ಕನ್ನಡಪ್ರಭ ವಾರ್ತೆ ಮಡಿಕೇರಿ

ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ‘ಕೊಡವ ಸತ್ಯಾಗ್ರಹ’ ನಡೆಸಿತು.ಪ್ರಖ್ಯಾತ ಭಾಷಾ ತಜ್ಞ ಪಂಡಿತ್ ಡಾ. ಸೀತಕಾಂತ್ ಮಹಾಪಾತ್ರ ಆಯೋಗದ ವರದಿಯ ಶಿಫಾರಸಿನಂತೆ ಕೊಡವ ತಕ್ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್ ಗೆ ಸೇರಿಸಬೇಕು. ಸೇರಿದಂತೆ ವಿವಿಧ ಬೇಡಿಕೆಗಳನ್ನು ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಮಂಡಿಸಿದರು. ಕೊಂಕಣಿ ಭಾಷೆಯ ಮಾದರಿಯಲ್ಲಿ ಮತ್ತು ತುಳು ಭಾಷೆಯ ಪ್ರಸ್ತಾವನೆಯಂತೆ, ಸಂವಿಧಾನದ ವಿಧಿ 345 ಮತ್ತು 347 ರ ಅಡಿಯಲ್ಲಿ ಕೊಡವ ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಾಡಬೇಕು ಹಾಗೂ ವಿಧಿ 350 ರ ಅಡಿಯಲ್ಲಿ ಆಡಳಿತ ಮತ್ತು ಶಿಕ್ಷಣದಲ್ಲಿ ಜಾರಿಗೆ ತರಬೇಕು.ಭೌಗೋಳಿಕ ಸ್ವಾಯತ್ತತೆ, ಬುಡಕಟ್ಟು ವರ್ಗೀಕರಣ:

ಸಂವಿಧಾನದ ವಿಧಿ 244 ಮತ್ತು 371ರ ಅಡಿಯಲ್ಲಿ ‘ಕೊಡವ ಲ್ಯಾಂಡ್’ ಭೌಗೋಳಿಕ ರಾಜಕೀಯ ಸ್ವಾಯತ್ತತೆಯನ್ನು ನೀಡಬೇಕು. ಅತ್ಯಲ್ಪ ಸಂಖ್ಯೆಯಲ್ಲಿರುವ ಕೊಡವ ಜನಾಂಗಕ್ಕೆ ‘ಪರಿಶಿಷ್ಟ ಪಂಗಡ’ ವರ್ಗೀಕರಣವಾಗಬೇಕು ಮತ್ತು ವಿಧಿ 25 ಹಾಗೂ 26ರ ಅಡಿಯಲ್ಲಿ ‘ಪವಿತ್ರ ಗನ್’ ಹಕ್ಕನ್ನು ರಕ್ಷಿಸಬೇಕು.ಕೊಡವರ ನೈಜ ಇತಿಹಾಸವನ್ನು ತಿರುಚಿ ರಾಜ್ಯದ ದಾಖಲೆಗಳಲ್ಲಿ ತಪ್ಪು ಮಾಹಿತಿ ಸೇರಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. 2027ರ ರಾಷ್ಟ್ರೀಯ ಜನಗಣತಿಯಲ್ಲಿ ಆದಿಮ ಸಂಜಾತ ಕೊಡವ ಜನಾಂಗಕ್ಕಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಂ ಅನ್ನು ನಿಗದಿಪಡಿಸಬೇಕು. ಕೊಡವ ಜನಾಂಗದ ಅಸ್ತಿತ್ವ ಮತ್ತು ಸ್ವಾಭಿಮಾನದ ರಕ್ಷಣೆಗೆ ಈ ಸಾಂವಿಧಾನಿಕ ಎಣಿಕೆ ಅತ್ಯಗತ್ಯವಾಗಿದೆ. ಭಾಷಾ ಅಡೆತಡೆಗಳನ್ನು ನಿವಾರಿಸುವ ಮೂಲಕ ಸರ್ಕಾರ ಮತ್ತು ನಾಗರಿಕರ ನಡುವಿನ ಅಂತರವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ ಎಂದು ಎನ್.ಯು. ನಾಚಪ್ಪ ಪ್ರತಿಪಾದಿಸಿದರು.ಸ್ಥಳೀಯ ಕೊಡವ ಜಾನಪದ ಗ್ರಾಮಗಳ ಮತ್ತು ಹಳ್ಳಿಗಳ ಹೆಸರುಗಳನ್ನು ಎಷ್ಟು ವ್ಯವಸ್ಥಿತವಾಗಿ ಕನ್ನಡಕ್ಕೆ ಬದಲಾಯಿಸಿ ವಿರೂಪಗೊಳಿಸಲಾಗಿದೆ ಎಂದು ಆರೋಪಿಸಿದರು.ಸ್ನಾತಕ ಮತ್ತು ಸ್ನಾತಕೋತ್ತರ ಮಟ್ಟದಲ್ಲಿ ಕೊಡವ ಭಾಷೆ ಈಗಾಗಲೇ ಬೋಧನಾ ಮಾಧ್ಯಮವಾಗಿರುವುದರಿಂದ, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕೊಡವ ಕಲಿಕೆಯನ್ನು ಸುಲಭಗೊಳಿಸಲು ತಕ್ಷಣ ‘ಕೊಡವ ತಕ್ ಸಾಫ್ಟ್‌ವೇರ್’ ಅಭಿವೃದ್ಧಿಪಡಿಸಬೇಕು. ಇಂಗ್ಲಿಷ್ ಸಾಫ್ಟ್‌ವೇ ರ್‌ ಸಿಸ್ಟಂಗಳಲ್ಲಿ ಕೊಡಗು ಜಿಲ್ಲೆಯ ಹೆಸರನ್ನು ‘ಮಡಿಕೇರಿ ಜಿಲ್ಲೆ’ ಎಂದು ತಪ್ಪಾಗಿ ನಮೂದಿಸಿರುವುದನ್ನು ತಕ್ಷಣ ತಿದ್ದಬೇಕು ಎಂದು ಒತ್ತಾಯಿಸಿದ ಅವರು, ‘ಕೊಡಗು’ ಎಂಬ ಹೆಸರು ಈ ನೆಲದ ಮೂಲ ಕೊಡವ ಬುಡಕಟ್ಟಿನಿಂದ ಬಂದಿದೆ ಎಂದರು.ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅವರ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸುವ ಸಂದರ್ಭ ಪಟ್ಟಮಾಡ ಲಲಿತಾ ಗಣಪತಿ, ಚೋಳಪಂಡ ಜ್ಯೋತಿ ನಾಣಯ್ಯ, ಲೆಫ್ಟಿನೆಂಟ್ ಕರ್ನಲ್ ನಿವೃತ್ತ ಬಿ.ಎಂ. ಪಾರ್ವತಿ, ಮುದ್ದಿಯಡ ಲೀಲಾವತಿ, ಪಚ್ಚಾರಂಡ ಶಾಂತಿ ಪೊನ್ನಪ್ಪ, ಕಲಿಯಂಡ ಪ್ರಕಾಶ್, ಕುಕ್ಕೇರ ಜಯ ಚಿಣ್ಣಪ್ಪ, ಚಂಬಂಡ ಜನತ್, ಅರೆಯಡ ಗಿರೀಶ್, ಮಂದಪಂಡ ಮನೋಜ್ ಮಂದಣ್ಣ, ಕಿರಿಯಮಾಡ ಶೆರಿನ್, ನಂದಿನೆರವಂಡ ಅಪ್ಪಯ್ಯ, ಪುಟ್ಟಿಚಂಡ ಡಾನ್ ದೇವಯ್ಯ, ಬಡುವಂಡ ವಿಜಯ, ನಂದಿನೇರವಂಡ ವಿಜು, ಮಣವಟ್ಟಿರ ಚಿಣ್ಣಪ್ಪ, ಕೂಪದಿರ ಸಾಬು, ಚೋಳಪಂಡ ನಾಣಯ್ಯ ಹಾಗೂ ಅಜ್ಜಿಕಂಡ ಸನ್ನಿ ಮಾಚಯ್ಯ ಹಾಜರಿದ್ದರು.