ಸಾರಾಂಶ
ನವಲಗುಂದ: ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಮೊಹರಂ ಕೊನೆಯ ದಿನವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಹಿಂದು-ಮುಸ್ಲಿಂ ಭಾವೈಕ್ಯದ ಸಂಕೇತವಾದ ಅಲಾಯಿ ದೇವರ ಆರಾಧನೆ ಎಲ್ಲೆಡೆ ಜೋರಾಗಿತ್ತು.
ನಗರದ ವಿವಿಧ ಮಸೀದಿಗಳಲ್ಲಿ ಪ್ರತಿಷ್ಠಾಪಿಸಿದ್ದ ಅಲಾಯಿ ದೇವರು ಭಾನುವಾರ ಬೆಳಗ್ಗೆಯೇ ಸವಾರಿ ಹೋಗಿ ಬಂದವು. ನಂತರ ಪಟ್ಟಣದ ಚಾವಡಿ ಬಯಲಿನಲ್ಲಿ ಪರಸ್ಪರ ಎದುರಾದವು, ಭಕ್ತರು ಶ್ರದ್ಧಾ ಭಕ್ತಿಯಿಂದ ದೇವರಿಗೆ ನಮಿಸಿ ಇಷ್ಟಾರ್ಥ ಪೂರೈಸುವಂತೆ ಬೇಡಿಕೊಂಡು ಸಕ್ಕರೆ, ಹೂವಿನ ಹಾರ ನೈವೇದ್ಯ ಅರ್ಪಿಸಿದರು.ಕೊನೆಯ ದಿನವಾದ ಕಾರಣ ಸಿಂಗಾರಗೊಂಡಿದ್ದ ದೇವರು ಸಂಜೆಯಾಗುತ್ತಲೇ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟವು. ಜನರು ದಾರಿಯುದ್ದಕ್ಕೂ ತಂಡೋಪತಂಡವಾಗಿ ನಿಂತುಕೊಂಡು ಅಂತಿಮ ದರ್ಶನ ಪಡೆದು ಪುನೀತರಾದರು.
ಜನರು ಮಸೀದಿ ಬಳಿ ಆಗಮಿಸಿ ದೈವದ ಕಾರ್ಯದಲ್ಲಿ ಭಾಗಿಯಾದರು. ಸಂಜೆ ಅಂತಿಮ ಮೆರವಣಿಗೆ ಮುಗಿದ ಬಳಿಕ ದೇವರನ್ನು ವಿಸರ್ಜಿಸಿ ಹಬ್ಬಾಚರಣೆ ಮುಗಿಸಲಾಯಿತು.ನಗರದ ವಿವಿಧ ಮಸೀದಿಗಳಲ್ಲಿ ಪ್ರತಿಷ್ಠಾಪಿಸಿದ್ದ ಅಲಾಯಿ ದೇವರು ಮತ್ತು ಡೋಲಿಗಳನ್ನು ಭಾನುವಾರ ಬೆಳಗ್ಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಎಲ್ಲ ಕೈ ದೇವರು ಮತ್ತು ಡೋಲಿಗಳ ಮೆರವಣಿಗೆ ನಡೆಸಿ ಮೆಹಬೂಬ ನಗರದ ಯುವಕರು ಹೆಜ್ಜೆ ಮೇಳ ಹಾಕಿದರು, ಮೊಹರಂ ಸರ್ವ-ಧರ್ಮೀಯರು ಆಚರಿಸುವುದು ವೈಶಿಷ್ಟ್ಯಪೂರ್ಣ ಹಬ್ಬವಾಗಿತ್ತು. ಊರಿನ ಎಲ್ಲ ಸಮಾಜದ ಬಾಂಧವರು ಸಹ ಮೊಹರಂ ಹಬ್ಬದಲ್ಲಿ ಫಾಲ್ಗೊಂಡು ಆಧುನಿಕ ಯುಗದಲ್ಲೂ ಸ್ನೇಹ, ಭ್ರಾತೃತ್ವದ ಸಂಕೇತವಾಗಿ ನಡೆದುಕೊಂಡರು, ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಅಬ್ಬಾಸಲಿ ದೇವರಿಡು ಅವರ ಮನೆತನದಿಂದ ಶರಬತ್ ಹಂಚಿದರು.