ಮಗಳ ಮದುವೆಗಾಗಿ ಅಡ್ಡದಾರಿ ಹಿಡಿದಿದ್ದ ತಾಯಿ ಈಗ ಪೊಲೀಸರ ಅತಿಥಿ

| N/A | Published : Aug 07 2025, 12:45 AM IST / Updated: Aug 07 2025, 01:47 PM IST

ಮಗಳ ಮದುವೆಗಾಗಿ ಅಡ್ಡದಾರಿ ಹಿಡಿದಿದ್ದ ತಾಯಿ ಈಗ ಪೊಲೀಸರ ಅತಿಥಿ
Share this Article
  • FB
  • TW
  • Linkdin
  • Email

ಸಾರಾಂಶ

ಆರೋಪಿಗಳು ಚೌಡೇಶ್ವರಿ ದೇವಾಲಯದ ಅರ್ಚಕ ಚಿಕ್ಕಮಲ್ಲೇಶಪ್ಪನಿಗೆ ಗಾಳ ಹಾಕಿದ್ದಾರೆ. ಅರ್ಚಕ ಚಿಕ್ಕಮಲ್ಲೇಶಪ್ಪ ಮದ್ಯ ವ್ಯಸನಿಯಾಗಿದ್ದು, ಆತನಿಗೆ ಹಣದ ಆಮಿಷ ಒಡ್ಡಿ, ದೇವಸ್ಥಾನದಲ್ಲಿದ್ದ ಎಲ್ಲ ಚಿನ್ನ- ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿದ್ದಾರೆ 

 ಚಿಕ್ಕಬಳ್ಳಾಪುರ/ಶಿಡ್ಲಘಟ್ಟ :  ಶಿಡ್ಲಘಟ್ಟ ತಾಲೂಕಿನ ಹಿರಿಯಲಚೇನಹಳ್ಳಿ ಗ್ರಾಮದ ಚೌಡೇಶ್ವರಿ ದೇವಾಲಯದಲ್ಲಿ ಜುಲೈ 23 ರಂದು ಚೌಡೇಶ್ವರಿ ದೇವಿಗೆ ಸೇರಿದ ಬೆಳ್ಳಿ ಮುಖವಾಡ, ಮೂಗುತಿ, ಚಿನ್ನದ ಮಾಂಗಲ್ಯದ ಬೊಟ್ಟುಗಳು, ಕಾಲು ಚೈನುಗಳು ಸೇರಿದಂತೆ ಆಭರಣಗಳು ಕಳ್ಳತನವಾಗಿದ್ದವು. ಕಳ್ಳತನಕ್ಕೆ ಸಂಬಂಧಿಸಿದಂತೆ ದಿಬ್ಬೂರಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಕಳ್ಳತನ ಮಾಡಿದ್ದ ದೇವಾಲಯದ ಅರ್ಚಕ ಚಿಕ್ಕಮಲ್ಲೇಶಪ್ಪ, ಲತಾ ಮತ್ತು ನವೀನ್ ಕುಮಾರ್ ಎಂಬುವವರನ್ನು ಬಂಧಿಸಿ ಅವರಿಂದ ದೇವಾಲಯದಲ್ಲಿ ಕಳುವಾಗಿದ್ದ ಆಭರಣಗಳನ್ನೆಲ್ಲಾ ವಶಪಡಿಸಿಕೊಂಡಿದ್ದಾರೆ.

ಬಂಧಿತರಲ್ಲಿ ಪ್ರಮುಖ ಆರೋಪಿ ದೇವನಹಳ್ಳಿ ತಾಲೂಕಿನ ವಿಜಯಪುರ ಮೂಲದ ಲತಾ ಎಂಬುವರಾಗಿದ್ದು, ಇವರು ತಮ್ಮ ಮಗಳ ಮದುವೆಯ ಖರ್ಚು ವೆಚ್ಚಕ್ಕಾಗಿ ದೇವಿಯ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದು ಬಯಲಾಗಿದೆ. ಲತಾಗೆ ನಾಲ್ವರು ಪುತ್ರಿಯರು ಮತ್ತು ಓರ್ವ ಪುತ್ರನಿದ್ದಾನೆ. ಮಕ್ಕಳು ಮದುವೆ ವಯಸ್ಸಿಗೆ ಬಂದಿದ್ದು, ಲತಾ ತನ್ನ ಎರಡನೇ ಮಗಳ ಮದುವೆಗಾಗಿ ಕಳ್ಳತನದ ದಾರಿ ಹಿಡಿದ್ದಾಳೆ. ತನ್ನ ಮೂರನೇ ಮಗಳ ಪ್ರಿಯಕರ ಚಿಕ್ಕಬಳ್ಳಾಪುರ ತಾಲೂಕಿನ ಕೇಶವಾರ ಗ್ರಾಮದ ನವೀನ್ ಕುಮಾರ್ ಜೊತೆ ಸೇರಿಕೊಂಡು ಕಳ್ಳತನದ ಸಂಚು ರೂಪಿಸಿದ್ದಾಳೆ.

ನಂತರ, ಆರೋಪಿಗಳು ಚೌಡೇಶ್ವರಿ ದೇವಾಲಯದ ಅರ್ಚಕ ಚಿಕ್ಕಮಲ್ಲೇಶಪ್ಪನಿಗೆ ಗಾಳ ಹಾಕಿದ್ದಾರೆ. ಅರ್ಚಕ ಚಿಕ್ಕಮಲ್ಲೇಶಪ್ಪ ಮದ್ಯ ವ್ಯಸನಿಯಾಗಿದ್ದು, ಆತನಿಗೆ ಹಣದ ಆಮಿಷ ಒಡ್ಡಿ, ದೇವಸ್ಥಾನದಲ್ಲಿದ್ದ ಎಲ್ಲ ಚಿನ್ನ- ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿದ್ದಾರೆ. ತನಿಖೆ ನಡೆಸಿದ ದಿಬ್ಬೂರಹಳ್ಳಿ ಠಾಣೆ ಪೊಲೀಸರು ದೇವಸ್ಥಾನದ ಅರ್ಚಕನ ಚಿಕ್ಕಮಲ್ಲೇಶಪ್ಪನನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯಿಬಿಟ್ಟಿದ್ದಲ್ಲದೇ ತಾನೂ ಕೂಡ ಕಳ್ಳತನದಲ್ಲಿ ಭಾಗಿಯಾಗಿದ್ದಾಗಿ ಒಪ್ಪಿಕೊಂಡಿದ್ದಾನೆ.

ಮಗಳ ಮದುವೆಯ ಖರ್ಚು, ವೆಚ್ಚ ಸರಿದೂಗಿಸಲು ಅಡ್ಡದಾರಿ ಹಿಡಿದ ಲತಾ, ಈಕೆಗೆ ಸಾಥ್ ನೀಡಿದ ಅರ್ಚಕ ಚಿಕ್ಕಮಲ್ಲೇಶಪ್ಪ, ಆರೋಪಿ ಲತಾ ಮಗಳ ಪ್ರೇಮಿ ನವೀನ್ ಕುಮಾರ್ ಈಗ ಪೊಲೀಸರ ಅತಿಥಿಯಾಗಿದ್ದಾರೆ.

Read more Articles on