ಮುಕಳೆಪ್ಪ ಮದುವೆ ನೋಂದಣಿ ಅಮಾನತಾಗಲಿ

| Published : Sep 24 2025, 01:00 AM IST

ಸಾರಾಂಶ

ಹಿಂದೂ ಹುಡುಗಿಯರ ಮನಸ್ಸು ಕೆಡಿಸುವುದು, ಬ್ಲ್ಯಾಕ್‌ ಮ್ಯಾಜಿಕ್‌ ಮಾಡುವುದು ಮುಸ್ಲಿಂ ಸಮುದಾಯದಲ್ಲಿ ಜೋರಾಗಿದೆ. ಅದೇ ರೀತಿ ಖ್ವಾಜಾ ಸಹ. ಆತನಿಗೆ ಕೇವಲ ಈಗ ಮದುವೆಯಾಗಿರುವ ಯುವತಿ ಮಾತ್ರವಲ್ಲ, ಇನ್ನೂ ಎಂಟು ಜನ ಯುವತಿಯರೊಂದಿಗೆ ಸಂಬಂಧವಿದೆ.

ಧಾರವಾಡ

ಮೋಸದಿಂದ ಹಿಂದೂ ಯುವತಿಯ ಮದುವೆಯಾಗಿರುವ ಖ್ವಾಜಾ ಉರ್ಫ್‌ ಮುಕಳೆಪ್ಪನ ಮದುವೆ ನೋಂದಣಿ ರದ್ದಾಗಬೇಕು ಹಾಗೂ ಈ ಮೋಸದ ಮದುವೆಗೆ ಸಹಾಯ ಮಾಡಿದವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕೆಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹಿಂದೂ ಹುಡುಗಿಯರ ಮನಸ್ಸು ಕೆಡಿಸುವುದು, ಬ್ಲ್ಯಾಕ್‌ ಮ್ಯಾಜಿಕ್‌ ಮಾಡುವುದು ಮುಸ್ಲಿಂ ಸಮುದಾಯದಲ್ಲಿ ಜೋರಾಗಿದೆ. ಅದೇ ರೀತಿ ಖ್ವಾಜಾ ಸಹ. ಆತನಿಗೆ ಕೇವಲ ಈಗ ಮದುವೆಯಾಗಿರುವ ಯುವತಿ ಮಾತ್ರವಲ್ಲ, ಇನ್ನೂ ಎಂಟು ಜನ ಯುವತಿಯರೊಂದಿಗೆ ಸಂಬಂಧವಿದೆ ಎಂದು ಗಂಭೀರ ಆರೋಪ ಮಾಡಿರುವ ಮುತಾಲಿಕ್‌, ಈ ಬಗ್ಗೆ ಎಲ್ಲವನ್ನೂ ಶೀಘ್ರದಲ್ಲಿಯೇ ಹೊರಗೆ ಹಾಕುತ್ತೇವೆ ಎಂದರು.

ಖ್ವಾಜಾ ಮೋಸದಿಂದ ಮದುವೆಯಾಗಿದ್ದಾನೆ ಎನ್ನುವುದು ಸ್ಪಷ್ಟ. ಒಂದೇ ದಿನ ಮನೆಯ ಬಾಡಿಗೆ ಪತ್ರ, ಮದುವೆ ನೋಂದಣಿ ಹೇಗೆ ಸಾಧ್ಯ? ಆದ್ದರಿಂದ ಮದುವೆ ನೋಂದಣಿ ಅಮಾನತಾಗಬೇಕು. ಆತನಿಗೆ ಬೆಂಬಲ ನೀಡಿದವರಿಗೂ ಶಿಕ್ಷೆಯಾಗಬೇಕು ಎಂದು ಪುನರುಚ್ಚರಿಸಿದ ಮುತಾಲಿಕ್‌, ಯುವತಿಯನ್ನು ಆತನ ಜತೆ ಹೋಗಲು ಬಿಡುವುದಿಲ್ಲ. ಇಸ್ಲಾಂ ಶಕ್ತಿಯ ವಿರುದ್ಧ ನಾವು ಹೋರಾಟ ಮಾಡುತ್ತೇವೆ. ಆತನ ಒತ್ತಡಕ್ಕೆ ಮಣಿದು ಯುವತಿ ಸುಳ್ಳು ಹೇಳುತ್ತಿದ್ದಾರೆ. ಆತನ ಯೂಟ್ಯೂಬ್‌ ಚಾನೆಲ್‌ ಬಂದ್‌ ಆಗುವ ವರೆಗೂ ಹೋರಾಟ ಮಾಡುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.