ಸಾರಾಂಶ
ಮೂಲ್ಕಿ ಸಭಾಗೃಹ ಸಮಿತಿ ಆಶ್ರಯದಲ್ಲಿ ಸಭಾಗೃಹದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಕೆನರಾ ಶಿಕ್ಷಣ ಸಂಸ್ಥೆಗಳು ಮತ್ತು ಬ್ಯಾಂಕ್ ಸ್ಥಾಪಕ ಅಮ್ಮೆಂಬಾಳ್ ಸುಬ್ಬಾರಾವ್ ಪೈ ಸಂಸ್ಮರಣಾ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಅಮ್ಮೆಂಬಾಳ್ ಸುಬ್ಬಾರಾವ್ ಪೈ ಯವರು ಗ್ರಾಮೀಣ ಮಹಿಳೆಯರ ಶಿಕ್ಷಣ ಹಾಗೂ ಸ್ವಾವಲಂಬನೆಗಾಗಿ ಶಿಕ್ಷಣ ಹಾಗೂ ವಿತ್ತ ಸಂಸ್ಥೆಗಳನ್ನು ಸ್ಥಾಪಿಸಿ ಬೆಳೆಸಿದ ಮಹಾನ್ ಚೇತನ ಎಂದು ಜಿ.ಎಸ್.ಬಿ. ಬಡ ವಿದ್ಯಾರ್ಥಿ ಫಂಡ್ ಉಪಾಧ್ಯಕ್ಷ ಕೆ.ಸತೀಶ ಭಂಡಾರಿ ಹೇಳಿದರು.ಮೂಲ್ಕಿ ಸಭಾಗೃಹ ಸಮಿತಿ ಆಶ್ರಯದಲ್ಲಿ ಸಭಾಗೃಹದಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಕೆನರಾ ಶಿಕ್ಷಣ ಸಂಸ್ಥೆಗಳು ಮತ್ತು ಬ್ಯಾಂಕ್ ಸ್ಥಾಪಕ ಅಮ್ಮೆಂಬಾಳ್ ಸುಬ್ಬಾರಾವ್ ಪೈ ಸಂಸ್ಮರಣಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.ಈ ಸಂದರ್ಭ ಸಾಧಕರ ನೆಲೆಯಲ್ಲಿ ನಿವೃತ್ತ ಅಧಿಕಾರಿ ಅಶೋಕ್ ಕಾಮತ್ ದಂಪತಿಗಳನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಾಧಕಿ ಮಂಗಳೂರು ವಿಶ್ವ ವಿದ್ಯಾನಿಲಯ ನಡೆಸಿದ ಅಂತಿಮ ಬಿಸಿಎ ಪರೀಕ್ಷೆಯಲ್ಲಿ ಶೇ 100 ಅಂಕ ಸಾಧನೆ ಹಾಗೂ 6 ನೇ ರ್ಯಾಂಕ್ ಗಳಿಸಿದ ಮೂಲ್ಕಿ ವಿಜಯಾ ಕಾಲೇಜು ವಿದ್ಯಾರ್ಥಿನಿ ಪಲ್ಲವಿ ಎಸ್. ಭಟ್ ರವರನ್ನು ಸನ್ಮಾನಿಸಲಾಯಿತು. ವೇದಮೂರ್ತಿ ಪ್ರಶಾಂತ್ ಭಟ್ ರವರ ಪ್ರಧಾನ ಪೌರೋಹಿತ್ಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ ಅನ್ನ ಸಂತರ್ಪಣೆ ಜರುಗಿತು.ಈ ಸಂದರ್ಭ ಸಭಾಗ್ರಹ ಸಮಿತಿ ಧರ್ಮದರ್ಶಿ ಗಣೇಶ್ ಭಟ್, ಜಿ.ಎಸ್.ಬಿ ಸಭಾ ಅಧ್ಯಕ್ಷ ಸತ್ಯೇಂದ್ರ ಶೆಣೈ, ಕಾರ್ಯದರ್ಶಿ ವಿಶ್ವನಾಥ ಶೆಣೈ, ಕೋಶಾಧಿಕಾರಿ ಪ್ರವೀಣ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು. ವಿಶ್ವನಾಥ ಶೆಣೈ ನಿರೂಪಿಸಿದರು.