ಬಸ್‌ ನಿಲ್ದಾಣ ಕೆಸರುಮಯ : ಸಸಿ ನೆಟ್ಟು ಪ್ರತಿಭಟನೆ

| Published : Jul 26 2024, 01:37 AM IST

ಸಾರಾಂಶ

ಚಿಕ್ಕಮಗಳೂರು, ನಗರದ ಗ್ರಾಮೀಣ ಬಸ್‌ ನಿಲ್ದಾಣ ಕೆಸರುಮಯವಾಗಿದೆ. ದುರಸ್ತಿಗೆ ಆಗ್ರಹಿಸಿದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಭೀಮ್ ಆರ್ಮಿ, ಕನ್ನಡಪರ ಹಾಗೂ ದಲಿತ ಒಕ್ಕೂಟಗಳ ಸಂಘಟನೆಗಳ ನೇತೃತ್ವದಲ್ಲಿ ಬೇಸಾಯ ನಡೆಸಿ, ಭತ್ತದ ಸಸಿಗಳು ನೆಟ್ಟು ಗುರುವಾರ ವಿನೂತನ ಪ್ರತಿಭಟನೆ ನಡೆಯಿತು.

ಭೀಮ್ ಆರ್ಮಿ, ಕನ್ನಡಪರ ಹಾಗೂ ದಲಿತ ಒಕ್ಕೂಟಗಳ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನಗರದ ಗ್ರಾಮೀಣ ಬಸ್‌ ನಿಲ್ದಾಣ ಕೆಸರುಮಯವಾಗಿದೆ. ದುರಸ್ತಿಗೆ ಆಗ್ರಹಿಸಿದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಭೀಮ್ ಆರ್ಮಿ, ಕನ್ನಡಪರ ಹಾಗೂ ದಲಿತ ಒಕ್ಕೂಟಗಳ ಸಂಘಟನೆಗಳ ನೇತೃತ್ವದಲ್ಲಿ ಬೇಸಾಯ ನಡೆಸಿ, ಭತ್ತದ ಸಸಿಗಳು ನೆಟ್ಟು ಗುರುವಾರ ವಿನೂತನ ಪ್ರತಿಭಟನೆ ನಡೆಯಿತು.ಬಳಿಕ ಮಾತನಾಡಿದ ಭೀಮ್‌ ಆರ್ಮಿ ಗೌರವಾಧ್ಯಕ್ಷ ಹೊನ್ನೇಶ್, ಬಡವರು, ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಈ ಬಸ್‌ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಮಳೆಗಾಲದಲ್ಲಿ ಕೆಸರುಮಯವಾಗಿ ಅನೇಕ ಮಕ್ಕಳು ಮುಖ್ಯ ರಸ್ತೆಗೆ ಬರುವಷ್ಟರಲ್ಲಿ ಕೆಸರಿನಲ್ಲಿ ಬಿದ್ದು ಶಾಲೆಗೂ ತೆರಳದೇ ಪರದಾಡುವಂತಾಗಿದೆ ಎಂದರು.ಹಳೆಯ ಕಾರಾಗೃಹ ಜಾಗದಲ್ಲಿ ಗ್ರಾಮೀಣ ಬಸ್‌ ನಿಲ್ದಾಣ ನಿರ್ಮಿಸಿ ಮೂರ್‍ನಾಲ್ಕು ವರ್ಷಗಳು ಕಳೆದಿದೆ. ಇಂದಿಗೂ ಶೌಚಾಲಯ ಸ್ವಚ್ಛತೆಯಿಲ್ಲ, ಕಸದ ರಾಶಿ ಎಲ್ಲೆಂದರಲ್ಲೇ ಬಿದ್ದಿದೆ. ಇವುಗಳ ನಡುವೆ ನೂರಾರು ಮಂದಿ ಸಂಚರಿಸುತ್ತಿದ್ದಾರೆ. ಜೊತೆಗೆ ಮಳೆ ಗಾಲದಲ್ಲಿ ಕೆಸರಿನಿಂದ ಕೂಡಿದ್ದರೆ, ಬೇಸಿಗೆ ಕಾಲದಲ್ಲಿ ಧೂಳು ಮಯವಾಗಿರುತ್ತದೆ, ಮೂಗು ಮುಚ್ಚಿ ಪ್ರಯಾಣಿಸಬೇಕಾಗುತ್ತದೆ ಎಂದು ಹೇಳಿದರು.ಈ ಹಿಂದೆ ಭೀಮ್‌ ಆರ್ಮಿ ಹಾಗೂ ಕನ್ನಡಪರ ಸಂಘಟನೆ ನೇತೃತ್ವದಲ್ಲಿ ಬಸ್‌ ನಿಲ್ದಾಣ ದುರಸ್ತಿಗೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಒತ್ತಾಯಿಸಲಾಗಿತ್ತು. ಆದರೂ ಕೂಡಾ ಗಮನಹರಿಸದ ಹಿನ್ನೆಲೆಯಲ್ಲಿ ಇಂದು ನಿಲ್ದಾಣದ ಆವರಣದಲ್ಲಿ ಬೇಸಾಯಿ ನಡೆಸಿ, ಬತ್ತದ ಸಸಿಗಳನ್ನು ನೆಟ್ಟು ಜಿಲ್ಲಾಡಳಿತಕ್ಕೆ ಕಣ್ತೆರೆಸುವ ಕೆಲಸ ಮಾಡಲಾಗುತ್ತಿದೆ ಎಂದರು.ಉಳ್ಳವರ ಮಕ್ಕಳು ಪಕ್ಕದ ಉತ್ತಮ ಬಸ್‌ ನಿಲ್ದಾಣದಲ್ಲಿ ಅಥವಾ ಕಾರುಗಳಲ್ಲಿ ಪ್ರಯಾಣಿಸಿದರೆ, ಬಡವರು, ದೀನದಲಿತರ ಮಕ್ಕಳು ಗುಂಡಿ, ಗೊಟರುಗಳಲ್ಲಿ ಸಂಚರಿಸುವ ಸ್ಥಿತಿ ಎದುರಾಗಿದೆ. ಮಳೆಗಾಲದಲ್ಲಿ ಕೆಸರಿನಿಂದ ಕೂಡಿರುವ ನಿಲ್ದಾಣ ತುಂಬಾ ಜಾರಿಕೆಯಿದೆ. ವೃದ್ದರು, ಮಹಿಳೆಯರು ಮಳೆಯ ನಡುವೆ ಆತುರವಾಗಿ ತೆರಳಿದರೆ ಪ್ರಾಣಕ್ಕೂ ಕುತ್ತು ಸಂಭವಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳ ಗೋಳಾಟ ಹೇಳತೀರದಾಗಿದೆ. ಒಂದೆಡೆ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ. ಇನ್ನೊಂದೆಡೆ ಜನಪ್ರತಿನಿಧಿಗಳು ಇದೇ ಮಾರ್ಗದಲ್ಲಿ ಅನೇಕ ಬಾರಿ ಸಂಚರಿಸಿದರೂ ಪ್ರಯಾಣಿಕರ ಸಮಸ್ಯೆ ಕಾಣಿಸುತ್ತಿಲ್ಲ. ಕೂಡಲೇ ಎಚ್ಚೆತ್ತುಕೊಂಡು ಬಸ್‌ ನಿಲ್ದಾಣ ಕಾಂಕ್ರೀಟಿಕರಣಗೊಳಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲಾಗುವುದು ಎಂದರು.ಈ ಸಂದರ್ಭದಲ್ಲಿ ಭೀಮ್ ಆರ್ಮಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಲೋಕೇಶ್, ತಾಲೂಕು ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ರಾಕೇಶ್, ಸಾಮಾಜಿಕ ಜಾಲತಾಣದ ಅಧ್ಯಕ್ಷ ದಿಲೀಪ್, ಮುಖಂಡರಾದ ಸುಜಯ್, ಕೀರ್ತಿ, ವಸಂತ, ಉಮೇಶ್, ಸುಧೀರ್, ರಘು, ಕಿರಣ್, ಹುಣಸೆಮಕ್ಕಿ ಲಕ್ಷ್ಮಣ್‌, ಮಂಜುನಾಥ್, ಚಂದ್ರಶೇಖರ್ ಇದ್ದರು.25 ಕೆಸಿಕೆಎಂ 2ಚಿಕ್ಕಮಗಳೂರು ನಗರದ ಕೆಎಸ್‌ಆರ್‌ಟಿಸಿ ಗ್ರಾಮೀಣ ಬಸ್‌ ನಿಲ್ದಾಣದ ದುರಸ್ತಿಗೊಳಿಸುವಂತೆ ಆಗ್ರಹಿಸಿ ಕೆಸರಿನಲ್ಲಿ ನಾಟಿ ಮಾಡುವ ಮೂಲಕ ಗುರುವಾರ ವಿನೂತನ ಪ್ರತಿಭಟನೆ ನಡೆಸಲಾಯಿತು.