ಸಾರಾಂಶ
ಕೋಲಾರ ಜಿಲ್ಲೆಯಲ್ಲಿ ಸರ್ಕಾರದ ವತಿಯಿಂದ ನೀಡಲಾಗಿದ್ದ ಗಣರಾಜ್ಯೋತ್ಸವ ಆಹ್ವಾನ ಪತ್ರಿಕೆಯಲ್ಲಿ ತಾಜ್ಮಹಲ್ ಮತ್ತು ಕುತುಬ್ ಮಿನಾರ್ ಚಿತ್ರ ಹಾಕಿದ್ದಕ್ಕೆ ಸಂಸದ ಮುನಿಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಲಾರ: ಗಣರಾಜ್ಯೋತ್ಸವದ ಆಹ್ವಾನ ಪತ್ರಿಕೆಯಲ್ಲಿ ತಾಜ್ ಮಹಲ್, ಕುತುಬ್ ಮಿನಾರ್ ಹಾಕಿರುವುದನ್ನು ನೋಡಿ ಸಂಸದ ಎಸ್.ಮುನಿಸ್ವಾಮಿ ಜಿಲ್ಲಾಧಿಕಾರಿ ಅಕ್ರಂಪಾಷರ ಕಾರ್ಯವೈಖರಿಯನ್ನು ಖಂಡಿಸಿದ್ದಾರೆ.
ಈ ಬಗ್ಗೆ ನವದೆಹಲಿಯಲ್ಲಿ ಹೇಳಿಕೆ ನೀಡಿರುವ ಅವರು, ಪರಂಪರೆಯಂತೆ ಆಯಾ ಜಿಲ್ಲೆಯ ಪ್ರಮುಖ ಸ್ಥಳಗಳ ಚಿತ್ರಗಳನ್ನು ಹಾಕಲಾಗುತ್ತದೆ, ಆದರೆ ಡೀಸಿಯವರು ನಿಯಮ ಬದಲಿಸಿದ್ದಾರೆ.ನಾವು ಅವರನ್ನು ಇಡೀ ಕೋಲಾರ ಜಿಲ್ಲೆಗೆ ಡೀಸಿ ಎಂದು ತಿಳಿದ್ದೇವು, ಆದರೆ ಅವರು ಒಂದು ಕೋಮಿಗೆ ಮೀಸಲು ಡೀಸಿಯಾಗಿದ್ದಾರೆ.
ಕೂಡಲೇ ಸರ್ಕಾರ ಅವರನ್ನು ವಾಪಸ್ ಕರೆಸಿಕೊಳ್ಳಬೇಕು, ಇಲ್ಲವಾದರೆ ಬಿಜೆಪಿ ಹೋರಾಟ ಮಾಡಲಿದೆ ಎಂದು ತಿಳಿಸಿದ್ದಾರೆ. ರಾಮ ಮಂದಿರ ವಿಚಾರದಲ್ಲೂ ಡೀಸಿ ನಮಗೆ ಕಿರುಕುಳ ಕೊಟ್ಟರು, ಇವರಿಗೆ ಚುನಾವಣೆಗೆ ನಿಲ್ಲಬೇಕೆನ್ನುವ ಆಸೆ ಇದ್ದಂತಿದೆ, ಹಾಗಾಗಿ ಸಿದ್ದರಾಮಯ್ಯರನ್ನು ಮೆಚ್ಚಿಸಲು ಹೀಗೆ ಮಾಡುತ್ತಿದ್ದಾರೆ ಎಂದು ಸಂಸದ ಮುನಿಸ್ವಾಮಿ ಆರೋಪಿಸಿದ್ದಾರೆ.