ಕಾಂಗ್ರೆಸ್‌ ಕುಟುಂಬದಲ್ಲಿ ಹೆಚ್ಚು ಕಡಿಮೆ ಸಹಜ: ಶಾಸಕ ಶಿವಗಂಗಾ

| Published : Jun 25 2025, 12:33 AM IST / Updated: Jun 25 2025, 12:34 AM IST

ಕಾಂಗ್ರೆಸ್‌ ಕುಟುಂಬದಲ್ಲಿ ಹೆಚ್ಚು ಕಡಿಮೆ ಸಹಜ: ಶಾಸಕ ಶಿವಗಂಗಾ
Share this Article
  • FB
  • TW
  • Linkdin
  • Email

ಸಾರಾಂಶ

ಭ್ರಷ್ಟಾಚಾರ ತಡೆಯಲೆಂದೇ ಆಯಾ ಕ್ಷೇತ್ರದ ಮತದಾರರು ಶಾಸಕರನ್ನು ಆಯ್ಕೆ ಮಾಡಿ ಕಳಿಸಿದ್ದಾರೆ. ವಸತಿ ಹಂಚಿಕೆಯಲ್ಲಿ ಭ್ರಷ್ಟಾಚಾರ ಏಕೆ ನಡೆಯುತ್ತಿದೆ? ಕಾಂಗ್ರೆಸ್ ಕುಟುಂಬದಲ್ಲಿ ಒಂದಿಷ್ಟು ಹೆಚ್ಚು ಕಡಿಮೆ ಇರುವುದು ಸಹಜ. ಸಿಎಲ್‌ಪಿ ಸಭೆಯಲ್ಲಿ ಸುಮ್ಮನೇ ಕುಳಿತು, ಮಾಧ್ಯಮಗಳ ಬಳಿ ಮಾತನಾಡುತ್ತಾರಷ್ಟೇ ಎಂದು ಕಾಂಗ್ರೆಸ್‌ನ ಅಸಮಾಧಾನಿತ ಶಾಸಕರ ಬಗ್ಗೆ ಸ್ಪಪಕ್ಷದ ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ ಬೇಸರ ವ್ಯಕ್ತಪಡಿಸಿದ್ದಾರೆ.

- ಸಿಎಲ್‌ಪಿ ಸಭೆಗೇನು ಹುಲಿ, ಸಿಂಹ ತಂದಿರ್ತಾರಾ?, ಮಾಧ್ಯಮಗಳ ಬಳಿ ಹೇಳಿದರೆ ವಿಪಕ್ಷಕ್ಕೆ ಅಸ್ತ್ರ ಕೊಟ್ಟಂತೆ ಎಂದ ಶಾಸಕ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಭ್ರಷ್ಟಾಚಾರ ತಡೆಯಲೆಂದೇ ಆಯಾ ಕ್ಷೇತ್ರದ ಮತದಾರರು ಶಾಸಕರನ್ನು ಆಯ್ಕೆ ಮಾಡಿ ಕಳಿಸಿದ್ದಾರೆ. ವಸತಿ ಹಂಚಿಕೆಯಲ್ಲಿ ಭ್ರಷ್ಟಾಚಾರ ಏಕೆ ನಡೆಯುತ್ತಿದೆ? ಕಾಂಗ್ರೆಸ್ ಕುಟುಂಬದಲ್ಲಿ ಒಂದಿಷ್ಟು ಹೆಚ್ಚು ಕಡಿಮೆ ಇರುವುದು ಸಹಜ. ಸಿಎಲ್‌ಪಿ ಸಭೆಯಲ್ಲಿ ಸುಮ್ಮನೇ ಕುಳಿತು, ಮಾಧ್ಯಮಗಳ ಬಳಿ ಮಾತನಾಡುತ್ತಾರಷ್ಟೇ ಎಂದು ಕಾಂಗ್ರೆಸ್‌ನ ಅಸಮಾಧಾನಿತ ಶಾಸಕರ ಬಗ್ಗೆ ಸ್ಪಪಕ್ಷದ ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಲ್‌ಪಿ ಸಭೆಯಲ್ಲಿ ಯಾರಾದರೂ ಹುಲಿ, ಸಿಂಹ ತಂದಿರುತ್ತಾರಾ? ಸಭೆಯಲ್ಲಿ ಸುಮ್ಮನೇ ಕುಳಿತು, ಹೊರಗೆ ಬಂದು ಮಾಧ್ಯಮಗಳ ಮುಂದೆ ಮಾತನಾಡುವುದಲ್ಲ. ಎರಡು ದಿನಗಳಲ್ಲಿ ರಾಜೀನಾಮೆ ನೀಡುವುದಾಗಿ ಹೇಳಿದವರು ಯಾರೂ ರಾಜೀನಾಮೆ ಕೊಡುವುದಿಲ್ಲ. ಹೀಗೆ ರಾಜೀನಾಮೆ ಕೊಡುತ್ತೇನೆಂದು 2-3 ಸಲ ಹೇಳಿರಬೇಕು ಎಂದು ಸ್ವಪಕ್ಷದ ಶಾಸಕ ರಾಜು ಕಾಗೆ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಸರ್ಕಾರ ಬಗ್ಗೆ ಅಸಮಾಧಾನ ಇರುತ್ತದೆ:

ವಸತಿ ಹಂಚಿಕೆಯಲ್ಲಿ ಭ್ರಷ್ಟಾಚಾರ ಏಕೆ ನಡೆಯುತ್ತಿದೆ? ಭ್ರಷ್ಟಾಚಾರಕ್ಕೆ ಇವರೆಲ್ಲಾ ಯಾಕೆ ಅವಕಾಶ ಕೊಡಬೇಕು? ಭ್ರಷ್ಟಾಚಾರ ತಡೆಯಲೆಂದೇ ಆಯಾ ಕ್ಷೇತ್ರದ ಮತದಾರರು ಇಂತಹವರನ್ನು ಶಾಸಕರಾಗಿ ಆಯ್ಕೆ ಮಾಡಿ ಕಳಿಸಿದ್ದಾರೆ ಅಲ್ಲವೇ? ಸರ್ಕಾರದ ಬಗ್ಗೆ ಕೆಲವೊಂದು ಅಸಮಾಧಾನ ಇರುತ್ತದೆ. ಅದನ್ನೆಲ್ಲಾ ಹೇಳುವುದಕ್ಕಾಗಲ್ಲ ಎಂದು ಶಾಸಕರು ತಿಳಿಸಿದರು.

ಸರ್ಕಾರ ಸುಭದ್ರ:

ದಾವಣಗೆರೆಯಲ್ಲಿ ಈಚೆಗೆ ಸಾವಿರಾರು ಕೋಟಿ ರು. ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. 3-4 ಜನ ಹಿರಿಯರು ಮಾತನಾಡಿದ್ದಾರೆ. ಆ ರೀತಿ ಮಾತನಾಡಬಾರದು. 139 ಜನರನ್ನು ನಂಬಿ ರಾಜ್ಯದ ಮತದಾರರು ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದಾರೆ. ಹಿರಿಯರು ಹೇಗೆ ಬೇಕೋ ಹಾಗೆ ಮಾತನಾಡಬಾರದು. ನಮ್ಮ ಸರ್ಕಾರ ಸುಭದ್ರವಾಗಿಯೇ ಇದೆ ಎಂದು ಹೇಳಿದರು.

ಸರ್ಕಾರ ಪರ ನಿಲ್ಲಬೇಕು:

ಸರ್ಕಾರ ಉತ್ತಮವಾದ ಕೆಲಸ ಮಾಡುತ್ತಿದೆ. ಅನುದಾನ ಇಲ್ಲದೇ ಹೇಗೆ ಕಾಮಗಾರಿಯನ್ನು ಉದ್ಘಾಟಿಸುತ್ತಾರೆ? ಸರ್ಕಾರದ ಪರವಾಗಿ ನಾವೆಲ್ಲಾ ಶಾಸಕರು ನಿಲ್ಲಬೇಕು. ಹಿರಿಯ ಶಾಸಕರಲ್ಲಿ ನಾನು ಮಾಡುವುದಿಷ್ಟೇ. ಈ ರೀತಿ ಏನೇ ಚರ್ಚೆ ಮಾಡುವುದಿದ್ದರೂ ಸಿಎಲ್‌ಪಿ ಸಭೆ ಕರೆದು, ಅಲ್ಲಿ ಚರ್ಚಿಸುವಂತೆ ಪತ್ರ ನೀಡಿ. ಸಿಎಲ್‌ಪಿ ಸಭೆ ಕರೆಯುವಂತೆ ಪತ್ರ ನೀಡಿ ಎಂದು ಪಕ್ಷದ ಅತೃಪ್ತ ಶಾಸಕರಿಗೆ ಸಲಹೆ ನೀಡಿದರು.

ನಾನೇ ಪ್ರತಿ ವಾರ ನನ್ನ ಕ್ಷೇತ್ರದಲ್ಲಿ ₹1.5 ಕೋಟಿ ವೆಚ್ಚದ ಅಬಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಮಾಡುತ್ತೇನೆ. ಅನುದಾನ ಇಲ್ಲದೇ ಹೇಗೆ ಮಾಡುತ್ತೇನೆ? ಎಲ್ಲರ ಮನೆಯಲ್ಲೂ ಅಸಮಾಧಾನ ಇದ್ದೇ ಇರುತ್ತದೆ. ಹಾಗೆಯೇ ಕಾಂಗ್ರೆಸ್ ಕುಟುಂಬದಲ್ಲಿ ಒಂದಿಷ್ಟು ಹೆಚ್ಚು ಕಡಿಮೆ ಇರುವುದು ಸಹಜ ಎಂದು ಶಾಸಕ ಬಸವರಾಜ ಶಿವಗಂಗಾ ತಿಳಿಸಿದರು.

- - -

(ಬಾಕ್ಸ್‌) * ಎಂಎಲ್‌ಸಿ ಸ್ಥಾನ ವೀರಶೈವ ಲಿಂಗಾಯತಕ್ಕೆ ಕೊಡಿ ಕನ್ನಡಪ್ರಭ ವಾರ್ತೆ ದಾವಣಗೆರೆ

ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಲ್ಲಿ 1 ಸ್ಥಾನವನ್ನು ವೀರಶೈವ ಲಿಂಗಾಯತ ಸಮುದಾಯಕ್ಕೆ ನೀಡುವಂತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರಿಗೆ ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ 138 ಕ್ಷೇತ್ರಗಳನ್ನು ನಾವು ಗೆದ್ದಿದ್ದು, 3 ಕ್ಷೇತ್ರಗಳ ಉಪ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವೇ ಗೆದ್ದಿದೆ. ಪ್ರಬಲ ವೀರಶೈವ ಲಿಂಗಾಯತಕ್ಕೆ 1 ವಿಪ ಸದಸ್ಯ ಸ್ಥಾನ ನೀಡಬೇಕು ಎಂದರು.

ರಾಜ್ಯದಲ್ಲಿ ವೀರಶೈವ ಲಿಂಗಾಯತ ಪ್ರಬಲ ಕೋಮು ಆಗಿದೆ. ಬಿಜೆಪಿ ಜೊತೆಗೆ ಗುರುತಿಸಿಕೊಂಡಿದ್ದ ಸಮುದಾಯ ಇದೀಗ ಕಾಂಗ್ರೆಸ್ ಪಕ್ಷದ ಕಡೆಗೆ ಬಂದಿದೆ. ಹಾಗಾಗಿ ವೀರಶೈವ ಲಿಂಗಾಯತ ಸಮುದಾಯವನ್ನು ಕಾಂಗ್ರೆಸ್ ಪಕ್ಷದಲ್ಲೇ ಉಳಿಸಿಕೊಳ್ಳುವ ಕೆಲಸ ಆಗಬೇಕು. ಅದಕ್ಕಾಗಿ 4 ವಿಪ ಸದಸ್ಯ ಸ್ಥಾನಗಳ ಪೈಕಿ 1 ಸ್ಥಾನದಲ್ಲಿ ವೀರಶೈವ ಲಿಂಗಾಯತರಿಗೆ ಅವಕಾಶ ನೀಡಬೇಕು ಎಂದು ಪುನರುಚ್ಚರಿಸಿದರು.

ಯುವತಿ ಮೇಲೆ ಹಲ್ಲೆ ಘಟನೆಗೆ ಪ್ರತಿಕ್ರಿಯೆ:

ಬೆಂಗಳೂರಿನಲ್ಲಿ ಯುವತಿಯೊಬ್ಬಳ ಮೇಲೆ ಗಾಂಜಾ ಸೇವಿಸಿದ್ದ ಯುವಕರ ಗುಂಪೊಂದು ಹಲ್ಲೆ ಮಾಡಿ, ಲೈಂಗಿಕ ದೌರ್ಜನ್ಯ ಎಸಗಿದ ಕುರಿತ ಪ್ರಶ್ನೆಗೆ ಶಾಸಕರು ಪ್ರತಿಕ್ರಿಯಿಸಿದರು. ಇಂತಹ ಸಣ್ಣಪುಟ್ಟ ಘಟನೆಗಳು ಆಗುತ್ತಿರುತ್ತವೆ. ಕ್ರೈಮ್ ಆಗಲಿಲ್ಲವೆಂದರೆ ಪೊಲೀಸರಿಗೆ ಕೆಲವೇ ಇರುವುದಿಲ್ಲ. ಕರ್ನಾಟಕದಲ್ಲಿ ಏಳು ಕೋಟಿ ಜನಸಂಖ್ಯೆ ಇದೆ. ಇಷ್ಟೊಂದು ಜನರಿಗೆ ಪೊಲೀಸ್ ಇಲಾಖೆಯಲ್ಲಿ ಇಂತಿಷ್ಟು ಪೊಲೀಸರು ಇರಬೇಕೆಂದಿದೆ. ಅಂತಹ ವ್ಯವಸ್ಥೆ ನಮ್ಮ ರಾಜ್ಯದಲ್ಲೂ ಆಗಬೇಕು. ಯಾವುದೋ ಗಾಂಜಾ ಕೇಸ್ ಅಂತಾ ಪತ್ರಿಕೆಯಲ್ಲಿ ಓದಿದ್ದೇನೆ. ಇಂತಹವೆಲ್ಲಾ ಸಣ್ಣಪುಟ್ಟ ಘಟನೆಗಳು ಆಗುತ್ತವೆ. ತನಿಖೆ ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡುವ ಕೆಲಸವಾಗುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಹಿಂದೆಯೇ ಹೇಳಿದ್ದೇನೆ. ಡಿಸೆಂಬರ್ ಬಳಿಕ ಅದರ ಬಗ್ಗೆ ಮಾತನಾಡುವೆ ಎಂದು ಶಾಸಕ ಬಸವರಾಜ ಶಿವಗಂಗಾ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

- - -

(-ಫೋಟೋ: ಬಸವರಾಜ ಶಿವಗಂಗಾ)