ಮುದಿಗೆರೆ ಅರಣ್ಯ ಶ್ವಾಸಕೋಶದಂತೆ: ಚಿದಾನಂದಗೌಡ

| Published : Mar 13 2025, 12:48 AM IST

ಸಾರಾಂಶ

ಮುದಿಗೆರೆ ಅರಣ್ಯವನ್ನು ಬೇರೆ ಯಾವುದೇ ಸರ್ಕಾರದ ಯೋಜನೆಗಳಿಗೆ ಉಪಯೋಗಿಸದೆ ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ವಿಧಾನ ಪರಿಷತ್ ಶಾಸಕ ಚಿದಾನಂದ್ ಎಂ.ಗೌಡ ಅವರು ಅರಣ್ಯ ಸಚಿವರಿಗೆ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಶಿರಾ ಶಿರಾ ತಾಲೂಕು ಬರದ ನಾಡು ಬಯಲಸೀಮೆ ಪ್ರದೇಶ. ಇಂತಹ ಪ್ರದೇಶದಲ್ಲಿ ತಾಲೂಕಿನ ಮುದಿಗೆರೆ ಅಮೃತ್ ಮಹಲ್ ಕಾವಲ್ ಸ.ನಂ. 12ರಲ್ಲಿ ಸುಮಾರು 3025 ಎಕರೆ ಅರಣ್ಯವನ್ನು ಮೈಸೂರು ಮಹಾರಾಜರು ಮುದಿಗೆರೆ ಬ್ಲಾಕ್ ಸ್ಟೇಟ್ ಫಾರೆಸ್ಟ್ ಎಂದು 1942ರಲ್ಲಿಯೇ ಘೋಷಿಸಿ ಆದೇಶ ಹೊರಡಿಸಿದ್ದು, ಈ ಅರಣ್ಯವನ್ನು ಬೇರೆ ಯಾವುದೇ ಸರ್ಕಾರದ ಯೋಜನೆಗಳಿಗೆ ಉಪಯೋಗಿಸದೆ ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ವಿಧಾನ ಪರಿಷತ್ ಶಾಸಕ ಚಿದಾನಂದ್ ಎಂ.ಗೌಡ ಅವರು ಅರಣ್ಯ ಸಚಿವರಿಗೆ ಮನವಿ ಮಾಡಿದ್ದಾರೆ. ವಿಧಾನಮಂಡಲದ ಅಧಿವೇಶನದಲ್ಲಿ ಶಿರಾ ತಾಲೂಕಿನ ಮುದಿಗೆರೆ ಕಾವಲ್ನಲ್ಲಿ ಇರುವ ಅರಣ್ಯವನ್ನು ಮೀಸಲು ಅರಣ್ಯ ಎಂದು ಅಧಿಸೂಚನೆ ಹೊರಡಿಸಿರುವ ಬಗ್ಗೆ ಅಧಿವೇಶನದಲ್ಲಿ ಪ್ರಶ್ನಿಸಿದ್ದಾರೆ. ಮೈಸೂರು ಮಹರಾಜರ ಸರ್ಕಾರವು ಸೆಕ್ಷನ್ 17 ಮೈಸೂರು ಅರಣ್ಯ ಕಾಯ್ದೆಯಡಿ ಮುದಿಗೆರೆ ಬ್ಲಾಕ್ ಸ್ಟೇಟ್ ಫಾರೆಸ್ಟ್ ಎಂದು 1942ರಲ್ಲಿಯೇ ಘೋಷಿಸಿ ಆದೇಶ ಹೊರಡಿಸಿದ್ದು, ಈ ಅರಣ್ಯ ಪ್ರದೇಶ ಮುಂದಿನ ಪೀಳಿಗೆಗೆ ಉಳಿಯಬೇಕು. ಹಾಗೂ ಇದಕ್ಕೆ ಸುತ್ತಲೂ ಬೇಲಿ ಹಾಕಬೇಕು. ಇನ್ನೂ ಹೆಚ್ಚು ಅರಣ್ಯೀಕರ ಮಾಡಬೇಕು. ಈಗಾಗಲೇ ಶಿರಾ ಬಳಿ ಸಾವಿರಾರು ಎಕರೆ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ನೀಡಲಾಗಿದೆ. ಇಲ್ಲಿ ಕೈಗಾರಿಕೆಗಳು ಸ್ಥಾಪನೆಯಾದರೆ ಮುಂದಿನ ದಿನಗಳಲ್ಲಿ ವಾಯು ಮಾಲಿನ್ಯ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಮುದಿಗೆರೆ ಬೇರೆ ಸರಕಾರದ ಉದ್ದೇಶಕ್ಕೆ ಬಳಸಬಾರದು ಎಂದು ಒತ್ತಾಯಸಿದ್ದಾರೆ. ಈ ಬಗ್ಗೆ ಉತ್ತರಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ಯಾವುದೇ ಅಧಿಸೂಚಿತ ಅರಣ್ಯ ಪ್ರದೇಶ ಎಂದು ಘೋಷಿಣೆಯಾದ ಮೇಲೆ ಅದು ಅರಣ್ಯವಾಗಿಯೇ ಉಳಿಯಲಿದೆ. ಇದನ್ನು ಯಾವುದೇ ಪರಿಸ್ಥಿತಿಯಲ್ಲಿ ಅರಣ್ಯೇತರ ಯೋಜನೆಗಳಿಗೆ ಈ ಭೂಮಿಯನ್ನು ನೀಡಲು ಬರುವುದಿಲ್ಲ. ಅನ್ಯ ಕಾರ್ಯಕ್ಕೆ ಉಪಯೋಗಿಸಲು ಸಾಧ್ಯವಿಲ್ಲ. ಸರ್ಕಾರ ಇದನ್ನು ಅರಣ್ಯವಾಗಿಯೇ ಉಳಿಸುತ್ತದೆ. ಹಾಗೂ ಅರಣ್ಯವನ್ನು ಹೆಚ್ಚಿಸಲು ಹೆಚ್ಚು ಅನುದಾನ ತಂದು ಗಿಡಮರಗಳನ್ನು ಬೆಳೆಸಲು ಕ್ರಮ ಕೈಗೊಳ್ಳುತ್ತೇನೆ ಎಂದರು.