ಧ್ವಂಸ ಆದ ಸ್ಥಳದಲ್ಲೇ ಕಟ್ಟೆ ನಿರ್ಮಾಣ: ತಪ್ಪಿತಸ್ಥರನ್ನು ಬಂಧಿಸಿ, ಹಿಂದೂಗಳ ಮೇಲಿನ ಕೇಸ್ ವಾಪಸ್‌ ಪಡೆಯಿರಿಕಾಂಗ್ರೆಸ್ ಸರಕಾರ ಮೇಲೆ ತೀವ್ರ ವಾಗ್ದಾಳಿ

ಕನ್ನಡಪ್ರಭ ವಾರ್ತೆ ಭಟ್ಕಳ

ಮುರಿನಕಟ್ಟೆ ಪ್ರದೇಶದಲ್ಲಿ ಹೊಸದಾಗಿ ನಿರ್ಮಿಸಲಾದ ಕಟ್ಟೆಯನ್ನು ಮುಸ್ಲಿಮರು ಧ್ವಂಸ ಮಾಡಿರುವುದು ಕಾನೂನು ಬಾಹಿರ ಕೃತ್ಯವಾಗಿದೆ. ಮುರಿನಕಟ್ಟೆ ವಿಚಾರ ಎನ್‌ಎಚ್‌ಎಐ, ಅಧಿಕಾರಿಗಳು ಹಾಗೂ ಹಿಂದೂಗಳಿಗೆ ಸಂಬಂಧಪಟ್ಟ ವಿಚಾರ. ಆದರೆ ತಮಗೆ ಸಂಬಂಧ ಇಲ್ಲದಿದ್ದರೂ ಅನ್ಯಕೋಮಿನವರು ತಲೆ ಹಾಕಿದ್ದು ಯಾಕೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹೆದ್ದಾರಿ ಅಗಲೀಕರಣಕ್ಕೆ ಮಾರಿ ಹೊರೆ ಇಟ್ಟು ಪೂಜಿಸುವ ಮುರಿನಕಟ್ಟೆ ಸ್ಥಳಾಂತರ ಮಾಡಬೇಕಾಗಿದ್ದರಿಂದ ಸನಿಹದಲ್ಲೇ ಇರುವ ಹೆದ್ದಾರಿ ಪ್ರಾಧಿಕಾರದ ಜಾಗದಲ್ಲಿ ಕಟ್ಟೆ ನಿರ್ಮಿಸಲಾಗಿತ್ತು. ಕಟ್ಟೆ ನಿರ್ಮಿಸುವ ಸಂದರ್ಭದಲ್ಲಿ ಯಾವುದೇ ವಿರೋಧ ಇಲ್ಲದಿದ್ದರೂ ರಾತ್ರಿ ಸಾವಿರಾರು ಮುಸ್ಲಿಮರು ಆಗಮಿಸಿ ಪೊಲೀಸರಿಗೆ ಹಲ್ಲೆ ಮಾಡಿ ಕಟ್ಟೆಯನ್ನು ಧ್ವಂಸ ಮಾಡಿರುವುದು ಖಂಡನೀಯ. ಸಮಾಜದಲ್ಲಿ ಅಶಾಂತಿ, ದ್ವೇಷ ಮೂಡಿಸಿ ಶಾಂತಿಯ ವಾತಾವರಣ ಹಾಳು ಮಾಡುವ ಉದ್ದೇಶದಿಂದಲೇ ಇಂತಹ ಕೃತ್ಯ ಎಸಗಲಾಗಿದೆ. ಕಟ್ಟೆ ಧ್ವಂಸದಿಂದ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ. ಕಟ್ಟೆ ನಿರ್ಮಾಣದಿಂದ ಮುಸ್ಲಿಮರ ಭಾವನೆಗೆ ಧಕ್ಕೆ ಆಗಿದೆಯೇ ಎಂದು ಪ್ರಶ್ನಿಸಿದ ಅವರು, ಕಟ್ಟೆಯ ಬಗ್ಗೆ ಮುಸ್ಲಿಮರದ್ದು ವಿರೋಧ ಇದ್ದಿದ್ದರೆ ಜಿಲ್ಲಾಧಿಕಾರಿಗೆ, ಎಸ್ಪಿ ಅವರಿಗೆ ದೂರು ಸಲ್ಲಿಸಬಹುದಿತ್ತು. ಅದನ್ನು ಬಿಟ್ಟು ಕಾನೂನು ಕೈಗೆ ತೆಗೆದುಕೊಂಡು ಪೊಲೀಸರಿಗೆ ಹಲ್ಲೆ ಮಾಡಿ ಪೊಲೀಸರ ಎದುರಿನಲ್ಲೇ ಕಟ್ಟೆ ಧ್ವಂಸ ಮಾಡಿರುವುದು ಕಾನೂನು ಬಾಹಿರ ಕೃತ್ಯವಾಗಿದೆ. ಯಾರೇ ಆಗಲಿ ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಶೋಭೆ ಅಲ್ಲ ಎಂದರು.

ಕಟ್ಟೆ ಪುನರ್ ನಿರ್ಮಾಣ ಮಾಡಬೇಕು. ದ್ವಂಸ ಮಾಡಿದ ಪ್ರಮುಖ ವ್ಯಕ್ತಿಗಳನ್ನು ಬಂಧಿಸಬೇಕು. ಹಿಂದೂ ಕಾರ್ಯಕರ್ತರ ಮೇಲಿನ ಕೇಸನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಮೇ 29ರಂದು ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದರು.


ಧ್ವಂಸ ಮಾಡಿದಲ್ಲೇ ಕಟ್ಟೆ ನಿರ್ಮಾಣ ಮಾಡುತ್ತೇವೆ. ಇದರಲ್ಲಿ ಯಾವುದೇ ಸಂಶಯ ಬೇಡ. ರಾಜ್ಯದ ಕಾಂಗ್ರೆಸ್ ಸರಕಾರ ಸಮಾಜ ಘಾತುಕರಿಗೆ, ದೇಶದ್ರೋಹಿಗಳಿಗೆ, ಭ್ರಷ್ಟರಿಗೆ ಕುಮ್ಮಕ್ಕು ನೀಡುತ್ತಿದೆ. ಮೊನ್ನೆ ದಿನ ರಾಜ್ಯದಲ್ಲಿ ನಡೆದ ಹಲವು ಗಲಭೆಗಳ ಕೇಸುಗಳನ್ನು ವಾಪಾಸ್ ಪಡೆದಿದ್ದರಿಂದ ಕಾಂಗ್ರೆಸ್ ಸರಕಾರದಲ್ಲಿ ಕೆಲವರು ತಾವು ಏನು ಮಾಡಿದರೂ ನಡೆಯುತ್ತದೆ ಎಂದು ತಿಳಿದುಕೊಂಡು ಇಂತಹ ಕೃತ್ಯ ಎಸಗುತ್ತಿದ್ದಾರೆ. ಇವರು ಇಂತಹ ಕೃತ್ಯ ಎಸಗಲು ರಾಜ್ಯದ ಕಾಂಗ್ರೆಸ್ ಸರಕಾರವೇ ಕಾರಣ ಎಂದ ಅವರು, ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ಇಂತಹ ಘಟನೆ ನಡೆದಿದೆ. ಸಚಿವರು ಮುರಿನಕಟ್ಡೆ ವಿಚಾರದಲ್ಲಿ ಸೂಕ್ತ ನಿಗಾ ಇಟ್ಟಿದ್ದರೆ ಮತ್ತು ಸಮರ್ಪಕ ಸೂಚನೆ ಅಧಿಕಾರಿಗಳಿಗೆ ನೀಡಿದ್ದರೆ ಇಂತಹ ಕೃತ್ಯ ಆಗುತ್ತಿರಲಿಲ್ಲ ಎಂದರು.

ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಸಿಎಂ, ಡಿಸಿಎಂನವರ ಖುರ್ಚಿ ಕಾದಾಟವೇ ಮುಗಿದಿಲ್ಲ. ಜಿಲ್ಲೆಯಲ್ಲಿ ಅಭಿವೃದ್ಧಿ ಶೂನ್ಯವಾಗಿದೆ ಎಂದರು.

ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತರಾಮ, ಪ್ರಮುಖರಾದ ಶ್ರೀಕಾಂತ ನಾಯ್ಕ, ಖೇದಾರ ಕೊಲ್ಲೆ, ಶ್ರೀಧರ ನಾಯ್ಕ, ಭಾಸ್ಕರ ದೈಮನೆ ಮುಂತಾದವರಿದ್ದರು.