ಸಾರಾಂಶ
ಉಡುಪಿ-ಮಂಗಳೂರು ನಡುವೆ ಸಂಚಾರ ನಡೆಸುವ ಖಾಸಗಿ ಎಕ್ಸ್ಪ್ರೆಸ್, ಸರ್ವಿಸ್, ಸರ್ಕಾರಿ ಮತ್ತು ಇತರ ಬಸ್ಗಳ ಸುಮಾರು 450 ಮಂದಿಗೆ ಬಕ್ರೀದ್ ಸಂಭ್ರಮದ ಅಂಗವಾಗಿ ಈ ತಂಡ ಬಿರಿಯಾನಿಯನ್ನು ವಿತರಿಸಿತು.
ಕನ್ನಡಪ್ರಭ ವಾರ್ತೆ ಉಡುಪಿ
ಸದಾ ಒಂದಿಲ್ಲೊಂದು ವಿವಾದ, ಗಲಾಟೆ ಮತ್ತು ಅಪಘಾತಗಳ ಕಾರಣದಿಂದಾಗಿ ಸುದ್ದಿಯಲ್ಲಿರುತ್ತಿದ್ದ ಉಡುಪಿ, ಕರಾವಳಿಯ ಖಾಸಗಿ ಬಸ್ ಚಾಲಕ, ನಿರ್ವಾಹಕರು ಈ ಬಾರಿ ವಿಶೇಷ ಕಾರಣಕ್ಕಾಗಿ ಮತ್ತೆ ಸುದ್ದಿಯಲ್ಲಿದ್ದಾರೆ.ಜೂನ್ 17ರಂದು ಕರಾವಳಿಯಾದ್ಯಂತ ಮುಸ್ಲಿಂ ಬಾಂಧವರು ಸಂಭ್ರಮದಿಂದ ಪ್ರೀತಿ, ತ್ಯಾಗ, ಬಲಿದಾನದ ಸಂಕೇತವಾಗಿ ಬಕ್ರೀದ್ ಹಬ್ಬ ಆಚರಿಸಿದರು. ಈ ನಡುವೆ ಉಚ್ಚಿಲದ ಖಾಸಗಿ ಬಸ್ನ ಮುಸ್ಲಿಂ ಚಾಲಕ, ನಿರ್ವಾಹಕರು ತಮ್ಮ ಸಹೋದ್ಯೋಗಿ ಬಸ್ ಚಾಲಕ, ನಿರ್ವಾಹಕರಿಗೆ ಬಿರಿಯಾನಿ ಹಂಚಿ ಸಂಭ್ರಮಪಟ್ಟರು.
ಉಡುಪಿ-ಮಂಗಳೂರು ನಡುವೆ ಸಂಚಾರ ನಡೆಸುವ ಖಾಸಗಿ ಎಕ್ಸ್ಪ್ರೆಸ್, ಸರ್ವಿಸ್, ಸರ್ಕಾರಿ ಮತ್ತು ಇತರ ಬಸ್ಗಳ ಸುಮಾರು 450 ಮಂದಿಗೆ ಬಕ್ರೀದ್ ಸಂಭ್ರಮದ ಅಂಗವಾಗಿ ಈ ತಂಡ ಬಿರಿಯಾನಿಯನ್ನು ವಿತರಿಸಿತು.ಇದೇ ಮಾರ್ಗದಲ್ಲಿ ಸಂಚಾರ ನಡೆಸುವ ಖಾಸಗಿ ಬಸ್ನ ಸಿಬ್ಬಂದಿಯಾದ ಜಾವೇದ್, ಶನವಾಜ್, ನಾಸಿರ್, ನಿಜಾಮ್, ಮೌಜಿ, ಮುನ್ನ ಅವರ ತಂಡದ ಈ ಕಾರ್ಯಕ್ಕೆ ವಿವಿಧ ಬಸ್ನ ಮಾಲಕರು ಮತ್ತು ಇತರ ಸಿಬ್ಬಂದಿ ಕೂಡ ಸಾಥ್ ನೀಡಿದ್ದರು.
‘ನಾವೆಲ್ಲಾ ಒಂದೇ ವೃತ್ತಿಯನ್ನು ಮಾಡಿಕೊಂಡಿದ್ದು, ಬಕ್ರೀದ್ ಹಬ್ಬದ ಸಂಭ್ರಮವನ್ನು ಇನ್ನಷ್ಟು ಸಂತುಷ್ಟಗೊಳಿಸಲು ನಾವು ಬಿರಿಯಾನಿ ನೀಡಿದ್ದೇವೆ’ ಎನ್ನುತ್ತಾರೆ ತಂಡದ ಸದಸ್ಯ ಜಾವೇದ್.ಸದಾ ವಿವಿಧ ಕೋಮು ಸೂಕ್ಷ್ಮ ವಿಷಯಗಳಿಗೆ ಸುದ್ದಿಯಲ್ಲಿರುತ್ತಿದ್ದ ಕರಾವಳಿಯಲ್ಲಿ ಇಂತಹ ಯುವಕರ ಸೌಹಾರ್ದದ ನಡೆಗಳು, ಸೌಹಾರ್ಯದತೆಯ ಹೊಸ ಹುರುಪನ್ನು ಮೂಡಿಸಿವೆ.