ಸಂಭ್ರಮದ ಮುರುಡೇಶ್ವರ ಮಹಾರಥೋತ್ಸವ

| Published : Jan 20 2025, 01:34 AM IST

ಸಂಭ್ರಮದ ಮುರುಡೇಶ್ವರ ಮಹಾರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಇತಿಹಾಸ ಪ್ರಸಿದ್ಧ ಮ್ಹಾತೋಬಾರ ಶ್ರೀ ಮುರುಡೇಶ್ವರ ದೇವರ ಮಹಾರಥೋತ್ಸವ ಭಾನುವಾರ ಸಂಜೆ ವಿಜಂಭಣೆಯಿಂದ ನೆರವೇರಿತು.

ಭಟ್ಕಳ: ಇತಿಹಾಸ ಪ್ರಸಿದ್ಧ ಮ್ಹಾತೋಬಾರ ಶ್ರೀ ಮುರುಡೇಶ್ವರ ದೇವರ ಮಹಾರಥೋತ್ಸವ ಭಾನುವಾರ ಸಂಜೆ ವಿಜಂಭಣೆಯಿಂದ ನೆರವೇರಿತು.

ಮಕರ ಸಂಕ್ರಮಣದ ದಿನದಿಂದಲೇ ಮಹಾರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದವು. ಮಹಾರಥೋತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ಭಾನುವಾರ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಹೋಮ-ಹವನ ನಡೆಯಿತು. ಬೆಳಗ್ಗೆಯಿಂದ ಸಂಜೆ ಮಹಾರಥೋತ್ಸವ ಆರಂಭಗೊಳ್ಳುವ ವರೆಗೂ ಭಕ್ತರು ರಥಕಾಣಿಕೆ, ಪೂಜೆ ಸಲ್ಲಿಸಿದರು.

ರಥೋತ್ಸವದ ಧಾರ್ಮಿಕ ವಿಧಿ-ವಿಧಾನಗಳನ್ನು ದೇವಸ್ಥಾನದ ಅರ್ಚಕ ಜಯರಾಮ ಅಡಿಗ ಮತ್ತು ಅವರ ತಂಡ ನಡೆಸಿಕೊಟ್ಟಿತು. ಭಾನುವಾರ ಸಂಜೆ 6ಕ್ಕೆ ಶ್ರೀ ಮುರುಡೇಶ್ವರ ದೇವರ ಉತ್ಸವ ಮೂರ್ತಿಯನ್ನು ಹೊತ್ತ ಬ್ರಹ್ಮರಥ ಎಳೆಯಲಾಯಿತು. ಸುಂದರ ಮಹಾರಥೋತ್ಸವವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಪತ್ನಿ ಪುಷ್ಪಲತಾ ವೈದ್ಯ, ಪುತ್ರಿ ಬೀನಾ ವೈದ್ಯ, ದೇವಸ್ಥಾನದ ಆಡಳಿತ ಮೊಕ್ತೇಸರ ಸತೀಶ ಆರ್. ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ, ಬಿಜೆಪಿ ಮುಖಂಡ ಈಶ್ವರ ಎನ್. ನಾಯ್ಕ, ಕೃಷ್ಣ ನಾಯ್ಕ, ಈಶ್ವರ ದೊಡ್ಮನೆ, ಮಾವಳ್ಳಿ -2 ಗ್ರಾಪಂ ಅಧ್ಯಕ್ಷೆ ನಾಗಮ್ಮ ಪಡಿಯಾರ, ನಯನಾ ನಾಯ್ಕ, ಮಾವಳ್ಳಿ ಗ್ರಾಪಂ ಸದಸ್ಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ವಿವಿಧ ಸಮಾಜದ ಮುಖಂಡರು ಮುಂತಾದವರಿದ್ದರು.

ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಜ. 21ರಂದು ಚೂರ್ಣೋತ್ಸವ, ಅವಭೃತ ಸ್ನಾನ, ಧ್ವಜಾರೋಹಣ, ಅಂಕುರಾರೋಪಣ ನಡೆಯಲಿದ್ದು, ಅಂದು ರಥೋತ್ಸವದ ಕಾರ್ಯಕ್ರಮಗಳು ಮುಕ್ತಾಯವಾಗಲಿದೆ.