ಹೊನ್ನಾವರ: ತಾಲೂಕಿನ ಶ್ರೀಕ್ಷೇತ್ರ ಸುಬ್ರಹ್ಮಣ್ಯ ದೇವಾಲಯದಲ್ಲಿ 12 ಗಂಟೆಗಳ ಕಾಲ ಹಡಿನಬಾಳದ ರಾಗಶ್ರೀ ಸಂಗೀತ ಸಂಸ್ಥೆಯಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸುಬ್ರಹ್ಮಣ್ಯದ ರಾಘವೇಂದ್ರ ಸವೇದ ಸಂಸ್ಕೃತ ಮಹಾವಿದ್ಯಾಲಯದ ಸಹಯೋಗದಲ್ಲಿ ಕಾರ್ಯಕ್ರಮ ಜರುಗಿತು. ಇಲ್ಲಿನ ವೇದ ಶಿಷ್ಯರು ರಾಗಶ್ರೀ ಸಂಗೀತ ಶಿಷ್ಯವೃಂದದೊಂದಿಗೆ ಸೇರಿ ತಮ್ಮ ಗುರುಗಳಿಗೆ ಗೌರವ ಸಮರ್ಪಿಸಿದರು.

ನಗರಬಸ್ತಿಕೇರಿ ಸೀಮೆ ಆಂಜನೇಯ ದೇವಸ್ಥಾನದ ಮುಖ್ಯ ಅರ್ಚಕ ಸುರಾಲು ಚಂದ್ರಶೇಖರ ಭಟ್ಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಗೀತ ನಮಗೆ ಶಾಂತಿ, ಸಮಾದಾನ ನೀಡುವುದರ ಒಟ್ಟಿಗೆ ಮಕ್ಕಳಿಗೆ ಸಂಸ್ಕಾರ ನೀಡುತ್ತದೆ. ಮೊಬೈಲ್ ದಾಸರಾದ ಮಕ್ಕಳನ್ನು ಸನ್ಮಾರ್ಗಕ್ಕೆ ತರಲು ಸಂಗೀತವನ್ನು ಪಾಲಕರು ಅಗತ್ಯವಾಗಿ ಕಲಿಸಬೇಕು ಎಂದರು. ನಾದ ವೇದವನ್ನು ಕಲಿಯುತ್ತಿರುವ ಈ ನೂರಾರು ಮಕ್ಕಳನ್ನು ಕಂಡು ನಮ್ಮ ಸಂಸ್ಕೃತಿ ಇನ್ನೊಂದು ತಲೆಮಾರು ನಿಶ್ಚಿತವಾಗಿ ಉಳಿದೀತು ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದೇವಾಲಯದ ಕಾರ್ಯದರ್ಶಿ ಎನ್.ಎಂ. ಭಟ್ಟ, ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರ ಉಳಿಸಿ ಬೆಳೆಸಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿ ಎಂದು ನುಡಿದರು.

ಖ್ಯಾತ ತಬಲಾ ಕಲಾವಿದ, ಯಕ್ಷಗಾನ ಕಲಾರಂಗ ಪ್ರಶಸ್ತಿ ಪುರಸ್ಕೃತ ಜಿ.ಕೆ. ಹೆಗಡೆ ಹರಿಕೇರಿ ಅವರನ್ನು ಗೌರವಿಸಲಾಯಿತು. ಆನಂತರ ರಾಗಶ್ರೀ ಸಂಗೀತ ಗುರು ವಿದ್ವಾನ್ ಶಿವಾನಂದ ಭಟ್ಟ ಅವರ ಗಾಯನಕ್ಕೆ ರಾಗಶ್ರೀ ಸಂಸ್ಥೆಯ ತಬಲಾ ಗುರು ವಿದ್ವಾನ್ ಎನ್.ಜಿ. ಹೆಗಡೆ ತಬಲಾ ಮತ್ತು ಹರಿಶ್ಚಂದ್ರ ನಾಯ್ಕ ಸಂವಾದಿನಿ ಸಾಥ್‌ ನೀಡಿದರು. ಶಿಷ್ಯರಾದ ವಿನಾಯಕ ಭಟ್ಟ, ಸಂಗೀತಾ ನಾಯ್ಕ, ಭಾಗ್ಯಲಕ್ಷ್ಮೀ ಭಟ್ಟ, ಪ್ರಸನ್ನ ಭಟ್ಟ, ಯೋಗಾನಂದ ಭಟ್ಟ, ಪ್ರದೀಪ್ ಕೋಟೆಮನೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಸುಮಾರು 12 ಗಂಟೆಗಳ ಕಾರ್ಯಕ್ರಮ ನಡೆದು ಗಾಯನ, ವಾದನ, ನಾದವೇದಗಳನ್ನು ಶ್ರೀ ಸುಬ್ರಹ್ಮಣ್ಯನಿಗೆ ಸಮರ್ಪಿಸಲಾಯಿತು.