ಯುವಕನೊಬ್ಬ ಯುವತಿಯನ್ನು ಪುಸಲಾಯಿಸಿ ದೈಹಿಕ ಸಂಪರ್ಕ ಬೆಳೆಸಿಕೊಂಡಿದ್ದ ಪರಿಣಾಮ ಯುವತಿಗೆ 7.5 ತಿಂಗಳಿಗೆ ಮಗು ಜನಿಸಿದ್ದು, ಭಯಭೀತಳಾಗಿ ಶೌಚಾಲಯದಲ್ಲಿ ಹಸುಗೂಸಿನ ಕತ್ತು ಕುಯ್ದು ಎಸೆದಿರುವ ಹೃದಯವಿದ್ರಾವಕ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ದೇವನಹಳ್ಳಿ

ಯುವಕನೊಬ್ಬ ಯುವತಿಯನ್ನು ಪುಸಲಾಯಿಸಿ ದೈಹಿಕ ಸಂಪರ್ಕ ಬೆಳೆಸಿಕೊಂಡಿದ್ದ ಪರಿಣಾಮ ಯುವತಿಗೆ 7.5 ತಿಂಗಳಿಗೆ ಮಗು ಜನಿಸಿದ್ದು, ಭಯಭೀತಳಾಗಿ ಶೌಚಾಲಯದಲ್ಲಿ ಹಸುಗೂಸಿನ ಕತ್ತು ಕುಯ್ದು ಎಸೆದಿರುವ ಹೃದಯವಿದ್ರಾವಕ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತಾಲೂಕಿನ ಬೀರಸಂದ್ರ ಗ್ರಾಮದಲ್ಲಿರುವ ಪ್ರತಿಷ್ಠಿತ ಫಾಕ್ಸ್ ಕಾನ್ ಕಂಪನಿಯಲ್ಲಿ ಘಟನೆ ನಡೆದಿದ್ದು, ಯಾದಗಿರಿ ಮೂಲದ ರೇಣುಕಾ(19) ನವಜಾತ ಶಿಶುವಿನ ಕತ್ತು ಕುಯ್ದು ಟಾಯ್ಲೆಟ್‌ನಲ್ಲಿ ಎಸೆದಿರುವ ಮಹಿಳೆ. ಈಕೆ ಅದೇ ಜಿಲ್ಲೆಯ ಯುವಕನೊಂದಿಗೆ ಸುತ್ತಾಡಿ ಗರ್ಭಿಣಿ ಆಗಿದ್ದಳೆಂದೂ, ಈಕೆ ಗರ್ಭಿಣಿ ಎಂದು ತಿಳಿದು ಆತ ಬೇರೊಂದು ಯುವತಿಯೊಂದಿಗೆ ಮದುವೆ ಆಗಿದ್ದಾನೆ. ಗರ್ಭಿಣಿ ಆಗಿದ್ದ ರೇಣಿಕಾ ದಿಕ್ಕುತೋಚದೆ ಶೌಚಾಲಯದಲ್ಲಿ ಮಗುವನ್ನು ಹಡೆದು ಅಲ್ಲೇ ಕತ್ತು ಕುಯ್ದು ಎಸೆದು ಹೋಗಿದ್ದಲೆನ್ನಲಾಗಿದೆ.

ತಂದೆ ತಾಯಿ ಇಲ್ಲದೆ ಅಕ್ಕ ಭಾವನ ಜೊತೆಯಲ್ಲಿದ್ದ ರೇಣುಕಾ, ಕಳೆದ ಒಂದು ತಿಂಗಳ ಹಿಂದೆ ಫಾಕ್ಸ್ ಕಾನ್ ಕಂಪನಿಯಲ್ಲಿ ಕೆಲಸ ಸಿಕ್ಕಿದೆ ಎಂದು ದೊಡ್ಡಬಳ್ಳಾಪುರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಕೆಲಸಕ್ಕೆ ಹೋಗಿ ಬರುತ್ತಿದ್ದಳು. ಈ ವೇಳೆ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಹೆರಿಗೆ ನೋವು ಕಾಣಿಸಿಕೊಂಡು ಟಾಯ್ಲೆಟ್‌ನಲ್ಲಿ ಮಗುವಿಗೆ ಜನನವಾಗಿದೆ. 7.5 ತಿಂಗಳ ಮಗುವನ್ನು ಏನು ಮಾಡಬೇಕು ಎಂದು ತಿಳಿಯದೆ, ಶೌಚಾಲಯದಲ್ಲಿದ್ದ ಲೋಹದ ಪ್ಲೇಟ್‌ನಿಂದ ಮಗುವಿನ ಕತ್ತು ಸೀಳಿ ಟಾಯ್ಲೆಟ್ ಬೇಸಿನ್ ಒಳಗೆ ಹಾಕಿ ನೀರು ಬಿಟ್ಟು ಅಲ್ಲಿಂದ ಹೊರ ಹೋಗಿದ್ದಾಳೆ.ನಂತರ ಬೇರೆ ಮಹಿಳೆ ಶೌಚಾಲಯದ ಒಳಗೆ ಹೋದಾಗ ಮಗುವಿನ ತಲೆ ಕಾಣಿಸಿದೆ. ಕೂಡಲೇ ಕಂಪನಿ ಸಿಬ್ಬಂದಿ ಮೂಲಕ ವಿಶ್ವನಾಥಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸ್‌ ಸಿಬ್ಬಂದಿ ಮಗುವಿನ ದೇಹ ಹೊರತೆಗೆದು ಯುವತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆ ಸಂಬಂಧ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದುವರಿಸಿದ್ದಾರೆ.