ಕ್ರೀಡೆ ತಂಡವಾಗಿ ಕೆಲಸ ಮಾಡಲು ಪ್ರೇರಣೆ: ಡಾ. ವಿಜಯಕುಮಾರ್‌

| Published : Nov 13 2025, 01:45 AM IST

ಸಾರಾಂಶ

ಜಿಲ್ಲಾ ಗೃಹರಕ್ಷಕ ದಳದ ಆಯೋಜನೆಯಲ್ಲಿ ನಡೆದ ಪಶ್ಚಿಮ ವಲಯ ಮಟ್ಟದ ಗೃಹಕ್ಷಕರ ವೃತ್ತಿಪರ ಕ್ರೀಡಾಕೂಟ ನಗರದ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಂಪನ್ನಗೊಂಡಿತು.

ಗೃಹರಕ್ಷಕದಳದ ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟ ಉದ್ಘಾಟನೆ

ಉಡುಪಿ: ಶಿಸ್ತು, ತಾಳ್ಮೆ, ದಕ್ಷತೆ ಹಾಗೂ ಬದ್ಧತೆಗೆ ಹೆಸರಾಗಿರುವ ಗೃಹರಕ್ಷಕರುಗಳು ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ಅವರು ದೈಹಿಕವಾಗಿ ಸದೃಢರಾಗಿ ಉತ್ತಮ ಆರೋಗ್ಯ ಹೊಂದುತ್ತಾರೆ ಮತ್ತು ಇದು ಸೇವೆಯಲ್ಲಿ ತಂಡವಾಗಿ ಕೆಲಸ ಮಾಡಲು ಕ್ರೀಡೆ ಪ್ರೇರಣೆ ನೀಡುತ್ತದೆ ಎಂದು ಮಂಗಳೂರು ಯೇನೆಪೋಯ ವಿಶ್ವವಿದ್ಯಾಲಯ ಕುಲಪತಿ ಡಾ.ವಿಜಯ್ ಕುಮಾರ್ ಹೇಳಿದ್ದಾರೆ. ಬುಧವಾರ ಜಿಲ್ಲಾ ಗೃಹರಕ್ಷಕ ದಳದ ಆಯೋಜನೆಯಲ್ಲಿ ನಡೆದ ಪಶ್ಚಿಮ ವಲಯ ಮಟ್ಟದ ಗೃಹಕ್ಷಕರ ವೃತ್ತಿಪರ ಕ್ರೀಡಾಕೂಟವನ್ನು ನಗರದ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಗೃಹ ರಕ್ಷಕ ದಳವು ಪೊಲೀಸ್ ಪಡೆಯ ಮತ್ತೊಂದು ಪ್ರಮುಖ ವಿಭಾಗವಾಗಿದೆ. ಗೃಹರಕ್ಷಕರು ಹಗಲುರಾತ್ರಿಯೆನ್ನದೇ ತುರ್ತು ಸಂದರ್ಭಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒತ್ತಡದ ನಡುವೆ ಕರ್ತವ್ಯ ನಿರ್ವಹಿಸುವ ಈ ಸಿಬ್ಬಂದಿಗಳಿಗೆ ಕ್ರೀಡಾಕೂಟಗಳ ಆಯೋಜನೆ ಮನಸ್ಸಿಗೆ ಮುದ ನೀಡುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವು ಸರ್ವೇ ಸಾಮಾನ್ಯ. ಕ್ರೀಡೆಯನ್ನು ದೈನಂದಿನ ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಗೃಹರಕ್ಷಕರಿಗೆ ಸಲಹೆ ನೀಡಿದರು.

ಉಡುಪಿ, ಚಿಕ್ಕಮಗಳೂರು, ಕಾರವಾರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗೃಹರಕ್ಷಕ ಕ್ರೀಡಾಪಟುಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಕ್ರೀಡಾಂಗಣಕ್ಕೆ ಸಂದೀಪ್ ಚಿಕ್ಕಮಗಳೂರು ಕ್ರೀಡಾಜ್ಯೋತಿ ತಂದರು. ಕ್ರೀಡಾ ಪ್ರತಿಜ್ಞೆಯನ್ನು ಕ್ರೀಡಾಪಟುಗಳು ಸ್ವೀಕರಿಸಿದರು.ಕಾರ್ಯಕ್ರಮದಲ್ಲಿ ಕಾಪು ದಂಡತೀರ್ಥ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಪ್ರಶಾಂತ್ ಕುಮಾರ್ ಶೆಟ್ಟಿ, ವೈದ್ಯೆ ಡಾ.ಶೃತಿ ಬಲ್ಲಾಳ, ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟ ಡಾ.ರೋಶನ್ ಕುಮಾರ್ ಶೆಟ್ಟಿ, ವಿವಿಧ ಘಟಕಗಳ ಘಟಕಾಧಿಕಾರಿಗಳು, ಗೃಹರಕ್ಷಕ ದಳದ ಪುರುಷ ಹಾಗೂ ಮಹಿಳಾ ಗೃಹರಕ್ಷಕರು, ಮತ್ತಿತರರು ಉಪಸ್ಥಿತರಿದ್ದರು.ಗೃಹರಕ್ಷಕದಳ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ ಸ್ವಾಗತಿಸಿ, ಬ್ರಹ್ಮಾವರ ಘಟಕಾಧಿಕಾರಿ ಸ್ಟೀವನ್ ಪ್ರಕಾಶ್ ನಿರೂಪಿಸಿ, ಸ್ನೇಹ ಜಿ. ವಂದಿಸಿದರು.