ಮುಸ್ಲಿಂ ಬಾಂಧವರಿಂದ ಕಿಕ್ಕೇರಿಯಲ್ಲಿ ಸಂಭ್ರಮದಿಂದ ಬಕ್ರೀದ್ ಆಚರಣೆ

| Published : Jun 08 2025, 02:12 AM IST

ಸಾರಾಂಶ

ಧರ್ಮಗುರು ಫಕ್ರಿಯಾ ಆಲಂ ಅವರ ಧಾರ್ಮಿಕ ಪಠಣೆಯನ್ನು ಆಲಿಸಿದರು. ತಮ್ಮ ಕೈಲಾದಷ್ಟು ದಾನ- ಧರ್ಮ ಮಾಡಿದರು.

ಕಿಕ್ಕೇರಿ: ಪಟ್ಟಣದಲ್ಲಿ ಮುಸ್ಲಿಮರು ಅಲ್ಲಾನಿಗೆ ಪ್ರಾರ್ಥನೆ ಸಲ್ಲಿಸಿ, ಸಂಭ್ರಮ ಸಡಗರದಿಂದ ಬಕ್ರೀದ್ (ಈದ್‌ ಉಲ್‌ ಅದ್‌ಹಾ) ಹಬ್ಬವನ್ನು ಶನಿವಾರ ಆಚರಣೆ ಮಾಡಿದರು.

ಜಾಮೀಯಾ ಮಸೀದಿಯಲ್ಲಿ ಒಂದೆಡೆ ಸೇರಿ ಅಲ್ಲಾನಿಗೆ ಮೊದಲ ಪ್ರಾರ್ಥನೆ ಅರ್ಪಿಸಿದರು. ನಂತರ ಧರ್ಮಗುರು ಅಣತಿಯಂತೆ ಸಾಂಪ್ರದಾಯಿಕವಾಗಿ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಸಾಗಿದರು. ಅಲ್ಲಾನ ಪ್ರಾರ್ಥಿಸುತ್ತ ಕೋಟೆ ಗಣಪತಿ, ಆಂಜನೇಯ ಬೀದಿ, ಅಂಗಡಿ ಬೀದಿ ಹಾಗೂ ಮಂದಗೆರೆ ರಸ್ತೆಯಲ್ಲಿ ಸಾಗಿ ಅಂತಿಮವಾಗಿ ಈದ್ಗಾ ಮೈದಾನದಲ್ಲಿ ಸೇರಿದರು.

ಧರ್ಮಗುರು ಫಕ್ರಿಯಾ ಆಲಂ ಅವರ ಧಾರ್ಮಿಕ ಪಠಣೆಯನ್ನು ಆಲಿಸಿದರು. ತಮ್ಮ ಕೈಲಾದಷ್ಟು ದಾನ- ಧರ್ಮ ಮಾಡಿದರು. ತ್ಯಾಗ, ಬಲಿದಾನ, ಆಹಾರ ದಾನದ ಸಂಕೇತದ ಹಬ್ಬದಲ್ಲಿ ಎಲ್ಲರೂ ಮಾನವೀಯತೆಗೆ ಮೊದಲ ಆದ್ಯತೆ ನೀಡಿ, ಪ್ರವಾದಿ ಇಬ್ರಾಹಿಂ ಅವರ ಬಲಿದಾನದ ಸ್ಮರಣೆ ಮಾಡಿ ಅಶಕ್ತರಿಗೆ ಸಹಾಯ ಮಾಡಿ ಎಂದು ಧಾರ್ಮಿಕ ಸಂದೇಶ ಸಾರಿದರು.

ಮಕ್ಕಳು, ಹಿರಿಯರು ಹೊಸಬಟ್ಟೆ ಧರಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಆಲಿಂಗನದೊಂದಿಗೆ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಅನೆಗೊಳ, ಮಂದಗೆರೆ ಗ್ರಾಮದಲ್ಲಿಯೂ ಹಬ್ಬದ ಸಂಭ್ರಮವನ್ನು ಆಚರಿಸಲಾಯಿತು.