ಚಾರಿತ್ರ‍್ಯ, ಚರಿತ್ರೆ ಮುರುಘಾಮಠಕ್ಕೆ ಹೇರಳ: ಡಾ.ಬಸವಕುಮಾರ ಸ್ವಾಮೀಜಿ

| Published : Jul 27 2025, 01:49 AM IST

ಚಾರಿತ್ರ‍್ಯ, ಚರಿತ್ರೆ ಮುರುಘಾಮಠಕ್ಕೆ ಹೇರಳ: ಡಾ.ಬಸವಕುಮಾರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಚರಿತ್ರೆ ಎಲ್ಲರಿಗೂ ಇರುತ್ತದೆ. ಅದನ್ನು ಯಾರು ಬೇಕಾದರೂ ಬರೆಸಿಕೊಳ್ಳಬಹುದು. ಆದರೆ ಚಾರಿತ್ರ‍್ಯ ಮತ್ತು ಚರಿತ್ರೆ ಎರಡೂ ಮುರುಘಾಮಠಕ್ಕೆ ಹೇರಳವಾಗಿದೆ. ನಮ್ಮ ನೌಕರರು ತಮ್ಮ ವೃತ್ತಿಯ ಜತೆಗೆ ಇಂತಹ ಪೀಠ ಪರಂಪರೆಯ ಮಹತ್ವವನ್ನು ತಿಳಿದುಕೊಳ್ಳುವ ಮನಸ್ಸು ಮಾಡಬೇಕು.

ಚಿತ್ರದುರ್ಗ: ಚರಿತ್ರೆ ಎಲ್ಲರಿಗೂ ಇರುತ್ತದೆ. ಅದನ್ನು ಯಾರು ಬೇಕಾದರೂ ಬರೆಸಿಕೊಳ್ಳಬಹುದು. ಆದರೆ ಚಾರಿತ್ರ‍್ಯ ಮತ್ತು ಚರಿತ್ರೆ ಎರಡೂ ಮುರುಘಾಮಠಕ್ಕೆ ಹೇರಳವಾಗಿದೆ. ನಮ್ಮ ನೌಕರರು ತಮ್ಮ ವೃತ್ತಿಯ ಜತೆಗೆ ಇಂತಹ ಪೀಠ ಪರಂಪರೆಯ ಮಹತ್ವವನ್ನು ತಿಳಿದುಕೊಳ್ಳುವ ಮನಸ್ಸು ಮಾಡಬೇಕು. ಇದರಿಂದ ವ್ಯಕ್ತಿತ್ವ ಗಟ್ಟಿಗೊಳ್ಳುತ್ತದೆ ಎಂದು ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.

ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದ ಗದ್ದುಗೆಯಲ್ಲಿ ಶ್ರಾವಣಮಾಸದ ಪ್ರಯುಕ್ತ ಏರ್ಪಡಿಸಿರುವ ವಚನಾಭಿಷೇಕ ಹಾಗೂ ಮುರುಘಾ ಪರಂಪರೆಯ ಗುರುಗಳ ಜೀವನ ದರ್ಶನ ಕಾರ್ಯಕ್ರಮದ ಎರಡನೆ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಯಾರು ತಮ್ಮನ್ನು ಸಂಪೂರ್ಣವಾಗಿ ಸಮರ್ಪಣೆ ಮಾಡಿಕೊಂಡಿರುತ್ತಾರೋ ಅವರು ಚರಿತ್ರೆಯಲ್ಲಿ ಉಳಿಯುತ್ತಾರೆ. ಶ್ರಾವಣಮಾಸ ಕೇವಲ ಪೂಜೆ ಪುನಸ್ಕಾರಗಳಿಗೆ ಮೀಸಲಿಲ್ಲ. ಅದರೊಂದಿಗೆ ಶ್ರವಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ನಮ್ಮ ಪೂರ್ವಿಕರ ದಿವ್ಯ ಭವ್ಯ ಪರಂಪರೆಯನ್ನು ಆಸಕ್ತಿ ವಹಿಸಿ ಶ್ರದ್ಧೆಯಿಂದ ಕಾಯ್ದುಕೊಳ್ಳಬೇಕಿದೆ. ಪೀಠ ಪರಂಪರೆಯ 2ನೇ ಗುರುಗಳ ಜೀವನಪಥ ದರ್ಶನವನ್ನು ವಿಷಯಾವಲೋಕನ ಮಾಡಿದ ಪ್ರಾಚಾರ್ಯ ಭರತ್ ಅವರು ಚೆನ್ನಾಗಿಯೇ ಮಾಡಿದರು. ಪೀಠದ ಶಾಂತವೀರರ ಕರ್ತೃವಿನ ಶಿಷ್ಯರು ಗುರುಸಿದ್ಧ ಸ್ವಾಮಿಗಳು ಹತ್ತು ವರ್ಷಗಳ ಕಾಲ ಪೀಠದಲ್ಲಿದ್ದು ಅವರು 3 ಆಯಾಮಗಳಲ್ಲಿ ಸಂಘರ್ಷ, ದುರ್ಗಮ ಹಾಗೂ ಸಮಾರೋಪದ ಹಾದಿಗಳನ್ನು ಕ್ರಮಿಸಿದ ಹಾದಿ ಅದು ಸಾಮಾನ್ಯವಾದುದಲ್ಲ ಎಂದರು.

ಮುರುಘಾಮಠದ ಬಸವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಮುರಘಾ ಪರಂಪರೆಯ 2ನೇ ಗುರುಗಳಾದ ಇಮ್ಮಡಿ ಗುರುಸಿದ್ಧ ಮಹಾಸ್ವಾಮಿ ಮುರುಘಾಪೀಠಕ್ಕೆ ಬಂದಾಗ ಸಂಘರ್ಷಮಯ ಬದುಕಿನೊಂದಿಗೆ ಸಮಾಜ ಸುಧಾರಣೆಯ ಜತೆ ಜತೆಗೆ ಸಾಹಿತ್ಯ, ಸಂಸ್ಕೃತಿ, ಸಂಸ್ಕೃತ ವ್ಯಾಕರಣಗಳ ಮೂಲಕ ಕರುಣಾರ್ಪಣ, ಭಾವಾರ್ಪಣ, ಮಿಶ್ರಾರ್ಪಣ ಜತೆಗೆ ಚನ್ನಬಸವಣ್ಣನವರ ಕರಣಹಸಿಗೆಯನ್ನು ಕನ್ನಡದಲ್ಲಿ ಎಲ್ಲರಿಗೂ ತಿಳಿಯುವಂತೆ ರಚಿಸಿದ್ದಾರೆ ಎಂದರು.

ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಭರತ್ ಪಿ.ಬಿ.ಮಾತನಾಡಿ, ಜಗದ್ಗುರು ಇಮ್ಮಡಿ ಮುರಿಗಾ ಗುರುಸಿದ್ಧ ದೇಶೀಕೇಂದ್ರರು ಲೋಕವನ್ನು ತಿದ್ದಲು, ಅಭಿರುಚಿಯನ್ನು ಸಂಸ್ಕರಿಸಲು ಜನಮನವನ್ನು ಬೆಳಗಲು, ಸರಳವಾದ ಜಾನಪದ ದಾಟಿಯನ್ನೂ ಪ್ರೌಢ ಕಾವ್ಯಗಳ ಮಾರ್ಗಶೈಲಿಯನ್ನು ಹಾಡುಗಬ್ಬದ ಮಾದರಿಯನ್ನು ಯಕ್ಷಗಾನ ಶೈಲಿಯನ್ನು ಬಳಸಿಕೊಂಡು ಕಾವ್ಯ ಸೃಷ್ಟಿ ಮಾಡಿದರು. ಸ್ವತಂತ್ರವಾಗಿ ಅನುವಾದ ರೂಪವಾಗಿ ವಿವರಣಾತ್ಮಕವಾಗಿ 13 ಗ್ರಂಥ ರಚನೆ ಮಾಡಿದರು. ಇವುಗಳಲ್ಲಿ ಪ್ರಭುಲೀಲಾ- ಸಂಸ್ಕೃತ ಮಹಾಕಾವ್ಯ, ಹಾಲಾಸ್ಯಲೀಲಾ (ಪುರಾಣ) (ಕನ್ನಡ ಚಂಪು) ಪ್ರಮುಖವಾದವು. ಇಂಥ ಮಹನೀಯರಿಂದ ರಚಿತವಾದ ಮುಂದಿನ ದಿನಮಾನದ ಅನೇಕ ಕವಿಗಳು, ಟೀಕಾಕಾರರು ಸ್ಫೂರ್ತಿ ಪಡೆದ ತಮ್ಮ ಗ್ರಂಥಗಳಲ್ಲಿ ಶ್ರೀಗಳನ್ನು ಸ್ಮರಿಸಿದ್ದಾರೆ ಎಂದು ತಿಳಿಸಿದರು.

ವಾಲ್ಮೀಕಿ ಪ್ರಭುಸ್ವಾಮಿಗಳು, ಲಿಂಗಾಯತ ಮಹಾಸಭಾದ ಬಸವರಾಜಕಟ್ಟಿ, ಅಧ್ಯಾಪಕ ಶಿವಕುಮಾರ್, ಸಮಾರಂಭದ ಸೇವಾಕರ್ತರಾದ ಟಿ.ಕೆ. ರಾಜಶೇಖರ್, ನಿಂಗಪ್ಪ, ಪಲ್ಲವಿ, ಸೇರಿದಂತೆ ಅನೇಕರು ಹಾಜರಿದ್ದರು.