ಸಾರಾಂಶ
- ಶಾಸಕ ಇಕ್ಬಾಲ್ ಹುಸೇನ್ 40 ಲಕ್ಷ ವೆಚ್ಚದಲ್ಲಿ ಸಿಹಿ ಹಂಚಿಕೆ - ಜಿಲ್ಲೆಯ ಎಲ್ಲಾ ಶಾಲಾ - ಕಾಲೇಜುಗಳಿಗೆ ಲಾಡುಗಳ ಹಸ್ತಾಂತರ
ಕನ್ನಡಪ್ರಭ ವಾರ್ತೆ ರಾಮನಗರ78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸವಿ ನೆನಪಿಗಾಗಿ ಆ.15ರಂದು ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಕಚೇರಿಗಳ ಅಧಿಕಾರಿ, ಸಿಬ್ಬಂದಿ ವರ್ಗದವರಿಗೆ ವಿತರಿಸಲು 3 ಲಕ್ಷಕ್ಕೂ ಅಧಿಕ ಲಾಡುಗಳನ್ನು ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ಅವರ ಪರವಾಗಿ ಮಾಜಿ ಶಾಸಕ ಕೆ. ರಾಜು ಬುಧವಾರ ಹಸ್ತಾಂತರಿಸಿದರು.
ನಗರದ ಆರ್ವಿಸಿಎಸ್ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಮೂಲಕ ಜಿಲ್ಲೆಯ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಅಂಗನವಾಡಿ, ಮದರಸ ಹಾಗೂ ಸರ್ಕಾರಿ ಕಚೇರಿಗಳ ಅಧಿಕಾರಿ, ಸಿಬ್ಬಂದಿ ವರ್ಗದವರಿಗೆ ಲಾಡು ತುಂಬಿದ ಬಾಕ್ಸ್ ಗಳನ್ನು ರವಾನಿಸಲಾಯಿತು.ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ರಾಜು, ಈ ಮುಂಚೆ ಶಾಸಕ ಇಕ್ಬಾಲ್ ಹುಸೇನ್ ಅವರು ದೇಶಭಕ್ತಿಯ ಪ್ರತೀಕವಾದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕನಕಪುರ ತಾಲೂಕಿನಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ವೈಯಕ್ತಿಕ ಖರ್ಚಿನಲ್ಲಿ ಪ್ರತಿವರ್ಷ ಸಿಹಿ ಹಂಚುತ್ತಿದ್ದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾದ ಬಳಿಕ ಈ ಕಾರ್ಯಕ್ರಮವನ್ನು ಜಿಲ್ಲಾ ವ್ಯಾಪ್ತಿಗೆ ವಿಸ್ತರಿಸಿದ್ದಾಗಿ ತಿಳಿಸಿದರು.
ಜಿಲ್ಲೆಯ ಪ್ರತಿ ಶಾಲೆಯ ಪ್ರತಿ ಮಗುವೂ ಸ್ವಾತಂತ್ರ್ಯ ದಿನಾಚರಣೆ ದಿನದಲ್ಲಿ ಸಂತಸದಿಂದ ಇರಬೇಕು ಎಂಬುದು ಶಾಸಕರ ಬಯಕೆ. ಸ್ವಾತಂತ್ರ್ಯಕ್ಕಾಗಿ ನಮ್ಮ ಪೂರ್ವಿಕರು ಮಾಡಿದ ಬಲಿದಾನ ಇಂದಿನ ವಿದ್ಯಾರ್ಥಿಗಳಿಗೆ ತಿಳಿಯಬೇಕು. ಭವ್ಯ ಭಾರತದಲ್ಲಿ ದೇಶಭಕ್ತಿ, ದೇಶಪ್ರೇಮ ಎತ್ತಿ ಹಿಡಿಯುವ ಉದ್ದೇಶದಿಂದ ಪ್ರತಿವರ್ಷ ಸಿಹಿ ವಿತರಿಸುತ್ತಾ ಬಂದಿದ್ದಾರೆ ಎಂದು ಹೇಳಿದರು.ಆಗಸ್ಟ್ 15 ಭಾರತೀಯರಿಗೆ ಅತ್ಯಂತ ಸಂಭ್ರಮದ ದಿನ. ಮಕ್ಕಳಿಗೆ ಅಂದು ಲಾಡುಗಳನ್ನು ವಿತರಿಸಿ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲಾಗುತ್ತಿದೆ. ನಾಳೆ ವೇಳೆಗೆ ಆಯಾಯ ಶಾಲಾ - ಕಾಲೇಜುಗಳಿಗೆ 2.54 ಲಕ್ಷ, ಸರ್ಕಾರಿ ಕಚೇರಿಗಳಿಗೆ 15 ಸಾವಿರ ಹಾಗೂ ಜಿಲ್ಲಾ ಕ್ರೀಡಾಂಗಣದಲ್ಲಿ ಶಾಲಾ ಮಕ್ಕಳು, ವೀಕ್ಷರು ಹಾಗೂ ಅತಿಥಿಗಳಿಗೂ ಲಾಡುಗಳನ್ನು ವಿತರಣೆ ಮಾಡಲಾಗುವುದು ಎಂದು ರಾಜು ತಿಳಿಸಿದರು.
ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ಮಾತನಾಡಿ, ಶಾಸಕ ಇಕ್ಬಾಲ್ ಹುಸೇನ್ ಅವರು ತಾನು ಪ್ರತಿನಿಧಿಸುವ ಕ್ಷೇತ್ರ ಮಾತ್ರವಲ್ಲದೆ ಇಡೀ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ದಿನದ ಪ್ರಯುಕ್ತ ಸಿಹಿ ವಿತರಣೆ ಮಾಡುತ್ತಿರುವುದು ಉಳಿದ ಶಾಸಕರಿಗೆ ಮಾದರಿ ಕಾರ್ಯವಾಗಿದೆ ಎಂದು ಹೇಳಿದರು.ಎಲ್ಲ ಜಾತಿ ವರ್ಗದವರನ್ನು ಒಂದೇ ಎಂಬ ಭಾವನೆಯಿಂದ ನೋಡುವ ಇಕ್ಬಾಲ್ ವಿಶಾಲ ಮನೋಭಾವನೆ ಇಟ್ಟುಕೊಂಡು ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಅಲ್ಲದೆ, ರಾಮನಗರ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಯತ್ತ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜು, ರಾ - ಚ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಸಿಎನ್ ಆರ್ ವೆಂಕಟೇಶ್, ನಗರಸಭೆ ಸದಸ್ಯರಾದ ಪಾರ್ವತಮ್ಮ, ಅಜ್ಮತ್ , ನಿಜಾಮುದ್ದೀನ್ ಷರೀಫ್ , ಆರೀಫ್ , ವಿಜಯಕುಮಾರಿ, ಆಯಿಷಾ, ಜಯಲಕ್ಷ್ಮಮ್ಮ, ಹರೀಸಂದ್ರ ಗ್ರಾಪಂ ಮಾಜಿ ಅಧ್ಯಕ್ಷ ವೀರಭದ್ರಸ್ವಾಮಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗುರುಪ್ರಸಾದ್ , ಮುಖಂಡರಾದ ಪ್ರಭು, ರೈಡ್ ನಾಗರಾಜ್ , ರಾಜಶೇಖರ್ , ವಿ.ಎಚ್ .ರಾಜು, ಜಗದೀಶ್ , ಸಮದ್ , ಅನಿಲ್ ಜೋಗಿಂದರ್, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ ಮತ್ತಿತರರು ಇದ್ದರು.ಲಾಡುಗಳ ವಿತರಣೆಗೆ 40 ಲಕ್ಷ ರು.ವೆಚ್ಚ -
ರಾಮನಗರ ಜಿಲ್ಲೆಯ ಅಂಗನವಾಡಿ ಕೇಂದ್ರಗಳು, ಸರ್ಕಾರಿ - ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳು, ಸ್ನಾತಕೋತ್ತರ ಕೇಂದ್ರ, ಡಿಇಡಿ, ಬಿಎಡ್ ಹಾಗೂ ಇತರೆ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ, ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗೆ ಶಾಸಕ ಇಕ್ಬಾಲ್ ಹುಸೇನ್ ಅವರು ಅಂದಾಜು 40 ಲಕ್ಷ ರುಪಾಯಿ ವೆಚ್ಚದಲ್ಲಿ ಸಿಹಿ ವಿತರಿಸುತ್ತಿದ್ದಾರೆ.
ತಾಲೂಕುವಿದ್ಯಾರ್ಥಿಗಳ ಸಂಖ್ಯೆರಾಮನಗರ90,436
ಕನಕಪುರ75,762ಮಾಗಡಿ33,258
ಚನ್ನಪಟ್ಟಣ55,000ಒಟ್ಟು2,54,456ಆ.15ರಂದು 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ
ರಾಮನಗರ: ಜಿಲ್ಲಾಡಳಿತ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆ.15ರಂದು ಬೆಳಿಗ್ಗೆ 9 ಕ್ಕೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತರಿರುವರು. ಸಾರಿಗೆ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಧ್ವಜಾರೋಹಣ ನೆರವೇರಿಸುವರು. ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಅಧ್ಯಕ್ಷತೆ ವಹಿಸಲಿದ್ದಾರೆ.