ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮನೆಯಲ್ಲಿ ತಾಯಿಯ ಪಾತ್ರ ಬಹುಮುಖ್ಯ. ಪ್ರತಿಯೊಬ್ಬರ ಆರೋಗ್ಯ ಕಾಪಾಡುವಲ್ಲಿ ನಿತ್ಯವೂ ತಾಯಿಯಾದವಳು ಶ್ರಮಿಸುತ್ತಾಳೆ. ತಾಯಿಯು ಸರಿಯಾದ ಗಮನವನ್ನು ಮಕ್ಕಳ ಕಡೆ ಹರಿಸಿದರೆ ಉತ್ತಮ ಪ್ರಜೆಗಳಾಗಿ ಬೆಳೆಯುತ್ತಾರೆ. ಇಲ್ಲವಾದರೆ ಕೆಟ್ಟವರಾಗುತ್ತಾರೆ ಎಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾಮಠದ ಕಾರ್ಯದರ್ಶಿ ಮಂಗಳನಾಥ ಸ್ವಾಮೀಜಿ ತಿಳಿಸಿದರು.ತಾಲೂಕಿನ ಮಂಚನಬಲೆ ಗ್ರಾಮದ ಬಿಜಿಎಸ್ ವಿದ್ಯಾನಿಕೇತನ ಶಾಲೆಯಲ್ಲಿ ಆಯೋಜಿಸಿದ್ದ ಮಾತೃ ಭೋಜನ ಕಾರ್ಯಕ್ರಮ ಮತ್ತು ಗುರುವಂದನೆ ಕಾರ್ಯಕ್ರಮಗಳ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ತಾಯಂದಿರ ಕೈ ತುತ್ತುಮಕ್ಕಳ ಬೆಳವಣಿಗೆಯಲ್ಲಿ ತಂದೆ ಮತ್ತು ತಾಯಿ ಇಬ್ಬರೂ ಸಮಾನವಾಗಿ ಪಾತ್ರವನ್ನು ವಹಿಸುತ್ತಾರೆ. ಯಾವುದೇ ಕಾರಣಕ್ಕೂಪೋಷಕರು ಮಕ್ಕಳ ಮುಂದೆ ಜಗಳವಾಡಬಾರದು. ಇಂದು ಎಲ್ಲಾ ತಾಯಂದಿರು ವೈವಿಧ್ಯಮಯ ಹಾಗೂ ರುಚಿಕರವಾದ ಅಡುಗೆ ಮಾಡಿಕೊಂಡು ಜಾತಿ, ಮತಭೇದ ಬದಿಗಿಟ್ಟು ಶಾಲೆಯ ಮಕ್ಕಳಿಗೆ ಕೈತುತ್ತು ನೀಡಿ, ಊಟ ಮಾಡಿಸಿ ಜಾತ್ಯತಿತೆಯನ್ನು ಎತ್ತಿಹಿಡಿದಿದ್ದಾರೆ. ಇದೇ ಮಾತೃಭೋಜನದ ಬಹುಮುಖ್ಯ ಆಶಯ’ ಎಂದರು.ಬಿಜಿಎಸ್ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಎನ್. ಶಿವರಾಮರೆಡ್ಡಿ ಮಾತನಾಡಿ, ಎಲ್ಲಾ ಶಾಲೆಗಳಂತೆ ನಮ್ಮ ಶಾಲೆ ಕೇವಲ ಅಂಕಪಟ್ಟಿ ವಿತರಿಸುವ ಸಂಸ್ಥೆಯಾಗಿಲ್ಲ. ನಾವು ಮಕ್ಕಳಿಗೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ವೈವಿಧ್ಯಮಯ ಚಟುವಟಿಕೆಗಳನ್ನು ಆಯೋಜಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡುತ್ತಿದ್ದೇವೆ ಎಂದು ಹೇಳಿದರು.ಮಕ್ಕಳ ಮನಸ್ಸಿನಲ್ಲಿ ಜಾತಿ ಬೀಜ ಬಿತ್ತದಿರಿ
ಅಗಲ ಗುರ್ಕಿ ಬಿಜಿಎಸ್ ಆಂಗ್ಲ ಶಾಲೆಯ ಪ್ರಾಂಶುಪಾಲ ಡಿ.ಸಿ. ಮೋಹನ್ ಮಾತನಾಡಿ, ಸಮಾಜದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಕಿತ್ತಾಟವಿದೆ. ಇಂತಹದ್ದರ ನಡುವೆ ಇಲ್ಲಿ ಮಕ್ಕಳಿಗೆ ಊಟ ಬಡಿಸುವಾಗ ಯಾರೂ ಜಾತಿ, ಧರ್ಮವನ್ನು ಕೇಳಲಿಲ್ಲ. ಮಕ್ಕಳ ಮನಸ್ಸಿನಲ್ಲಿ ಜಾತಿ, ಧರ್ಮಗಳಿಗೆ ಹೊರತಾದ ಭಾವನೆಗಳು ಬೆಳೆಯಬೇಕು ಎಂದು ಹೇಳಿದರು.ಬಿಜಿಎಸ್ ವಿದ್ಯಾನಿಕೇತನದ ಪ್ರಾಂಶುಪಾಲ ಗಂಗಾಧರ್ ಮಾತನಾಡಿ, ಮಕ್ಕಳಿಗೆ ಮಾತೃ ಪ್ರೇಮದ ಸವಿ ತುತ್ತು ಉಣಿಸುವ ಈ ಕಾರ್ಯಕ್ರಮ ತುಂಬಾ ವೈಶಿಷ್ಟ್ಯವಾಗಿದೆ. ನಮ್ಮ ಸಂಸ್ಕೃತಿಯಲ್ಲಿನ ತಾಯಿ ಮಕ್ಕಳ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯುವ ಅಗತ್ಯವಿದೆ ಎಂದು ಹೇಳಿದರು. ಪಂಕ್ತಿ ಭೋಜನದಲ್ಲಿ ಶ್ರೀಗಳುಕಾರ್ಯಕ್ರಮದಲ್ಲಿ ಮಂಗಳನಾಥ ಸ್ವಾಮೀಜಿ ಕಾರ್ಯಕ್ರಮದ ಅತಿಥಿಗಳೊಂದಿಗೆ ಸಹಪಂಕ್ತಿ ಭೋಜನ ಮಾಡಿದರು. ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನಸೂರೆಗೊಂಡವು.ಈ ವೇಳೆ ಶಾಲೆಯ ಮುಖ್ಯೋಪಾಧ್ಯಾಯ ಬೋರಯ್ಯ, ಶಿಕ್ಷಕ ಕೆ.ಎನ್. ಗೋಪಾಲಾಚಾರ್,ಹಿರಿಯ ವಿದ್ಯಾರ್ಥಿ ರಾಮರೆಡ್ಡಿ, ಗ್ರಾಮದ ಮುಖಂಡರಾದ ರಾಜಣ್ಣ, ವೆಂಕಟನಾರಾಯಣ್, ಎಂ.ಎಸ್.ಶ್ರೀಧರ್, ಪೋಷಕರು ಇದ್ದರು.