ಸಾರಾಂಶ
ಮೂಡುಬಿದ್ರಿ ಕೋ-ಓಪರೇಟಿವ್ ಸರ್ವಿಸ್ ಸೊಸೈಟಿಯು ೨೦೨೪-೨೫ರ ಸಾಲಿನಲ್ಲಿ ೫೭.೩೩ ಕೋಟಿ ರು. ಆದಾಯದೊಂದಿಗೆ ೧೦.೪೨ ಕೋಟಿ ರು.ಗೂ ಮಿಕ್ಕಿ ಲಾಭ ಗಳಿಸಿದೆ. ಸದಸ್ಯರಿಗೆ ಸತತ ೨೫ನೇ ವರ್ಷದಲ್ಲೂ ೨೫ ಶೇ. ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ.
ಮೂಡುಬಿದಿರೆ: ರಾಜ್ಯದ ಹಿರಿಯ ಸಹಕಾರಿ ಸಂಸ್ಥೆಗಳಲ್ಲಿ ಒಂದಾಗಿರುವ ಮತ್ತು 109ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಮೂಡುಬಿದ್ರಿ ಕೋ-ಓಪರೇಟಿವ್ ಸರ್ವಿಸ್ ಸೊಸೈಟಿಯು ೨೦೨೪-೨೫ರ ಸಾಲಿನಲ್ಲಿ ೫೭.೩೩ ಕೋಟಿ ರು. ಆದಾಯದೊಂದಿಗೆ ೧೦.೪೨ ಕೋಟಿ ರು.ಗೂ ಮಿಕ್ಕಿ ಲಾಭ ಗಳಿಸಿದೆ. ಸದಸ್ಯರಿಗೆ ಸತತ ೨೫ನೇ ವರ್ಷದಲ್ಲೂ ೨೫ ಶೇ. ಡಿವಿಡೆಂಡ್ ನೀಡಲಾಗುವುದು ಎಂದು ಸೊಸೈಟಿ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ತಿಳಿಸಿದರು.
ಇಲ್ಲಿನ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕನ್ನಡ ಭವನದಲ್ಲಿ ಭಾನುವಾರ ನಡೆದ ಸೊಸೈಟಿಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ವಿಶೇಷ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ. ಮಾತನಾಡಿ, ಲಾಭದಲ್ಲಿ ೫೦ಶೇ.ಗಿಂತಲೂ ಅಧಿಕ ಅಂದರೆ ೪,೫೦,೦೦,೦೦೦ಯಷ್ಟನ್ನು ಕ್ಷೇಮನಿಧಿಗಿರಿಸಿದ್ದು 25 ಶೇ.ಯನ್ನು ಸದಸ್ಯರಿಗೆ ಪಾಲು ಮುನಾಫೆಯಾಗಿ ಇರಿಸಲಾಗಿದೆ. 12,746 ಸದಸ್ಯರಿರುವ ಸೊಸೈಟಿಯ ಅಧಿಕೃತ ಪಾಲು ಬಂಡವಾಳದ ಮಿತಿಯನ್ನು 30 ಕೋಟಿ ರೂ.ಗೇರಿಸಲು ನಿರ್ಧರಿಸಲಾಗಿದೆ ಎಂದರು.ಕೇಂದ್ರ ಸರ್ಕಾರದ ಸೂಚನೆಯಂತೆ ಸಾಮಾನ್ಯ ತಂತ್ರಜ್ಞಾನ ಅವಡಿಸುವ ಬಗ್ಗೆ ಚರ್ಚಿಸಿ ತ್ರಿಮುಖ ಒಪ್ಪಂದದ ಮೂಲಕ ಸೊಸೈಟಿಗೆ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳಲು ನಿರ್ಧರಿಸಲಾಯಿತು.ಕೆಲವು ಲಿಖಿತ ಪ್ರಶ್ನೆಗಳಿಗೆ ನಿರ್ದೇಶಕ ಜಯರಾಮ ಕೋಟ್ಯಾನ್ ಉತ್ತರ ಪ್ರಕಟಿಸಿದರು.
ನಿರ್ದೇಶಕ, ಮಾಜಿ ಸಚಿವ ಕೆ. ಅಭಯಚಂದ್ರ ಅವರು ಮಾತನಾಡಿ, ಸುದೀರ್ಘಕಾಲ ಸೊಸೈಟಿಯ ಅಧ್ಯಕ್ಷರಾಗಿದ್ದ ದಿ. ಅಮರನಾಥ ಶೆಟ್ಟಿ ಅವರೂ ಒಳಗೊಂಡಂತೆ ನಿರ್ದೇಶಕರ ವೈಯಕ್ತಿಕ ರಾಜಕೀಯ ಒಲವುಗಳೇನಿದ್ದರೂ ಸೊಸೈಟಿಯು ರಾಜಕೀಯೇತರ ಶುದ್ಧ ಸಹಕಾರಿ ಸಂಘವಾಗಿ ಪ್ರಗತಿಪಥದಲ್ಲಿ ಸಾಗಿ ಬಂದಿದೆ, ಮುನ್ನಡೆಯುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಸುದರ್ಶನ ಭಟ್ ಲೆಕ್ಕ ಪರಿಶೋಧನ ವರದಿ, ಲಾಭಾಂಶ ವಿಂಗಡಣೆ, ಮಂಜುನಾಥ ಎಸ್. ಇವರು ೨೦೨೪-೨೫ನೇ ಸಾಲಿನ ಬಜೆಟ್ಗಿಂತ ಜಾಸ್ತಿ ಖರ್ಚಾದ ಐವೇಜುಗಳ ಮಂಜೂರು, ಸಂತೋಷ್ ನಾಯ್ಕ್ ೨೦೨೫-೨೬ನೇ ಸಾಲಿನ ಬಜೆಟ್ ಮಂಡನೆ ಕಲಾಪ ನಡೆಸಿಕೊಟ್ಟರು.ಉಪಾಧ್ಯಕ್ಷ ಎಂ. ಗಣೇಶ್ ನಾಯಕ್, ನಿರ್ದೇಶಕರಾದ ಜಾರ್ಜ್ ಮೋನಿಸ್, ಮನೋಜ್ ಶೆಟ್ಟಿ, ಸಿ.ಎಚ್. ಅಬ್ದುಲ್ ಗಫೂರ್, ಎಂ.ಪಿ. ಅಶೋಕ ಕಾಮತ್, ಎಂ. ಜ್ನಾನೇಶ್ವರ ಕಾಳಿಂಗ ಪೈ, ಎಂ. ಪದ್ಮನಾಭ, ಜಯರಾಮ ಕೋಟ್ಯಾನ್, ಪ್ರೇಮಾ ಎಸ್. ಸಾಲಿಯಾನ್, ಅನಿತಾ ಪಿ. ಶೆಟ್ಟಿ, ದಯಾನಂದ ನಾಯ್ಕ ಇದ್ದರು.
ನಿರ್ದೇಶಕ ಜಯರಾಮ ಕೋಟ್ಯಾನ್ ಸ್ವಾಗತಿಸಿದರು. ಉಪಾಧ್ಯಕ್ಷ ಎಂ. ಗಣೇಶ್ ನಾಯಕ್ ವಂದಿಸಿದರು.ಗಮನ ಸೆಳೆದ ಸಹಕಾರಿಗಳ ಮಹಾ ಸಭೆ!
ಮೂಡುಬಿದಿರೆ ಸೊಸೈಟಿಯ ವಾರ್ಷಿಕ ಮಹಾಸಭೆಗೆ ಕಳೆದ ವರ್ಷದ ದಾಖಲೆಯನ್ನೂ ಅಳಿಸಿ 12 ಸಾವಿರಕ್ಕೂ ಅಧಿಕ ಸದಸ್ಯರ ಪೈಕಿ ಎಂಟು ಸಾವಿರಕ್ಕೂ ಮಿಕ್ಕಿದ ಸದಸ್ಯರು ಹಾಜರಾದರು. ಸಹಕಾರಿ ಸೊಸೈಟಿಯೊಂದರ ಮಹಾಸಭೆಗೆ ಇಷ್ಟೊಂದು ಹಾಜರಾತಿ ಅದು ಅಳಿಸಲಾಗದ ದಾಖಲೆ ಬರೆದಂತಿದೆ. ಹಲವು ವರ್ಷಗಳಿಂದ ಮಹಾಸಭೆಗೆ ಹಾಜರಾಗುವ ಸದಸ್ಯರಿಗೆ ಗೃಹೋಪಯೋಗಿ ಉಡುಗೊರೆಗಳ ವಿತರಣೆಯೂ ಈ ಬಾರಿಯೂ ಪ್ರಶಂಸೆಗೆ ಪಾತ್ರವಾಗಿದೆ.