ಸಾರಾಂಶ
ಮೈಸೂರು: ಮಂಗಳವಾರ ನಿಧನರಾದ ಸರೋದ್ ವಾದಕ, ಪದ್ಮಶ್ರೀ ಪಂಡಿತ್ ರಾಜೀವ್ ತಾರಾನಾಥ್ ಅವರ ಅಂತ್ಯಕ್ರಿಯೆ ನಗರದ ಚಾಮುಂಡಿಬೆಟ್ಟದ ತಪ್ಪಲಿನ ಅನಿಲ ಚಿತಾಗಾರದಲ್ಲಿ ಬುಧವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೇರಿ ಹಲವು ಗಣ್ಯರು ತಾರಾನಾಥ್ರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.ತಮ್ಮ ಸಂಗೀತದ ಮೂಲಕ ಕೋಟ್ಯಂತರ ಮಂದಿಯ ಮನ ಗೆದ್ದಿದ್ದ ರಾಜೀವ್ ತಾರಾನಾಥ್ ಅವರ ಪಾರ್ಥೀವ ಶರೀರವನ್ನು ಕುವೆಂಪುನಗರದ ಪಂಚಮಂತ್ರ ರಸ್ತೆಯ ಅವರ ನಿವಾಸದಲ್ಲಿ ಇರಿಸಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಬುಧವಾರ ಮೃತದೇಹವನ್ನು ಅವರ ನಿವಾಸದಿಂದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಹರಿಶ್ಚಂದ್ರಘಾಟ್ ಅನಿಲ ಚಿತಾಗಾರಕ್ಕೆ ತರಲಾಯಿತು. ನಂತರ, ಜಿಲ್ಲಾಡಳಿತದಿಂದ ಸರ್ಕಾರಿ ಗೌರವ ಸಲ್ಲಿಸಲಾಯಿತು. ಶಸ್ತ್ರಸಜ್ಜಿತ ಪೊಲೀಸರು ರಾಷ್ಟ್ರಗೀತೆ ನುಡಿಸುತ್ತಿದ್ದಂತೆ ಮೂರು ಸುತ್ತು ಗುಂಡು ಹಾರಿಸಲಾಯಿತು. ಒಂದು ನಿಮಿಷ ಮೌನ ಆಚರಿಸುವ ಮೂಲಕ ಗೌರವ ವಂದನೆ ಸಲ್ಲಿಸಿ, ಬಳಿಕ, ರಾಷ್ಟ್ರಧ್ವಜವನ್ನು ಪಡೆದುಕೊಂಡು ಮೃತದೇಹವನ್ನು ಕುಟುಂಬದವರಿಗೆ ಅಂತ್ಯಸಂಸ್ಕಾರಕ್ಕೆ ಒಪ್ಪಿಸಲಾಯಿತು. ಇದಾದ ಬಳಿಕ ಕುಟುಂಬದವರು ಪಾರ್ಥಿವ ಶರೀರವನ್ನು ಚಿತಾಗಾರದಲ್ಲಿ ಇರಿಸಿ ಅಗ್ನಿಸ್ಪರ್ಶ ಮಾಡಿದರು.
ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆದರೂ ಯಾವುದೇ ಮೆರವಣಿಗೆ ಇರಲಿಲ್ಲ. ಅವರ ಇಚ್ಛೆಯಂತೆ ಮೃತದೇಹದ ಮೆರವಣಿಗೆ ಮಾಡದೆ ನೇರವಾಗಿ ಚಿತಾಗಾರಕ್ಕೆ ತಂದು ಅಗ್ನಿ ಸ್ಪರ್ಶ ಮಾಡಲಾಯಿತು.