ಕನ್ನಡಪ್ರಭ ವಾರ್ತೆ ಬೆಳಗಾವಿ ನಾಮದೇವ ಸಿಂಪಿ ಸಮುದಾಯಕ್ಕೆ ಸೇರಿದ ವ್ಯಕ್ತಿಯ ಜಾತಿ ಪ್ರಮಾಣ ಪತ್ರದಲ್ಲಿ ತಪ್ಪಾಗಿ ಮುಸ್ಲಿಂ ಎಂದು ನಮೂದಿಸಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನಾಮದೇವ ದೈವಿಕ ಸಂಸ್ಥೆಯಿಂದ ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಬೆಳಗಾವಿ
ನಾಮದೇವ ಸಿಂಪಿ ಸಮುದಾಯಕ್ಕೆ ಸೇರಿದ ವ್ಯಕ್ತಿಯ ಜಾತಿ ಪ್ರಮಾಣ ಪತ್ರದಲ್ಲಿ ತಪ್ಪಾಗಿ ಮುಸ್ಲಿಂ ಎಂದು ನಮೂದಿಸಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನಾಮದೇವ ದೈವಿಕ ಸಂಸ್ಥೆಯಿಂದ ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.ನಾಮದೇವ ಸಿಂಪಿ ಸಮುದಾಯದ ಸದಸ್ಯ ಅದ್ವಿಕ್ ಸುಜಿತ್ ಖಟಾವಕರ ಜಾತಿ ಪ್ರಮಾಣ ಪತ್ರಕ್ಕಾಗಿ ಇತ್ತೀಚೆಗೆ ಸಂಬಂಧಪಟ್ಟ ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ, ಅವರ ಮೂಲ ಸಮುದಾಯ ಹಾಗೂ ಧಾರ್ಮಿಕ ಗುರುತಿಗೆ ವಿರುದ್ಧವಾಗಿ ತಪ್ಪು ಮಾಹಿತಿ ದಾಖಲಿಸಿದ್ದು ಅತ್ಯಂತ ವಿಷಾದನೀಯ ಸಂಗತಿ. ಅಲ್ಲದೆ ಇದು ವ್ಯಕ್ತಿಯ ಸಾಮಾಜಿಕ ಅಸ್ತಿತ್ವ, ಸಮುದಾಯದ ಗೌರವ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡುವ ಗಂಭೀರ ಆಡಳಿತಾತ್ಮಕ ಲೋಪವಾಗಿದೆ ಎಂದು ಆರೋಪಿಸಿದರು.
ಜಾತಿ ಪ್ರಮಾಣ ಪತ್ರ ಸಾಮಾನ್ಯ ದಾಖಲೆಯಲ್ಲ. ಶಿಕ್ಷಣ, ಉದ್ಯೋಗ, ಸರ್ಕಾರಿ ಸೌಲಭ್ಯಗಳು, ಸಾಮಾಜಿಕ ಮಾನ್ಯತೆ ಹಾಗೂ ಭವಿಷ್ಯದ ಅನೇಕ ಅವಕಾಶಗಳಿಗೆ ಆಧಾರವಾಗುವ ಮಹತ್ವದ ದಾಖಲೆ. ಇಂತಹ ದಾಖಲೆಗಳಲ್ಲಿ ನಡೆಯುವ ತಪ್ಪುಗಳು ವ್ಯಕ್ತಿಯ ಬದುಕಿನ ಮೇಲೆಯೇ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ. ಸರ್ಕಾರಿ ಕಚೇರಿಗಳಲ್ಲಿ ದಾಖಲೆ ಪರಿಶೀಲನೆ ಹಾಗೂ ಮಾಹಿತಿ ದಾಖಲಾತಿ ಅತ್ಯಂತ ಜಾಗ್ರತೆಯಿಂದ ನಡೆಯಬೇಕಾದ ಸಂದರ್ಭದಲ್ಲಿ ಇಂತಹ ನಿರ್ಲಕ್ಷ್ಯಗಳು ಸಾರ್ವಜನಿಕರಿಗೆ ಆಡಳಿತದ ಮೇಲೆ ಅಪನಂಬಿಕೆ ಉಂಟು ಮಾಡುತ್ತವೆ. ಹಾಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.ಸಂಬಂಧಪಟ್ಟ ವ್ಯಕ್ತಿಯ ಜಾತಿ ಪ್ರಮಾಣ ಪತ್ರದಲ್ಲಿರುವ ತಪ್ಪು ಮಾಹಿತಿಯನ್ನು ತಕ್ಷಣವೇ ಸರಿಪಡಿಸಿ ಸರಿಯಾದ ಪ್ರಮಾಣ ಪತ್ರ ನೀಡಬೇಕು. ಜಾತಿ ಪ್ರಮಾಣ ಪತ್ರ ತಪ್ಪು ಮಾಹಿತಿ ನಮೂದಿಸುವ ಬಗ್ಗೆ ತನಿಖೆಯಾಗಬೇಕು. ಕರ್ತವ್ಯ ನಿರ್ಲಕ್ಷ ತೋರಿದ ಅಧಿಕಾರಿಗಳು ಅಥವಾ ಸಿಬ್ಬಂದಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲಾ ತಾಲೂಕು ಕಚೇರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ನಾಗರಿಕರ ಧಾರ್ಮಿಕ ಹಾಗೂ ಸಾಮಾಜಿಕ ಗುರುತಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆಯಲ್ಲಿ ಹೆಚ್ಚುವರಿ ಜಾಗ್ರತೆ ವಹಿಸುವಂತೆ ಆಡಳಿತಾತ್ಮಕ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ನಾಮದೇವ ಸಿಂಪಿ ಸಮುದಾಯವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.