ಸಾರಾಂಶ
ಸುರಪುರ ನಗರದ ಹಸನಾಪುರದ ಅಂಗನವಾಡಿ -1ರಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕ್ಕೆ ತಾಲೂಕು ಆರೋಗ್ಯ ಅಧಿಕಾರಿ ಡಾ.ಆರ್.ವಿ. ನಾಯಕ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಸುರಪುರಮಗವಿನ ಬೆಳವಣಿಗೆಗೆ ಬೇಕಾದ ಎಲ್ಲಾ ಪೋಷಕಾಂಶಗಳು ತಾಯಿ ಎದೆ ಹಾಲಿನಲ್ಲಿ ಇರುವುದರಿಂದ ಸ್ವಾಭಾವಿಕ ಲಸಿಕೆಯಾಗಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಆರ್.ವಿ.ನಾಯಕ ಹೇಳಿದರು.
ನಗರದ ಪ್ರಾಥಮಿಕ ಅರೋಗ್ಯ ಕೇಂದ್ರ ಹಸನಾಪುರ ಉಪ ಕೇಂದ್ರ ವ್ಯಾಪ್ತಿಯ ಹಸನಾಪುರದ ಅಂಗನವಾಡಿ ಕೇಂದ್ರ -1ರಲ್ಲಿ ಗುರುವಾರ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಯಿ ಹಾಲು ಮಗುವಿಗೆ ಜಾಂಡೀಸ್ ಕಾಯಿಲೆಯಿಂದ ರಕ್ಷಿಸುತ್ತದೆ ಎಂದು ತಿಳಿಸಿದರು.ಸ್ತನ್ಯಪಾನ ಮಾಡುವುದರಿಂದ ಹೆರಿಗೆ ಆದನಂತರ ರಕ್ತಸ್ರಾವ ಕಡಿಮೆಯಾಗುವುದಲ್ಲದೆ ತಾಯಿಯ ಬೊಜ್ಜು ಕರಗಿಸಿ, ಸಹಜ ಸ್ಥಿತಿಗೆ ಬರುತ್ತಾಳೆ. ಅಲ್ಲದೆ ಸ್ತನ ಹಾಗೂ ಗರ್ಭಕೋಶ ಕ್ಯಾನ್ಸರ್ ತಡೆಗಟ್ಟುತದೆ. ಸ್ತನ್ಯಪಾನ ಮಾಡುವುದರಿಂದ ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗುತ್ತಾರೆ. ಆದ್ದರಿಂದ ಸಕ್ರೀಯವಾಗಿ ಎಲ್ಲಾ ತಾಯಂದಿರುವ ಸ್ತನ್ಯಪಾನ ಮಾಡಬೇಕು ಎಂದು ಹೇಳಿದರು.
ಈ ವೇಳೆ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಆರೋಗ್ಯ ನೀರಿಕ್ಷಣಾಧಿಕಾರಿ ಶಿವಶರಣಯ್ಯ, ಅಂಗನವಾಡಿ ಮೇಲ್ವಿಚಾರಕರಾದ ಮೇಲ್ವಿಚಾರಕಿ ಜಯಶ್ರೀ, ಜಯ.ಕೆ.ಪವಾರ, ಬಿಎಚ್ಈಪಿ ಮಲ್ಲಪ್ಪ ಗೋಗಿ, ಹಸನಾಪುರದ ಆಯುಷ್ ವೈದ್ಯ ಇಮ್ಮಿಯಾಜ್, ಹಿರಿಯ ನೀರಿಕ್ಷಣಾಧಿಕಾರಿ ಸುರೇಶ, ಹಸನಾಪುರ ಉಪ ಕೇಂದ್ರದ ಸಿಬ್ಬಂದಿಯಾದ ರೇಖಾ ಮತ್ತು ರಶೀದ್, ಆಶಾ ಕಾರ್ಯಕರ್ತರು, ಅಂಗವಾಡಿ ಕಾರ್ಯಕರ್ತರು ಇದ್ದರು.