ಕೋಟಿ ಗಾಯಿತ್ರಿ ಜಪ ಯಜ್ಞದಲ್ಲಿ ಯುವಕರು ಹೆಚ್ಚು ಭಾಗವಹಿಸಿ: ವಿಜಯರಂಗ ಕೋಟೆ ತೋಟ

| Published : Jul 30 2025, 12:46 AM IST

ಕೋಟಿ ಗಾಯಿತ್ರಿ ಜಪ ಯಜ್ಞದಲ್ಲಿ ಯುವಕರು ಹೆಚ್ಚು ಭಾಗವಹಿಸಿ: ವಿಜಯರಂಗ ಕೋಟೆ ತೋಟ
Share this Article
  • FB
  • TW
  • Linkdin
  • Email

ಸಾರಾಂಶ

ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾ ಪ್ರಾರಂಭಿಸಿರುವ ಕೋಟಿ ಗಾಯಿತ್ರಿ ಜಪ ಯಜ್ಞದಲ್ಲಿ ಯುವಕರು ಹೆಚ್ಚಾಗಿ ಭಾಗವಹಿಸಬೇಕು ಎಂದು ಸಭಾದ ಕೇಂದ್ರ ಸಮಿತಿ ಅಧ್ಯಕ್ಷ ವಿಜಯರಂಗ ಕೋಟೆ ತೋಟ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾ ಪ್ರಾರಂಭಿಸಿರುವ ಕೋಟಿ ಗಾಯಿತ್ರಿ ಜಪ ಯಜ್ಞದಲ್ಲಿ ಯುವಕರು ಹೆಚ್ಚಾಗಿ ಭಾಗವಹಿಸಬೇಕು ಎಂದು ಸಭಾದ ಕೇಂದ್ರ ಸಮಿತಿ ಅಧ್ಯಕ್ಷ ವಿಜಯರಂಗ ಕೋಟೆ ತೋಟ ಕರೆ ನೀಡಿದರು.

ನಗರದಲ್ಲಿ ಭಾನುವಾರ ಜೋಗಿಮಕ್ಕಿಯ ಶ್ರೀ ಕೊಡಗತ್ಯಮ್ಮ ದೇವಸ್ಥಾನದ ಆವರಣದಲ್ಲಿ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾ ಮತ್ತು ಯುವ ಹೆಬ್ಬಾರ ಬಳಗದ ತಾಲೂಕು ಘಟಕದ ಆಶ್ರಯದಲ್ಲಿ ನಡೆದ 2024-25 ನೇ ಸಾಲಿನ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದರು.

ನಮ್ಮ ಸಂಘಟನೆ 2024ರ ಅ.1ರಂದು ವಿಶ್ವಸ್ಥ ಕಾಯ್ದೆಯಡಿ ನೋಂದಾಯಿಸಲ್ಪಟ್ಟಿದೆ. ನಮ್ಮ ಸಮಾಜದ ಕೇಂದ್ರದಲ್ಲಿ ಬ್ಯಾಂಕ್ ಅಕೌಂಟ್ ತೆರೆಯಲಾಗಿದೆ. ಮುಂಬರುವ ದಿನಗಳಲ್ಲಿ ಎಲ್ಲಾ ಘಟಕಗಳ ಬ್ಯಾಂಕ್ ಖಾತೆ ತೆರೆಯಬೇಕಾಗಿದೆ. 18 ವರ್ಷ ಮೇಲ್ಪಟ್ಟ ಎಲ್ಲಾ ಸದಸ್ಯರು ಟ್ರಸ್ಟ್‌ನ ಸದಸ್ಯರಾಗಬೇಕಾಗಿದೆ. ಈಗಾಗಲೇ 1 ಸಾವಿರಕ್ಕೂ ಹೆಚ್ಚು ಸದಸ್ಯರು ನೋಂದಾಯಿಸಿದ್ದಾರೆ. ಸಮಾಜದ ಎಲ್ಲರೂ ಸಂಘಟಿತರಾಗಿ ಶೃಂಗೇರಿಯಲ್ಲಿ ನಡೆಯುವ ಗುರುದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸೋಣ ಎಂದರು.

ಮುಖ್ಯ ಅತಿಥಿಗಳಾಗಿದ್ದ ಶಿವಮೊಗ್ಗ ಶಾರದಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಚ್.ಎಸ್. ಶಿವಶಂಕರ್ ಮಾತನಾಡಿ, ಮುಂದೆ ಶಾರದ ಸಹಕಾರ ಸಂಘದ ಚುನಾವಣೆ ನಡೆಯಲಿದೆ. ನರಸಿಂಹರಾಜಪುರ ಘಟಕಕ್ಕೆ ಮಹಿಳಾ ಸ್ಥಾನ ಹಾಗೂ ಸಾಮಾನ್ಯ ಸ್ಥಾನ ಇದೆ. ನಮ್ಮ ಸಂಘದ 500 ರು. ಷೇರುದಾರರು ಪೂರ್ಣ ಪ್ರಮಾಣದ ಷೇರು ಹಾಕಬೇಕು.ಹೆಬ್ಬಾರ ಬ್ರಾಹ್ಮಣ ಸಮಾಜದ ಪ್ರತಿಯೊಬ್ಬರೂ ನಮ್ಮ ಶಾರದಾ ಸಹಕಾರ ಸಂಘದಲ್ಲಿ ವ್ಯವಹಾರ ಮಾಡಬೇಕು. ಸಂಘದ ಮಹಾ ಸಭೆಗೆ ಎಲ್ಲಾ ಸದಸ್ಯರು ಆಗಮಿಸಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಹೆಬ್ಬಾರ ಬ್ರಾಹ್ಮಣ ಸಮಾಜದ ಹಿರಿಯರಾದ ಯಡಗೆರೆ ಕೇಶವಮೂರ್ತಿ ಹಾಗೂ ಮೂಲೆ ಮನೆ ನಾಗೇಂದ್ರ , ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯಡಗೆರೆ ಲತಾಸುಬ್ರಮಣ್ಯ ಹಾಗೂ ಸೇತುವೆಮನೆ ಸುಬ್ರಮಣ್ಯ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಆನ್‌ಲೈನ್‌ನಲ್ಲಿ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರು, ವಿವಿಧ ಆಟೋಟ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ನೀಡಲಾಯಿತು.

ಅಧ್ಯಕ್ಷತೆಯನ್ನು ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾ ಸಭಾದ ತಾಲೂಕು ಅಧ್ಯಕ್ಷ ಯಡಗೆರೆ ಪ್ರಶಾಂತ್ ವಹಿಸಿದ್ದರು. ಸಭೆಯಲ್ಲಿ ಮ್ಯಾಮ್ಕೋಸ್ ಅಧ್ಯಕ್ಷ ಹುಲ್ಕುಳಿ ಮಹೇಶ್, ಮಹಾ ಸಭಾದ ಪ್ರಧಾನ ಕಾರ್ಯದರ್ಶಿ ಚರಣ ಹೆಬ್ಬಾರ್‌, ಕೊಪ್ಪ ಯಸ್ಕಾನ್ ಅಧ್ಯಕ್ಷ ವೈ.ಎಸ್.ಸುಬ್ರಮಣ್ಯ, ತಾಲೂಕು ಘಟಕದ ಕಾರ್ಯದರ್ಶಿ ಕೆ.ವಿ.ಪ್ರಭಾಕರ,ಯುವ ಹೆಬ್ಬಾರ ಬಳಗದ ಅಧ್ಯಕ್ಷ ವೈ.ಎಂ.ಮಧು ಇದ್ದರು.

ಕೆ.ವಿ.ಪ್ರಭಾಕರ್ ವರದಿ ವಾಚಿಸಿದರು. ನಿಶಾಂತ್ ಹೆಬ್ಬಾರ್ ಮತ್ತು ಸಂಘಡಿಗರು ಗುರುವಂದನೆ ಜಪಿಸಿದರು. ಮಮತಾ ಸ್ವಾಗತಿಸಿದರು.ಎ.ಎಸ್.ವೆಂಕಟರಮಣ ನಿರೂಪಿಸಿದರು.

ಫೋಟೋ: ನರಸಿಂಹರಾಜಪುರ ತಾಲೂಕಿನ ಜೋಗಿಮಕ್ಕಿಯಲ್ಲಿ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದ ಸರ್ವ ಸದಸ್ಯರ ಸಭೆಯಲ್ಲಿ ಸಾಧಕರಾದ ಸೇತುವೆ ಮನೆ ಸುಬ್ರಮಣ್ಯರನ್ನು ಸನ್ಮಾನಿಸಲಾಯಿತು.