ಪ್ರಿಯಕರನ ಜತೆ ಸೇರಿ ರುಬ್ಬುವ ಕಲ್ಲಿನಿಂದ ಪತಿಯ ಕೊಲೆ. ಪ್ರೇಮಿ ಜತೆ ಏಕಾಂತದಲ್ಲಿದ್ದಾಗ ಸಿಕ್ಕಿಬಿದ್ದ ಪತ್ನಿ, ಈ ವೇಳೆ ಪತಿಯ ಹತ್ಯೆ, ಜಾರಿ ಬಿದ್ದು ಸಾವು ಎಂದು ಪತ್ನಿ ನಾಟಕ, ಪ್ರೇಮಿಗಳು ಜೈಲಿಗೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರಿಯಕರನ ಜತೆಗೆ ಇರುವಾಗ ಪತಿಗೆ ಸಿಕ್ಕಿಬಿದ್ದಾಗ ನಡೆದ ಜಗಳದ ವೇಳೆ ಪ್ರಿಯಕರನ ಜತೆ ಸೇರಿ ಪತಿಯ ತಲೆ ಮೇಲೆ ರುಬ್ಬುವ ಕಲ್ಲು ಎತ್ತಿ ಹಾಕಿ ಕೊಲೆಗೈದು ಬಳಿಕ ಮದ್ಯದ ಅಮಲಿನಲ್ಲಿ ಜಾರಿ ಬಿದ್ದು ಮೃತಟ್ಟಿದ್ದಾರೆ ಎಂದು ನಾಟಕವಾಡಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಎಚ್‌ಎಸ್‌ಆರ್‌ ಲೇಔಟ್‌ 2ನೇ ಸೆಕ್ಟರ್‌ನ ನಂದಿನಿ ಬಾಯಿ (22) ಮತ್ತು ಆಕೆಯ ಪ್ರಿಯಕರ ನಿತೀಶ್‌ ಕುಮಾರ್‌ (22) ಬಂಧಿತರು. ಆರೋಪಿಗಳು ಜ.9ರಂದು ರಾತ್ರಿ ವೆಂಕಟರಮಣ ನಾಯಕ್‌ (30) ಎಂಬಾತನ ಮೇಲೆ ರುಬ್ಬುವ ಕಲ್ಲು ಎತ್ತಿ ಹಾಕಿ ಕೊಲೆಗೈದಿದ್ದರು. ಮೃತನ ತಂದೆ ಲಕ್ಷ್ಮೀನಾಯಕ್‌ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ವಿವರ:

ಆಂಧ್ರಪ್ರದೇಶದ ಅನಂತಪುರ ಮೂಲದ ವೆಂಕಟರಮಣ ನಾಯಕ್‌ ನಾಲ್ಕು ವರ್ಷದ ಹಿಂದೆ ಸಂಬಂಧಿ ನಂದಿನಿ ಬಾಯಿಯನ್ನು ಮದುವೆಯಾಗಿದ್ದರು. ದಂಪತಿಗೆ ಮೂರು ಮತ್ತು 9 ತಿಂಗಳ ಎರಡು ಹೆಣ್ಣು ಮಕ್ಕಳಿವೆ. ಕಳೆದ ಮೂರು ವರ್ಷಗಳಿಂದ ದಂಪತಿ ಮಕ್ಕಳೊಂದಿಗೆ ಎಚ್‌ಎಸ್‌ಆರ್‌ ಲೇಔಟ್‌ನ 2ನೇ ಸೆಕ್ಟರ್‌ನ ಬನಶಂಕರಿ ಎಂಬ ವಸತಿ ಕಟ್ಟಡದಲ್ಲಿ ನೆಲೆಸಿದ್ದರು.

ವೆಂಕಟರಮಣ ಬೆಳಗ್ಗೆ ಇಂದಿರಾನಗರದ ಅಂಗಡಿಯೊಂದರಲ್ಲಿ ಸೇಲ್ಸ್‌ ಮ್ಯಾನ್‌ ಕೆಲಸ, ರಾತ್ರಿ ತಾನು ವಾಸವಿರುವ ಬನಶಂಕರಿ ಕಟ್ಟಡದಲ್ಲೇ ವಾಚ್‌ಮನ್‌ ಕೆಲಸ ಮಾಡಿಕೊಂಡಿದ್ದರು. ಮದುವೆಯ ಆರಂಭದಲ್ಲಿ ದಂಪತಿ ಅನೋನ್ಯವಾಗಿದ್ದರು. ಬಳಿಕ ಪತ್ನಿ ನಂದಿನಿ ಸಣ್ಣಪುಟ್ಟ ವಿಚಾರಗಳಿಗೆ ಜಗಳ ಮಾಡಿಕೊಂಡು ತವರು ಮನೆಗೆ ಹೋಗುತ್ತಿದ್ದಳು. ಬಳಿಕ ಊರಿನ ಹಿರಿಯರ ಸಮ್ಮುಖದಲ್ಲಿ ಆಕೆಗೆ ಬುದ್ಧಿವಾದ ಹೇಳಿ ಗಂಡನ ಜತೆಗೆ ಕಳುಹಿಸಿದ್ದರು.

ಇತ್ತೀಚೆಗೆ ನಂದಿನಿ ಮೊಬೈಲ್‌ನಲ್ಲಿ ವ್ಯಕ್ತಿಯೊಬ್ಬನ ಜತೆಗೆ ತುಂಬಾ ಮಾತನಾಡುತ್ತಿದ್ದಳು. ಈ ವಿಚಾರ ಪತಿ ವೆಂಕಟರಮಣನಿಗೆ ಗೊತ್ತಾಗಿ ಜಗಳ ಮಾಡಿದ್ದ. ಬಳಿಕ ಇಬ್ಬರ ಕುಟುಂಬದ ಹಿರಿಯರು ರಾಜೀಸಂಧಾನ ಮಾಡಿ ಇನ್ನು ಮುಂದೆ ಹೀಗೆ ಮಾಡದಂತೆ ಆಕೆಗೆ ಬುದ್ಧಿವಾದ ಹೇಳಿದ್ದರು.

ರುಬ್ಬುವ ಕಲ್ಲಿನಿಂದ ಹೊಡೆದು ಕೊಲೆ:

ನಂದಿನಿ ಜ.9ರಂದು ರಾತ್ರಿ 8ರ ಸುಮಾರಿಗೆ ತನ್ನ ಪ್ರಿಯಕರನನ್ನು ಮನೆಗೆ ಕರೆಸಿಕೊಂಡು ಏಕಾಂತದಲ್ಲಿದ್ದರು. ಈ ವೇಳೆ ಏಕಾಏಕಿ ಮನೆಗೆ ಬಂದ ಪತಿ ವೆಂಕಟರಮಣನ ಕೈಗೆ ನಂದಿನಿ ಮತ್ತು ನಿತೀಶ್‌ ಕುಮಾರ್‌ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಜೋರು ಜಗಳವಾಗಿದೆ. ಮದ್ಯ ಸೇವಿಸಿ ಬಂದಿದ್ದ ವೆಂಕಟರಮಣನ ಮೇಲೆ ನಿತೀಶ್‌ ಕುಮಾರ್‌ ಹಲ್ಲೆ ಮಾಡಿದ್ದಾನೆ. ಕೆಳಗೆ ಬಿದ್ದಾಗ ರುಬ್ಬುವ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ವಾಚ್‌ಮನ್‌ ಕೊಠಡಿ ಬಳಿಯ ಶೌಚಾಲಯದ ಸಮೀಪಕ್ಕೆ ಎಳೆದೊಯ್ದು ಇರಿಸಿದ್ದಾರೆ. ನಂತರ ಆರೋಪಿ ನಿತೀಶ್‌ ಕುಮಾರ್‌ ಆಂಧ್ರಪ್ರದೇಶಕ್ಕೆ ಪರಾರಿಯಾಗಿದ್ದಾನೆ.

ಪತ್ನಿಯಿಂದ ಜಾರಿ ಬಿದ್ದು ಪತಿ ಸಾವು ನಾಟಕ:

ಮದ್ಯದ ಅಮಲಿನಲ್ಲಿ ಶೌಚಾಲಯಕ್ಕೆ ತೆರಳುವಾಗ ಪತಿ ವೆಂಕಟರಮಣ ಮೃತಪಟ್ಟಿದ್ದಾನೆ ಎಂದು ನಂದಿನಿ ನಾಟಕವಾಡಲು ಸಂಚು ಮಾಡಿದ್ದಾಳೆ. ಬಳಿಕ 112 ಪೊಲೀಸ್‌ ಸಹಾಯವಾಣಿಗೆ ಕರೆ ಮಾಡಿ ವಿಚಾರವನ್ನು ತಿಳಿಸಿದ್ದಾಳೆ. ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದಾಗ, ಪತಿ ಮದ್ಯದ ಅಮಲಿನಲ್ಲಿ ಶೌಚಾಲಯಕ್ಕೆ ತೆರಳುವಾಗ ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ನಂದಿನಿ ಹೇಳಿದ್ದಾಳೆ. ವೆಂಕಟರಮಣನ ಮೈ ಹಾಗೂ ತಲೆಯ ಗಾಯ ಪರಿಶೀಲಿಸಿದಾಗ ಸಾವಿನ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿದೆ.ವಿಚಾರಣೆ ವೇಳೆ ಸಾವಿನ ರಹಸ್ಯ ಬಯಲು

ಕೊಲೆಯಾದ ವೆಂಕಟರಮಣನ ತಂದೆ ಲಕ್ಷ್ಮೀನಾಯಕ್‌, ಇದು ಕೊಲೆ ಎಂದು ಸೊಸೆ ನಂದಿನಿ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ಈ ನಡುವೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಇದು ಅಸಹಜ ಸಾವಲ್ಲವೆಂಬ ವರದಿ ಬಂದಿದೆ. ಬಳಿಕ ನಂದಿನಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ಮಾಡಿದಾಗ ವೆಂಕಟರಮಣನ ಸಾವಿನ ರಹಸ್ಯ ಬಯಲಾಗಿದೆ.-ಬಾಕ್ಸ್‌-

‘ಕಾಲೇಜ್‌ ಡೇ’ಸ್‌ ಲವ್‌!

ಆರೋಪಿಗಳಾದ ನಂದಿನಿ ಮತ್ತು ನಿತೀಶ್‌ ಆಂಧ್ರಪ್ರದೇಶದಲ್ಲಿ ಒಂದೇ ಕಾಲೇಜಿನಲ್ಲಿ ಓದುತ್ತಿದ್ದಾಗ ಪ್ರೀತಿಸುತ್ತಿದ್ದರು. ಇಬ್ಬರ ಬೇರೆ ಜಾತಿ ಕಾರಣಕ್ಕೆ ಎರಡೂ ಕುಟುಂಬಗಳು ಮದುವೆಗೆ ನಿರಾಕರಿಸಿದ್ದರು. ನಂದಿನಿಯನ್ನು ಸಂಬಂಧಿಕ ವೆಂಕಟರಮಣನ ಜತೆಗೆ ಮದುವೆ ಮಾಡಲಾಗಿತ್ತು. ಮದುವೆಯಾದರೂ ನಂದಿನಿ ಮತ್ತು ಪ್ರಿಯಕರ ನಿತೀಶ್‌ ತಮ್ಮ ಅನೈತಿಕ ಸಂಬಂಧ ಮುಂದುವರೆಸಿದ್ದರು.ಚಿತ್ರ:

-ನಂದಿನಿ ಬಾಯ್‌

-ನಿತೀಶ್‌ ಕುಮಾರ್‌