ಸಾರಾಂಶ
ಚಿಕ್ಕಮಗಳೂರು: ಸಂಗೀತ ಮತ್ತು ಸಾಹಿತ್ಯ ನಮ್ಮ ಸಮಾಜದ ಆತ್ಮ. ಅದಿಲ್ಲದಿದ್ದರೆ ಸಮಾಜದ ಸ್ವಾಸ್ಥ್ಯ ಸಮರ್ಪಕವಾಗಿ ಇರಲು ಸಾಧ್ಯವಿಲ್ಲ ಎಂದು ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಟಿ. ಜಯದೇವ ಹೇಳಿದರು.ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ, ಲಯನ್ಸ್ ಸಂಸ್ಥೆ ಹಾಗೂ ಮಲೆನಾಡು ವಿದ್ಯಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಸಂಜೆ ನಗರದ ಎಂಇಎಸ್ ಕಾಲೇಜಿನಲ್ಲಿ ಸಾಹಸಸಿಂಹ, ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ಅವರ 75ನೇ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿನಯದ ಚಲನಚಿತ್ರ ಗೀತೆಗಳ ‘ನನ್ನ ಹಾಡು ನನ್ನದು’ ಶೀರ್ಷಿಕೆ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅವುಗಳಲ್ಲಿ ಬಹಳಷ್ಟು ಬಗೆಯ ಪ್ರಾಕಾರಗಳಿದ್ದು, ಒಬ್ಬೊಬ್ಬರಿಗೆ ಒಂದೊಂದು ಬಗೆಯ ಸಂಗೀತ ಪ್ರಕಾರದಲ್ಲಿ ಅಭಿರುಚಿ ಇರ ಬಹುದು. ಆದರೆ, ಸಂಗೀತದ ಆಸಕ್ತಿ ಇಲ್ಲದೇ ಇರುವವರು ಯಾರೂ ಇಲ್ಲ. ಸಂಗೀತ ಮನಸ್ಸಿಗೆ ಮುದ ನೀಡುತ್ತದೆ. ಕಿವಿಗೆ ಇಂಪು ಕೊಡುತ್ತದೆ. ಸಂಗೀತ ಕೇಳುತ್ತಾ ಹೋದಂತೆ ಮತ್ತಷ್ಟು ಕೇಳಬೇಕೆನಿಸುತ್ತದೆ. ನಾವು ಬದುಕಿನ ಜಂಜಾಟದಲ್ಲಿ ತೊಳ ಲಾಡಿದ ಸಂದರ್ಭ ಅವುಗಳಿಂದ ದೂರ ಸರಿಯಲು ಮುಂದಾಗುತ್ತೇವೆ. ಅದು ಮೌನವೇ ಆಗಿರಬಹುದು. ಸಂಗೀತವೆಂದರೆ ಬರೀ ಶಬ್ದ ಮಾತ್ರವಲ್ಲ, ಮೌನದಲ್ಲಿರುವ ನಿಶ್ಯಬ್ದವೂ ಕೂಡ ಒಂದು ಬಗೆಯ ಸಂಗೀತವೇ ಆಗಿದೆ. ಆ ನಿಶ್ಯಬ್ದದ ಶಬ್ದ ನಾವು ಆಲಿಸಿದಲ್ಲಿ ಸಹ ನಮಗದು ಬಹಳ ಖುಷಿ ಕೊಡುತ್ತದೆ ಎಂದು ಹೇಳಿದರು.
ಕಾಫಿ ಬೆಳೆಗಾರ ಟಿ.ಎಸ್.ರವಿಶಂಕರ್ ಮಾತನಾಡಿ, ಸಂಗೀತವೆಂದರೆ ಮನಸ್ಸಿಗೆ ನೆಮ್ಮದಿ ಕೊಡುವ ಮಾಧ್ಯಮ. ಅದನ್ನು ಎಂ.ಎಸ್.ಸುಧೀರ್ ನೇತೃತ್ವದ ತಂಡ ಅತ್ಯಂತ ಶಿಸ್ತುಬದ್ಧವಾಗಿ ನಡೆಸುತ್ತಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕ್ ದೊಡ್ಡಯ್ಯ ಮಾತನಾಡಿ, ಡಾ.ವಿಷ್ಣು ಅತ್ಯುತ್ತಮ ನಟ ರಾಗಿದ್ದು, ತಾವು ಅಭಿನಯಿಸುತ್ತಿದ್ದ ಪಾತ್ರಗಳಿಗೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳುತ್ತಿದ್ದರು. ಆಪ್ತರಕ್ಷಕ, ಮಲಯ ಮಾರುತ, ಬಂಧನ ಇತ್ಯಾದಿ ಚಿತ್ರಗಳು ಅವರ ಮನೋಜ್ಞ ಅಭಿನಯಕ್ಕೆ ಸಾಕ್ಷಿ ಎಂದರು.ಲಯನ್ಸ್ ಸಂಸ್ಥೆ ಅಧ್ಯಕ್ಷ ಸಿ.ಎನ್.ಕುಮಾರ್ ಮಾತನಾಡಿದರು. ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಸುಧೀರ್ ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಿಸಿದ ರೂಪಾ ನಾಯ್ಕ್ ವಂದಿಸಿದರು. ಗಾಯಕ ಎಂ.ಎಸ್.ಸುಧೀರ್ ಸಾರಥ್ಯದಲ್ಲಿ ಹಾಸನದ ಚೇತನ್ರಾಮ್, ಶ್ರೀಕಾಂತ್, ಅನುಷಾ, ಚೈತನ್ಯ, ಪೃಥ್ವಿಶ್ರೀ, ಮೇಘ ಹಾಗೂ ಅದ್ವಿತ್ ದೇಶ್ ಇವರುಗಳು ಡಾ.ವಿಷ್ಣುವರ್ಧನ್ ಅಭಿನಯದ ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಿ ಕೇಳುಗರಿಗೆ ನಾದಸುಧೆ ಉಣಿಸಿದರು.
15 ಕೆಸಿಕೆಎಂ 3ಚಿಕ್ಕಮಗಳೂರಿನ ಎಂಇಎಸ್ ಸಭಾಂಗಣದಲ್ಲಿ ಭಾನುವಾರ ಸಂಜೆ ನಡೆದ ಪೂರ್ವಿ ಗಾನಯಾನ 111 ನೇ ಸರಣಿಯ ಗಾಯನ ಕಾರ್ಯಕ್ರಮವನ್ನು ಎ.ಐ.ಟಿ. ಕಾಲೇಜಿನ ಪ್ರಾಂಶುಪಾಲರಾದ ಡಾ. ಸಿ.ಟಿ. ಜಯದೇವ ಉದ್ಘಾಟಿಸಿದರು.