ಉಡುಪಿ: ಜಗತ್ತಿನ ಪ್ರತಿಯೊಬ್ಬರೂ ಜ್ಞಾನ, ಪ್ರತಿಭೆ ಮತ್ತು ಕಲಾ ಕೌಶಲವನ್ನು ಹೊಂದಲು ಶಾರದಾ ಮಾತೆಯೇ ಪ್ರೇರಣೆಯಾಗಿದ್ದಾಳೆ. ಆಕೆಯ ಕೈಯಲ್ಲಿರುವ ಪುಸ್ತಕ ವಿದ್ಯೆಯನ್ನು, ವೀಣೆ ಕಲೆಯನ್ನು, ಜಪಮಣಿಯು ಆದ್ಯಾತ್ಮ ಚಿಂತನೆಯನ್ನು ಸೂಚಿಸುತ್ತದೆ ಎಂದು ಕುಂಜಿಬೆಟ್ಟು ಶಾರದಾ ರೆಸಿಡೆನ್ಸಿಯಲ್ ಸ್ಕೂಲಿನ ನಿರ್ದೇಶಕ ವಿದ್ಯಾವಂತ ಆಚಾರ್ಯರು ತಿಳಿಸಿದರು. ಅವರು ಇಂದ್ರಾಳಿಯ ಕಲಾ ತಪಸ್ ಸಂಗೀತ ಪಾಠಶಾಲೆಯು ಮಕ್ಕಳಿಗಾಗಿ ಆಯೋಜಿಸಿದ ಕಲಾ ಕೌಶಲ್ಯ 2026, ಹತ್ತು ದಿನಗಳ ಕಲಾ ಶಿಬಿರವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ಮಕ್ಕಳು ಶಾರದಾ ಮಾತೆಯನ್ನು ಅನುಸರಿಸಿ ತಂತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಈ ನೆಲೆಯಲ್ಲಿ ಕಲಾಕೌಶಲ್ಯ ಬೇಸಗೆ ಕಲಾ ಶಿಬಿರವು ಮಕ್ಕಳ ರಚನಾತ್ಮಕ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತದೆ ಎಂದರು.ರೋಟರಿ ಜಿಲ್ಲಾ 3182ರ ಮಾಜಿ ಜಿಲ್ಲಾ ಗವರ್ನರ್ ರೊ ಬಿ ರಾಜಾರಾಮ ಭಟ್ ಕಲಾಕೌಶಲ್ಯ ಶಿಬಿರದ ಮಾಹಿತಿ ಕೋಶವನ್ನು ಅನಾವರಣಗೊಳಿಸಿ, ಮಕ್ಕಳು ವಿದ್ಯೆಯ ಜೊತೆಗೆ ವಿವಿಧ ಕಲೆಗಳನ್ನು ಮೈಗೂಡಿಸಿಕೊಂಡಲ್ಲಿ ಮಾನಸಿಕ ದೃಢತೆ ಸಾಧಿಸಿಕೊಂಡು ಸರ್ವತೋಮುಖವಾದ ವ್ಯಕ್ತಿತ್ವವನ್ನು ನಿರ್ಮಿಸಿಕೊಳ್ಳಬಹುದು ಎಂದು ಹೇಳಿದರು.
ಇನ್ನೋರ್ವ ಅತಿಥಿ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ, ಪತ್ರಕರ್ತ ಸುಬ್ರಹ್ಮಣ್ಯ ಭಟ್ ಕ್ರೀಡೆ, ಕಲೆ ಮತ್ತು ವಿದ್ಯೆಯನ್ನು ಸಮಾನವಾಗಿ ಕಲಿತಾಗ ಮಾನಸಿಕವಾಗಿ ಸದೃಢನಾಗಿಯೂ, ದೈಹಿಕವಾಗಿ ಬಲಾಢ್ಯನಾಗಿಯೂ, ಶೈಕ್ಷಣಿಕವಾಗಿ ಅತ್ಯುನ್ನತ ಸ್ಥಾನವನ್ನು ತಲುಪಬಹುದು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ರೋಟರಿ ಉಡುಪಿಯ ಅಧ್ಯಕ್ಷ ಸೂರಜ್ ಕುಮಾರ್ ಅವರು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ಕಲಾ ತಪಸ್ ಸಂಗೀತ ಶಾಲೆಯ ವಿವಿಧ ತರಬೇತಿ ಕಾರ್ಯಾಗಾರಗಳು, ಕಲಾ ಶಿಬಿರಗಳನ್ನು ಅತೀ ಹತ್ತಿರದಿಂದ ಬಲ್ಲವನಾದ ತಾನು ಎಳೆಯ ಮನಸ್ಸುಗಳನ್ನು ಕಲಾತ್ಮಕವಾಗಿ ಅರಳಿಸುವಲ್ಲಿ ಸಂಸ್ಥೆಯ ಶ್ರಮ ಅಸಾಧಾರಣವಾಗಿದೆ. ಮಕ್ಕಳ ಪ್ರತಿಭೋದ್ದೀಪನಗೊಳಿಸುವಲ್ಲಿ ಸಂಸ್ಥೆಯ ಕಲಾ ಪಯಣವು ಸುದೀರ್ಘವಾಗಿ ಮುಂದುವರಿಯಲಿ ಎಂದು ಹಾರೈಸಿದರು.ಕಲಾ ತಪಸ್ ಸಂಸ್ಥೆಯ ಪೋಷಕ ಸುಬ್ರಹ್ಮಣ್ಯ ಬಾಸ್ರಿ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು, ನಿರ್ದೇಶಕಿ ಶ್ರಾವ್ಯಾ ಎಸ್ ಬಾಸ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ಕಲಾಶಿಬಿರ ಸಂಯೋಜನೆಯ ಹಿಂದಿನ ಸಂಕಲ್ಪವನ್ನು ಹಂಚಿಕೊಂಡರು. ಕಲಾ ತಪಸ್ ಸಂಸ್ಥೆಯ ಸಂಯೋಜನಾಧಿಕಾರಿ ಶ್ರವಣ ಎಸ್ ಬಾಸ್ರಿ ನಿರೂಪಿಸಿದರು.