ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ತಾಲೂಕಿನ ಮುಂಡೂರು ಗ್ರಾಪಂ ಅಭಿವೃದ್ಧಿ ವಿಚಾರದಲ್ಲಿ ಸಂಪೂರ್ಣವಾಗಿ ಹಿಂದುಳಿದಿದ್ದು, ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ. ಮುಂದಿನ ೪ ದಿನಗಳೊಳಗಾಗಿ ಕ್ರಿಯಾ ಯೋಜನೆ ಮಾಡದಿದ್ದರೆ ಪಂಚಾಯಿತಿ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಪಂಚಾಯಿತಿ ಸದಸ್ಯ ಕಮಲೇಶ್ ಸರ್ವೆದೋಳಗುತ್ತು ಮತ್ತು ಮಹಮ್ಮದಾಲಿ ಎಚ್ಚರಿಸಿದ್ದಾರೆ.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ೧೫ನೇ ಹಣಕಾಸಿನ ಕ್ರಿಯಾಯೋಜನೆ ನಡೆಯದಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯವಾಗಿದೆ. ಇದರಿಂದ ಆಗುವಂತಹ ಸೌಲಭ್ಯಗಳಿಂದ ಜನತೆಗೆ ವಂಚನೆ ಮಾಡಿದಂತಾಗುತ್ತದೆ. ಹಲವು ಸಲ ಈ ಬಗ್ಗೆ ಅಧ್ಯಕ್ಷರ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ರಾಜೀವ ಗಾಂಧಿ ಸೇವಾ ಕೇಂದ್ರ ನಿರ್ಮಾಣಕ್ಕೆ ರು.೯ ಲಕ್ಷ ಇಡಲಾಗಿದೆ. ಆದರೆ ಅದಕ್ಕೆ ಜಾಗ ಗುರುತಿಸುವ ಕೆಲಸ ಇನ್ನೂ ಆಗಿಲ್ಲ. ಜನತೆಗೆ ಕುಡಿಯುವ ನೀರು ಕೊಡುವ ಉದ್ದೇಶದಿಂದ ತುರ್ತು ಸಂದರ್ಭದಲ್ಲಿ ಕೊರೆಸಲಾದ ೧೧ ಕೊಳವೆಬಾವಿಗಳ ಬಿಲ್ ಪಾವತಿ ಮಾಡಿಲ್ಲ. ಕನಿಷ್ಟ ವರ್ಷಕ್ಕೊಂದರಂತೆ ಆದರೂ ಬಿಲ್ ಪಾವತಿ ಮಾಡಿ ಎಂದು ಸದಸ್ಯರು ಆಗ್ರಹಿಸಿದ್ದರೂ ಈ ಬಗ್ಗೆ ಯಾವುದೇ ಸ್ಪಂಧನೆ ಇಲ್ಲ ಎಂದು ಅವರು ಹೇಳಿದರು.
ಸ್ಥಾಯಿ ಸಮಿತಿ ಸಭೆಗಳೇ ಆಗಿಲ್ಲ:ಸಾಮಾನ್ಯ ಸಭೆಯ ಮೊದಲು ಗ್ರಾಪಂನಲ್ಲಿರುವ ಮೂರು ಪ್ರಮುಖ ಸ್ಥಾಯಿ ಸಮಿತಿಗಳ ಸಭೆ ನಡೆಸುವುದು ನಿಯಮ. ಆದರೆ ಮುಂಡೂರು ಗ್ರಾಪಂ ನಲ್ಲಿ ಕಳೆದ ೪ ವರ್ಷಗಳಿಂದ ಈ ಸ್ಥಾಯಿ ಸಮಿತಿಗಳ ಸಭೆಯೇ ನಡೆಸದೆ ನಿಯಮ ಉಲ್ಲಂಘನೆ ಮಾಡಲಾಗಿದೆ. ಗ್ರಾಮ ಸಭೆಗಳನ್ನು ಕಾಟಾಚಾರಕ್ಕಾಗಿ ನಡೆಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕೋರಂ ಆಗದೆ ಗ್ರಾಮಸಭೆಗಳು ರದ್ದಾಗುತ್ತಿವೆ ಎಂದು ಆರೋಪಿಸಿದ್ದಾರೆ.
ಜನತೆಯ ಅಭಿವೃದ್ದಿಗಾಗಿ ಇರುವ ಈ ಸ್ಥಳೀಯಾಡಲಿತ ಈ ರೀತಿ ಬೇಜಾವಾಬ್ದಾರಿಯಾಗಿ ವರ್ತಿಸಿದರೆ ಜನತೆಗೆ ಸಂಕಷ್ಟ. ಹಾಗಾಗಿ ಇದೇ ರೀತಿ ಮುಂದುವರಿದರೆ ಸಂಬಂಧಪಟ್ಟ ಇಲಾಖೆಗಳು ಮುಖ್ಯಸ್ಥರಿಗೆ ದೂರು ಸಲ್ಲಿಸಲಾಗುವುದು ಎಂದು ಅವರು ಹೇಳಿದರು.