ಸಾರಾಂಶ
ಮೂಡುಬಿದಿರೆಯ ಸಮಾಜಮಂದಿರದಲ್ಲಿ, ವಿವಿಧ ಯಕ್ಷಗಾನ ಸಂಘಟನೆಗಳು ಮತ್ತು ಜಯರಾಮ ಆಚಾರ್ಯರ ಅಭಿಮಾನಿಗಳ ವತಿಯಿಂದ ಯಕ್ಷಗಾನದ ಹೆಸರಾಂತ ಹಾಸ್ಯಗಾರ ದಿ. ಬಂಟ್ವಾಳ ಜಯರಾಮ ಆಚಾರ್ಯರಿಗೆ ನುಡಿನಮನ ಕಾರ್ಯಕ್ರಮ ಏರ್ಪಟ್ಟಿತು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಹಿರಿಯ ಹಾಸ್ಯಗಾರರ ಪರಂಪರೆಯ ಕೊಂಡಿಯಂತಿದ್ದ ಜಯರಾಮ ಆಚಾರ್ಯ ಸವ್ಯಸಾಚಿ ಕಲಾವಿದ. ಅವರದು ರಾಜಹಾಸ್ಯ. ಅಗ್ಗದ ಜನಪ್ರಿಯತೆಗಾಗಿ ಅಶ್ಲೀಲತೆಯ ಮೊರೆಹೋಗದ, ಅಪೂರ್ವ ಪ್ರತ್ಯುತ್ಪನ್ನಮತಿತ್ವದ ಹಾಸ್ಯಗಾರರಾಗಿ ಮೆರೆದವರು ಎಂದು ಕಲಾವಿದ, ಉಪನ್ಯಾಸಕ ಡಾ. ವಾದಿರಾಜ ಕಲ್ಲೂರಾಯ ಅಭಿಪ್ರಾಯಪಟ್ಟಿದ್ದಾರೆ.ಮೂಡುಬಿದಿರೆಯ ಸಮಾಜಮಂದಿರದಲ್ಲಿ, ವಿವಿಧ ಯಕ್ಷಗಾನ ಸಂಘಟನೆಗಳು ಮತ್ತು ಜಯರಾಮ ಆಚಾರ್ಯರ ಅಭಿಮಾನಿಗಳ ವತಿಯಿಂದ ನಡೆದ ಯಕ್ಷಗಾನದ ಹೆಸರಾಂತ ಹಾಸ್ಯಗಾರ ದಿ. ಬಂಟ್ವಾಳ ಜಯರಾಮ ಆಚಾರ್ಯರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಕ್ಷ ಸಂಗಮ ಸಂಚಾಲಕ ಶಾಂತರಾಮ ಕುಡ್ವ ಮಾತನಾಡಿ, ಜಯರಾಮ ಆಚಾರ್ಯರು ಮುಮ್ಮೇಳದಲ್ಲೂ ಭಾಗವತಿಕೆ, ಚೆಂಡೆ, ಮದ್ದಳೆ, ಚಕ್ರತಾಳಗಳಲ್ಲೂ ಅನುಭವ ಹೊಂದಿದ್ದವರು, ಯಾವ ಸಂದರ್ಭದಲ್ಲೂ ಯಾರಲ್ಲೂ ಏನನ್ನೂ ಬೇಡದ , ಕೇಳದ ಸ್ವಾಭಿಮಾನಿ ಕಲಾವಿದರಾಗಿದ್ದರು ಎಂದರು.ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಉದ್ಯಮಿ ಕೆ. ಶ್ರೀಪತಿ ಭಟ್, ತೋಡಾರು ದಿವಾಕರ ಶೆಟ್ಟಿ, ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರ ಶಿವರಾಮ ಆಚಾರ್ಯ ಉಳಿಯ ನುಡಿನಮನ ಸಲ್ಲಿಸಿದರು. ವಿವಿಧ ಸಂಘಟನೆಗಳ ಪರವಾಗಿ ಅಲಂಗಾರು ಸುಬ್ರಹ್ಮಣ್ಯ ಭಟ್, ಮಹಾವೀರ ಪಾಂಡಿ ಕಾಂತಾವರ, ನೆಲ್ಲಿಮಾರು ಸದಾಶಿವ ರಾವ್, ವೆಂಕಟರಮಣ ಕೆರೆಗದ್ದೆ, ಜಗದೀಶ ಬೇಲಾಡಿ, ಗೀತಾ ಯೋಗೀಶ ಆಚಾರ್ಯ, ರಾಜೇಶ ಪುರೋಹಿತ, ಸರ್ವೋತ್ತಮ ಆಚಾರ್ಯ, ಸದಾನಂದ ನೂರಾಳ್ಬೆಟ್ಟು, ವೆಂಕಟರಾಜ ಎಳಚಿತ್ತಾಯ, ಗೋವರ್ಧನ ಎಂ. ಶಿರ್ತಾಡಿ, ರತ್ನಾವತಿ ಟೀಚರ್, ವಿನಯ್ ಮೊದಲಾದವರಿದ್ದರು. ಯಕ್ಷದೇವ ಮಿತ್ರಕಲಾಮಂಡಳಿ ಸಂಚಾಲಕ ದೇವಾನಂದ ಭಟ್ ನಿರೂಪಿಸಿದರು.