು. ಆಡಳಿತ ಮಂಡಳಿ ಸದಸ್ಯರಾದ ಲಕ್ಷ್ಮೀನಾರಾಯಣ ಭಟ್ಟ ಗುಂಡ್ಕಲ್, ಆರ್.ಎಸ್. ಭಟ್ಟ ದೇಸಾಯಿಮನೆ, ನರಸಿಂಹ ಭಟ್ಟ ಗುಂಡ್ಕಲ್, ನಾಗೇಶ ಭಟ್ಟ ಮಳಲಗಾಂವ್, ಪ್ರಮುಖರಾದ ಟಿ.ಸಿ. ಗಾಂವ್ಕರ, ಸುಬ್ಬಣ್ಣ ಗಾಣಗದ್ದೆ, ವಿ.ಎಸ್. ಭಟ್ಟ, ಗಜಾನನ ಭಟ್ಟ, ಗಣೇಶ ಹೆಗಡೆ, ಕಮಲಾಕರ ನಾಯ್ಕ, ನಾಗರಾಜ ನಾಯ್ಕ ಉಪಸ್ಥಿತರಿದ್ದರು.